ಮೂಡಲಗಿ : ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಬದಲಾಗಿ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಅಂತಹ ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದು ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸೋಮವಾರದಂದು ತಾಲೂಕಿನ ಹಳ್ಳೂರ ಗ್ರಾಮದ ಬಸವ ನಗರ ತೋಟದಲ್ಲಿ ಜರುಗಿದ, ಧರಿದೇವರ ಹಾಗೂ ಜಕ್ಕಮ್ಮದೇವಿಯ ನೂತನ ಕಟ್ಟಡ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜವನ್ನು ಮಾದರಿಯಾಗಿ ತೆಗೆದುಕೊಂಡು ಬದುಕಬೇಕಾದ ಅವಶ್ಯಕತೆ ಇಲ್ಲ. ಬದಲಾಗಿ ಪಾಲಕರನ್ನೇ ಮಾದರಿಯಾಗಿ ಸ್ವೀಕರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಓದಿ ಅಂಕ ಗಳಿಸುವುದಕ್ಕಿಂತ ಸಮಾಜದಲ್ಲಿ ನಡೆ-ನುಡಿಯ ಮೂಲಕ ಅಂಕಗಳಿಸುವುದು ಮುಖ್ಯ ಎಂದು ಹೇಳಿದರು.
ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗಿ ಮೊಬೈಲ್ ಸಂಸ್ಕೃತಿ ಹೆಚ್ಚುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದೆ. ಹೀಗಾಗಿ, ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದ ಅವರು, ಜಗತ್ತಿನಲ್ಲಿ ಯಾರ ಋಣ ಬೇಕಾದರೂ ತೀರಿಸಬಹುದು, ಆದರೆ ಹೆತ್ತ ತಾಯಿಯ ಋಣ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ. ನಮ್ಮನ್ನು ಹೊತ್ತ, ಹೆತ್ತು,ಸಾಕಿ, ಸಲುಹಿ, ದೊಡ್ಡವರನ್ನಾಗಿ ಮಾಡಿದ ನಮ್ಮ ತಂದೆ ತಾಯೆಂದಿರನ್ನು ಅವರ ಕೊನೆಗಾಲದಲ್ಲಿ ಪ್ರೀತಿ, ವಿಶ್ವಾಸ, ಗೌರವ, ಆದರಾತಿಥ್ಯದಿಂದ ನೋಡಿಕೊಳ್ಳಬೇಕು ಎಂದರು.
ನಮ್ಮ ಸಂಪ್ರದಾಯ ಹಾಗೂ ಆಚಾರಗಳನ್ನು ಬಿಟ್ಟು, ದಾರು ಕುಡಿದು, ಮಟನ್ ತಿಂದು, ದೇವಸ್ಥಾನದಲ್ಲಿರುವ ಮೂರ್ತಿಗಳನ್ನ ವಿಸರ್ಜನೆ ಮಾಡಿ ದೇವಸ್ಥಾನ ಕೆಡವಿ ಎಂದು ಹೇಳುತ್ತಿರುವ ಸ್ವಾಮಿಗಳ ಗ್ಯಾಂಗ್ ಇದ್ದು, ಆ ಗ್ಯಾಂಗಗೆ ಕಳೆದ ಎರಡು ತಿಂಗಳಿಂದ ಬಡಿಗೆ ತಕೊಂಡು ಬೆನ್ನು ಹತ್ತಿದೀನಿ ಎಂದು ಮತ್ತೇ ಸ್ವಾಮೀಜಿಗಳನ್ನ ಟೀಕಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಹುಲಜಂತಿಯ ಮಾಳಿಂಗರಾಯ ಮಹಾರಾಜ, ಹಳ್ಳೂರದ ಸಿದ್ದಾರೂಢ ಮಠದ ಶಿವಾನಂದ ಸ್ವಾಮೀಜಿ, ಜಕನೂರ-ಕುಚನೂರ ಕಮರಿಮಠದ ಸಿದ್ದಲಿಂಗ ದೇವರು, ಲಿಂಗನೂರದ ಶಿವಪುತ್ರ ಸ್ವಾಮೀಜಿ, ಆಲಗೂರದ ಧರಿದೇವರ ಮಠದ ಶಾಂತಮೂರ್ತಿ ಲಕ್ಷ್ಮಣ ಮುತ್ಯಾ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.

