‘ಮಹಾನ್ ದಾರ್ಶನಿಕ ಬಸವಣ್ಣ’ ಗ್ರಂಥ
ಲೋಕಾರ್ಪಣೆ
ಬೈಲಹೊಂಗಲ -ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ‘ಮಹಾನ್ ದಾರ್ಶನಿಕ ಬಸವಣ್ಣ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಮತ್ತು ಯೋಧರಿಗೆ ಗೌರವ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಆವರಣದಲ್ಲಿ ಸಂಭ್ರಮ ಪ್ರತಿಷ್ಠಾನ ಮತ್ತು ತಾಲೂಕಾ ಕನ್ನಡ ಜಾನಪದ ಪರಿಷತ್ತಿನ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿ ನ ಮಾಜಿ ಜಿಲ್ಲಾಧ್ಯಕ್ಷ ಮೋಹನ ಬಸನಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಗ್ರಂಥ ಲೋಕಾರ್ಪಣೆ ಗೊಳಿಸಿದ ಬೈಲಹೊಂಗಲದ ನಿವೃತ್ತ ಯೋಧ ಗುರುನಾಥ ಶಿದ್ದಲಿಂಗಪ್ಪ ಮುತವಾಡ ಅವರು ಮಾತನಾಡಿ, ಕೇಂದ್ರ ಬಸವ ಸಮಿತಿ ಪ್ರಕಟಿಸಿರುವ ಮಹಾನ್ ದಾರ್ಶನಿಕ ಬಸವಣ್ಣ ಗ್ರಂಥ ಬಸವಣ್ಣನವರ ಜನನ, ಕಪ್ಪಡಿ ಸಂಗಮದಲ್ಲಿ ಬಸವಣ್ಣನವರ ವಿದ್ಯಾಭ್ಯಾಸ, ಕಾಯಕ ಜೀವನ, ಕಲ್ಯಾಣದಲ್ಲಿ ಬಸವಣ್ಣನವರ ಸಾಧನೆಗಳು, ಬಸವ ಮಹಾಮನೆ, ಪ್ರಸಾದ- ದಾಸೋಹ, ಅನುಭವ ಮಂಟಪದ ಸ್ಥಾಪನೆ, ಬಸವ ಪೂರ್ವದ ಪರಿಸ್ಥಿತಿ ಹಾಗೂ ನಂತರದ ಸಾಮಾಜಿಕ, ಆರ್ಥಿಕ, ಸಾಹಿತ್ಯಕ, ಶೈಕ್ಷಣಿಕ ಪರಿಸ್ಥಿತಿ ವಿವರದೊಡನೆ ಬಸವಣ್ಣನವರ ಘನ ವ್ಯಕ್ತಿತ್ವ ಹಾಗೂ ಜೀವನದ ಘಟನೆಗಳನ್ನು ಒಳಗೊಂಡು ಜನರಿಗೆ ಒಳ್ಳೆಯ ಸಂದೇಶಗಳನ್ನು ತಲುಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಧಾರವಾಡ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಮುಖಂಡರಾದ, ಉದ್ಯಮಿ ಮೈಲಾರ ವೀರುಪಾಕ್ಷಪ್ಪ ಹಡಪದ ಅವರು ಮಾತನಾಡಿ, ಸಕಲ ಜೀವಾತ್ಮರಿಗೆ ಲೇಸನೆ ಬಯಸಿದ ಮಹಾನ್ ಮಾನವತಾವಾದಿ, ಕಲ್ಯಾಣಕ್ಕಾಗಿ ಹಗಲಿಗಳು ಶ್ರಮಿಸಿದ ವಿಶ್ವದ ಯುಗಪುರುಷ ಬಸವಣ್ಣನವರು ಮಹಾ ಮಾನವತಾವಾದಿ, ಸ್ವತಂತ್ರ ವಿಚಾರವಾದಿ, ಸಮತಾವಾದಿ, ದಲಿತೋದ್ಧಾರಕ, ಶ್ರೇಷ್ಠ ಅರ್ಥಶಾಸ್ತ್ರಜ್ಞ, ಸ್ತ್ರೀ ಕುಲೋದ್ಧಾರಕ, ಪ್ರಾಮಾಣಿಕ ಬದುಕಿನ ಪಾರದರ್ಶಕ ವ್ಯಕ್ತಿತ್ವದ ಮಹಾನ್ ದಾರ್ಶನಿಕರಾಗಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಇಂತಹ ಕಲ್ಪನೆ ಬಿತ್ತುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಕನ್ನಡ ಜಾನಪದ ಪರಿಷತ್ತಿನ ಮಾಧ್ಯಮ ಕಾರ್ಯದರ್ಶಿ ಮಹಾಂತೇಶ ಮಲ್ಲಪ್ಪ ರಾಜಗೋಳಿ ಅವರು ಮಾತನಾಡಿ, ಬಸವ ಸಮಿತಿಯು ಈಗಾಗಲೇ 50 ಭಾಷೆಗಳಲ್ಲಿ ವಚನಗಳನ್ನು ಭಾಷಾಂತರಿಸಿದೆ. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ, ವಚನಕಾರರು ಮತ್ತು ವ್ಯಕ್ತಿತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಮೋಹನ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತೀಯ ಸೈನ್ಯದಲ್ಲಿ ಸುಮಾರು 24 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಯೋಧ ಗುರುನಾಥ ಮುತವಾಡ ಭವಿಷ್ಯದಲ್ಲೂ ಅವರ ಜೀವನ -ಬದುಕು ಸದಾ ಕ್ರಿಯಾಶೀಲತೆಯಿಂದ ಕೂಡಿರಲಿ ಎಂದರು. ಶಂಕರಗೌಡ ಪಾಟೀಲ, ಪಾರ್ವತೆವ್ವಾ ಮುತವಾಡ, ಆಶಾ ಕಾರ್ಯಕರ್ತೆ ಲಕ್ಶ್ಮೀ ಹಡಪದ, ಕೆಂಚಮ್ಮ ಹಡಪದ, ಸಿದ್ದಾರ್ಥ್ ಮುತವಾಡ, ಶ್ರೀಶೈಲ ಮುತವಾಡ, ಪ್ರಕಾಶ ಮುತವಾಡ, ಫಕ್ಕೀರಪ್ಪ ಹಡಪಡ, ದೀಪಕ ಮುತವಾಡ, ಮತ್ತಿತರರು ಉಪಸ್ಥಿತರಿದ್ದರು. ಜಯಶ್ರೀ ಹಡಪದ ಸ್ವಾಗತಿಸಿದರು, ಪುಷ್ಪಾ ಮುತವಾಡ ನಿರೂಪಿಸಿದರು. ಶರತ ಮುತವಾಡ ವಂದಿಸಿದರು.