ಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ (ಎಸ್.ಟಿ) ಮೀಸಲಾತಿ ನೀಡುವಂತೆ ಆಗ್ರಹಿಸಿ ಗುರುವಾರ ಅ.20 ರಂದು ಮಧ್ಯಾಹ್ನ 12:30ಕ್ಕೆ ಬೆಳಗಾವಿಯ ಅಶೋಕ (ಕೀಲ್ಲಾ) ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸುವ ಪ್ರತಿಭಟನಾ ರ್ಯಾಲಿಯಲ್ಲಿ ಜಿಲ್ಲೆಯ ಉಪ್ಪಾರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ಮತ್ತು ಜಿಲ್ಲಾಧ್ಯಕ್ಷ ಮಂಜುನಾಥ ರಾಜಪ್ಪನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವು ಅತೀ ಹಿಂದುಳಿದ ಸಮಾಜವಾಗಿದ್ದು, ಇಲ್ಲಿಯವರೆಗೆ ಯಾವ ಸರ್ಕಾರಗಳು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮೀಸಲಾತಿ ನೀಡಿ ಮುಂಚೂಣಿಯಲ್ಲಿ ತರುವ ಪ್ರಯತ್ನ ಮಾಡಿರುವದಿಲ್ಲ. 1975 ರ ಹಾವನೂರ ಆಯೋಗದ ವರದಿ, 1986 ರ ವೆಂಕಟಸ್ವಾಮಿ ಆಯೋಗದ ವರದಿ, 1990 ರ ಚಿನ್ನಪ್ಪ ರಡ್ಡಿ ಆಯೋಗದ ವರದಿಗಳ ಪ್ರಕಾರ ಉಪ್ಪಾರ ಜಾತಿಯು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಅತೀ ಹಿಂದುಳಿದ ಜಾತಿಯಾಗಿದೆ ಎಂದು ನಮೂದಿಸಲಾಗಿದೆ.
ಆದರೆ, ಸುಮಾರು ದಶಕಗಳು ಕಳೆದರೂ ಉಪ್ಪಾರ ಸಮಾಜಕ್ಕೆ ಯಾವುದೇ ಮೀಸಲಾತಿ ಸಿಗದೇ ಇರುವುದು ತುಂಬಾ ಅನ್ಯಾಯದ ಸಂಗತಿ. ಕಾರಣ ಉಪ್ಪಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ (ಎಸ್.ಟಿ) ಮೀಸಲಾತಿ ನೀಡುವಂತೆ ಆಗ್ರಹಿಸಿ ಅ.20ರಂದು ಬೆಳಗಾವಿಯಲ್ಲಿ ನಡೆಯುವ ಪ್ರತಿಭಟನಾ ರ್ಯಾರ್ಲಿಯಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರಕಾರ ಎಚ್ಚರಿಸುವ ಈ ಹೋರಾಟಕ್ಕೆ ಬೆಂಬಲಿಸಬೇಕೆಂದು ರಾಜ್ಯ ಉಪಾಧ್ಯಕ್ಷ ಅರಣು ಸವತಿಕಾಯಿ ತಿಳಿಸಿದ್ದಾರೆ.