ಮೂಡಲಗಿ- ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸುಮಾರು 200 ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಮತ್ತೊಂದು ಅವಧಿಯ ಸರ್ಕಾರ ರಚನೆಯ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಜನರನ್ನು ನೇರವಾಗಿ ತಲುಪಿವೆ. ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಪಕ್ಷವು ಅನೇಕ ಹೊಸ ಯೋಜನೆಗಳನ್ನು ನೀಡುವಲ್ಲಿ ಸಫಲತೆ ಕಂಡಿದ್ದೇವೆ. ಬಿಹಾರದಲ್ಲಿ ಮತ್ತೊಂದು ಅವಧಿಗೆ ನಾವು ಸರ್ಕಾರವನ್ನು ರಚಿಸುತ್ತೇವೆ. ಎನ್ಡಿಎ ಮೈತ್ರಿಕೂಟದ ಅನೇಕ ಜನಪರ ಕಾರ್ಯಗಳು ಮತದಾರರನ್ನು ಸೆಳೆದಿದ್ದು, ಮಹಾಘಟ್ಬಂಧನ ಎಲ್ಲಿದೆ ಅಂತ ಹುಡುಕಬೇಕಾಗಿದೆ.
ಈ ಚುನಾವಣೆಯಲ್ಲಿ ಅದು ಸೋತು ಸುಣ್ಣವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಹಕಾರ ಮತ್ತು ಗೃಹ ಸಚಿವ ಅಮಿತ್ ಷಾ ಮತ್ತು ನಿತೀಶ್ ಕುಮಾರ ಅವರ ಸಾರಥ್ಯದಲ್ಲಿ ಬಿಹಾರದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಿಹಾರದ ಇತಿಹಾಸದಲ್ಲಿ ಇದೊಂದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

