ಕನ್ನಡ ಸಾಹಿತ್ಯ ಪರಿಷತ್ತು, ಮೂಡಲಗಿ ಘಟಕ ಹಾಗೂ ಶ್ರೀ ಕೆ. ಎಚ್. ಸೋನವಾಲ್ಕರ ಸರಕಾರಿ ಪ್ರೌಢಶಾಲೆ, ಮೂಡಲಗಿ ಇವುಗಳ ಸಹಯೋಗದಲ್ಲಿ, ಸರಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ, “ನಾಡಗೀತೆ ಶತಮಾನೋತ್ಸವ ಸಂಭ್ರಮ ” ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ಗೀತಾ ಹಿರೇಮಠರವರು ಮಾತನಾಡುತ್ತಾ, ನಮ್ಮೆಲ್ಲರ ಮನದಲ್ಲಿ ಕನ್ನಡದ ಕಲ್ಪನೆಯನ್ನು, ನಾಡಿನ ಪ್ರೀತಿಯನ್ನು ಬಿತ್ತುವ ಪವಿತ್ರ ಮಂತ್ರವೇ ನಮ್ಮ ನಾಡಗೀತೆ.ರಾಷ್ಟಕವಿ ಕುವೆಂಪುರವರಿಂದ ರಚಿತವಾದ “ಜಯ ಭಾರತ ಜನನಿಯ ತನುಜಾತೆ ” ಪಾವನ ಗೀತೆಯಾಗಿ ರಚನೆಯಾಗಿ ಈ ವರ್ಷಕ್ಕೆ ನೂರು ವರ್ಷಗಳು ಸಂದಿವೆ. ೧೯೨೪-೨೫ರ ಸುಮಾರಿಗೆ, ಕುವೆಂಪುರವರು ಈ ಕವನವನ್ನು ಕೇವಲ ಕವಿತೆಯಾಗಿ ಬರೆಯಲಿಲ್ಲ. ಅವರು ಕನ್ನಡ ನಾಡಿನ ಆತ್ಮವನ್ನು, ಅದರ ಇತಿಹಾಸವನ್ನು, ಇಲ್ಲಿಯ ನೆಲ, ಜಲ, ಸಂಸ್ಕೃತಿಯ ವೈವಿದ್ಯತೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟರು ಎಂದು ಹೇಳಿದರು.
ಶಾಲೆಯ ಕನ್ನಡ ಶಿಕ್ಷಕರಾದ ಜಿ, ಎಸ್, ಮಾದರರವರು ಮಾತನಾಡುತ್ತಾ, ಇದೊಂದು ಕೇವಲ ಗೀತೆಯಲ್ಲ, ನಮ್ಮ ನಾಡಿನ “ಸಾಂಸ್ಕೃತಿಕ ಸಂವಿಧಾನ,” ೨೦೦೪ರಲ್ಲಿ ಈ ಗೀತೆಯನ್ನು ಅಧಿಕೃತವಾಗಿ ನಾಡಗೀತೆಯೆಂದು ಘೋಷಿಸಿದಾಗ, ನಮ್ಮ ಹೆಮ್ಮೆ ಇಮ್ಮಡಿಯಾಯಿತು. ಶತಮಾನದ ಸಂಭ್ರಮದ ಈ ಹೊತ್ತಿನಲ್ಲಿ, ಕನ್ನಡವನ್ನು ಉಸಿರಾಗಿಸಿದ ರಾಷ್ಟ್ರಕವಿ ಕುವೆಂಪುರವರಿಗೆ, ಈ ಮಣ್ಣನ್ನು ಕಟ್ಟಿದ ಎಲ್ಲ ಮಹನೀಯರಿಗೆ ಮತ್ತು ಕನ್ನಡದ ಹಿರಿಮೆಯನ್ನು ಉಳಿಸಿಕೊಂಡು ಬರುತ್ತಿರುವ ಸಮಸ್ತ ಕನ್ನಡಿಗರಿಗೆ ನನ್ನ ಗೌರವ ಪೂರ್ವಕ ನಮನಗಳು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ, ಸಾ, ಪ ಅಧ್ಯಕ್ಷರು ಡಾ, ಸಂಜಯ. ಅ. ಶಿಂದಿಹಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿ, ವಾ ಯ್, ಶಿವಾಪೂರ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸುರೇಶ ಲಂಕೆಪ್ಪನವರ, ಸ್ವಾಗತ ಎ, ಎಚ್, ಒಂಟಗೂಡಿ, ವಂದನಾರ್ಪಣೆ ಶಾಲೆಯ ಶಿಕ್ಷಕ ಪಾಟೀಲ ಹಾಗೂ ನಿರೂಪಣೆಯನ್ನು ಕರಿಬಸವರಾಜರವರು ನಿರ್ವಹಿಸಿದರು.

