ಮೈಸೂರು – ಪರಿಸರ ಸಂರಕ್ಷಣೆ ಮಾಡದಿದ್ದರೆ ಮಾನವನ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮಕುಮಾರ್ ಅತಂಕ ವ್ಯಕ್ತ ಪಡಿಸಿದರು.
ಮೈಸೂರು ಜಿಲ್ಲೆಯ ಕೆ. ಆರ್. ನಗರದ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಏರ್ಪಡಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದ ಅವರು ನಮ್ಮ ಹಿರಿಯರ ಭವಿಷ್ಯದ ಆಲೋಚನೆ ಫಲವಾಗಿ ನಮಗೆ ಸುಂದರ ಪರಿಸರ ದೊರೆತಿದೆ. ನಾವು ನಮ್ಮ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದರೆ ಭವಿಷ್ಯದ ಪೀಳಿಗೆ ನಮ್ಮನ್ನು ಕ್ಷಮಿಸದು. ಮುಂದಿನ ತಲೆಮಾರಿನ ಸುಖಕರ ಜೀವನಕ್ಕಾಗಿ ಇಂದು ನಾವು ಹಸಿರು ಪರಿಸರ ನಿರ್ಮಾಣ ಮಾಡಬೇಕಿದೆ ಎಂದು ಕಿವಿಮಾತು ನುಡಿದರು.
ನಾವು ಹೆದ್ದಾರಿಗಳ ನಿರ್ಮಾಣಕ್ಕಾಗಿ, ಐಷಾರಾಮಿ ರೆಸಾರ್ಟ್ಗಳ ನಿರ್ಮಾಣಕ್ಕಾಗಿ, ಕೃಷಿ ಉದ್ದೇಶಕ್ಕಾಗಿ, ಮನೆಗಳ ಉಪಕರಣಗಳ ನಿರ್ಮಾಣಕ್ಕಾಗಿ ಪ್ರತಿನಿತ್ಯವೂ ಮರಗಳ ಹನನ ಮಾಡುತ್ತಿದ್ದೇವೆ. ಇದರಿಂದಾಗಿ ಸ್ವಚ್ಛ ಗಾಳಿ, ಶುದ್ಧ ನೀರು, ಅರೋಗ್ಯಕರ ಪರಿಸರ ನಿರ್ನಾಮವಾಗುತ್ತಿದೆ. ಮಾನವರಲ್ಲಿ ಹೃದಯ ಸಂಭಂದಿ ಕಾಯಿಲೆಗಳು, ಶ್ವಾಸ ಕೋಶದ ಕಾಯಿಲೆಗಳು ತೀವ್ರವಾಗುತ್ತಿವೆ. ಮನುಷ್ಯನ ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆ ಆಗುತ್ತಿದ್ದು ಅಪಾರ ಸಂಖ್ಯೆಯ ಜನರು ಸಾವು ನೋವು ಗಳಿಗೆ ಒಳಗಾಗುತ್ತಿದ್ದಾರೆ
ಎಂದು ಪರಿಸರ ನಾಶದ ಬಗ್ಗೆ ಎಚ್ಚರಿಕೆ ನೀಡಿದರು.
ಕಾಡಿನ ವಿನಾಶದಿಂದಾಗಿ ಕಾಡುಪ್ರಾಣಿಗಳಿಗೆ ಆಹಾರ ಸಿಗುತ್ತಿಲ್ಲ. ಇದರಿಂದಾಗಿ ಆನೆಗಳು ಕೃಷಿ ಭೂಮಿಗೆ ಲಗ್ಗೆ ಇಡುತ್ತಿವೆ. ಚಿರತೆಗಳು ಜನವಸತಿ ಪ್ರದೇಶಗಳಿಗೆ ಬಂದು ಸಾಕು ಪ್ರಾಣಿಗಳ ಮೇಲೆ, ಮನುಷ್ಯರ ಮೇಲೆ ಧಾಳಿ ಮಾಡುತ್ತಿವೆ. ಇದಕ್ಕೆಲ್ಲ ಮನುಷ್ಯನ ಸ್ವಾರ್ಥವೇ ಕಾರಣ ಎಂದು ರಾಮಕುಮಾರ್ ವಿವರಿಸಿದರು. ಕಾಡಿನ ನಾಶದಿಂದಗಿ ಅತಿವೃಷ್ಟಿ, ಅನಾವೃಷ್ಟಿ, ಭೂಕುಸಿತ ಉಂಟಾಗಿ ಕೃಷಿ ಚಟುವಟಿಕೆಗಳು ತೊಂದರೆಗೆ ಸಿಲುಕಿವೆ. ಪ್ರತಿಯೊಬ್ಬರು ಈ ಬಗ್ಗೆ ಆಲೋಚಿಸಬೇಕು. ಕಾಡಿನ ವಿನಾಶ ಮಾನವಕುಲದ ವಿನಾಶ ಎಂದು ಅರಿತು ಕಾಡಿನ ನಾಶ ತಪ್ಪಿಸಬೇಕು ಎಂದವರು ಕಿವಿಮಾತು ನುಡಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯಕ್ರಮವಲ್ಲ. ಅದು ಪ್ರತಿ ಒಬ್ಬ ವ್ಯಕ್ತಿಗೆ ಸೇರಿದೆ ಎಂದು ನುಡಿದ ಅವರು ಪ್ರತಿ ಒಬ್ಬರು ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಡಬೇಕು. ತಮ್ಮ ಊರಿನ ಜಾತ್ರೆ, ಹಬ್ಬಗಳ ಸಂದರ್ಭದಲ್ಲಿ ಅದರ ನೆನಪಿನಲ್ಲಿ ಸಸಿ ನೆಟ್ಟು ಪೋಶಿಸಬೇಕು. ಈ ಬಗ್ಗೆ ಎಲ್ಲರೂ ಆಲೋಚಿಸಬೇಕು. ಆಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಭೇರ್ಯ ರಾಮಕುಮಾರ್ ನುಡಿದರು.ಇದೆ ಸಂದರ್ಭದಲ್ಲಿ ಅವರು ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣಾ ಪ್ರತಿಜ್ಞೆಯನ್ನು ಭೋದಿಸಿದರು.
ಸರ್ಕಾರಿ ಪ್ರೌಢಶಾಲೆ ಆಂಜನೇಯ ಬ್ಲಾಕ್ ಕೆ ಆರ್ ನಗರ ತಾ.ನ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ ಎ .ಎಸ್. ವಿಜ್ಞಾನ ಶಿಕ್ಷಕರು ಹಾಗೂ ಹಾಗೂ ಇಕೋ ಕ್ಲಬ್ ಮುಖ್ಯಸ್ಥರಾದ ಉದಯ ಗೌಡ,ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ನ ಪದಾಧಿಕಾರಿಗಳಾದ…. ಹರಿಪ್ರಸಾದ್, ಪ್ರಣತಿ, ಲಿಖಿತ್,ಧನುಷ್, ನಿಖಿತಾ ಹಾಗೂ ಸದಸ್ಯರುಗಳಾದ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

