Homeಲೇಖನಭೀಮ ತೀರದ ಬಯಲಾಟ ದರ್ಶನ ; ಕಿರು ಅವಲೋಕನ

ಭೀಮ ತೀರದ ಬಯಲಾಟ ದರ್ಶನ ; ಕಿರು ಅವಲೋಕನ

ಗಡಿನಾಡ ಬಯಲಾಟ ಭಾರ್ಗವ ಶಿವಣ್ಣಗೌಡ ಬಿರಾದಾರ ಇವರು ಮೂಲತಃ ವಿಜಯಪುರ ಜಿಲ್ಲೆ ಅಂದಿನ ಇಂಡಿ ಇಂದಿನ ಚಡಚಣ ಪಟ್ಟಣ ನಿವಾಸಿ. ಇಂಡಿ ತಾಲೂಕಿನ ಹಲಸಂಗಿ ಗೆಳೆಯರ ಬಳಗದ ಮಧುರ ಚೆನ್ನರು ಪಿ.ಧೂಲಾ, ಸಿಂಪಿಲಿಂಗಣ್ಣ, ಮಾದಣ್ಣ ಓಲೆಕಾರ ದ.ರಾ.ಬೇಂದ್ರೆ, ಗುರುಲಿಂಗ ಕಾಪಸೆ ಲಾವಣಿರತ್ನ ಶಾಂತಬಾಯಿ ಹಲಸಂಗಿ ಮರಗೂರದ ಕಮಲ ಇಂತಹ ಘಟಾನುಘಟಿಗಳು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.

ಶಿವಣ್ಣ ಮಾ. ಬಿರಾದರ ಇವರಿಗೆ ಮೂಡಲಪಾಯ ದೊಡ್ಡಟದ ಕಲೆಯೆಂದರೆ ಪಂಚಪ್ರಾಣ. 1951ರಲ್ಲಿ ಜನಿಸಿದ ಇವರು ತಮ್ಮ ಬಾಲ್ಯ ಹಾಗೂ ಯೌವ್ವನದ ದಿನಗಳಲ್ಲಿ ವೀರರಸ ಪ್ರಧಾನವಾದ ಹಾಡು ಕುಣಿತಗಳೊಂದಿಗೆ ಒಳಗೂಡಿದ ಈ ಅದ್ಭುತ ಆಟದ ಹಲವು ಪ್ರಯೋಗಗಳನ್ನು ಕಂಡವರು. ಸ್ವತಃ ತಂಡ ಕಟ್ಟಿಕೊ೦ಡು ಆಡಿದವರು. ಇವರ ತಂದೆ ಮಾಧುರಾಯಗೌಡರಿಗೂ ಈ ಕಲೆಯಲ್ಲಿ ಆಸಕ್ತಿ. ವಿಶಿಷ್ಟವಾದ ಈ ಆಟದ ವೇಷಭೂಷಣಗಳನ್ನು ದೊಡ್ಡಾಟ ಆಡುವ ತಂಡಗಳಿಗೆ ಒದಗಿಸುತ್ತಾ ಬಂದವರು. ತಂದೆಯಿಂದ ಬಳುವಳಿಯಾಗಿ ಬಂದ ಈ ಕಲಾ ಪ್ರೀತಿ ಶಿವಣ್ಣನವರಿಗೆ ಅದು ಕಲೋಪಾಸನೆಯಾಯಿತು. ಕಳೆದ ಆರೇಳು ದಶಕಗಳಿಂದ ದೊಡ್ಡಾಟದ ಪ್ರದರ್ಶನಗಳನ್ನು ನೀಡುತ್ತಾ ಬಂದ ಇವರಿಗೆ ಈಗ ಈ ಕಲೆ ನಶಿಶಿಹೋಗುತ್ತಿರುವ ಬಗ್ಗೆ ಆತಂಕ. ಹೇಗಾದರೂ ಮಾಡಿ ಈ ಕಲೆಯನ್ನು ಉಳಿಸಿ ಬೆಳೆಸುವ ಹಂಬಲ. ಅದಕ್ಕಾಗಿ ಅವರು ತಂಡ ಕಟ್ಟಿ ನೊಂದಣಿ ಮಾಡಿಸಿ ಹೊಸ ಹೊಸ ಪ್ರಸಂಗಗಳ ಪ್ರಯೋಗ ಮಾಡುವ ಹರಸಾಹಸ ಮಾಡುತ್ತಿದ್ದಾರೆ. ಈ ಕಲೆ ಹೇಗಿತ್ತು ಎಂದು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ತಮ್ಮ ಅನುಭವಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ನಮ್ಮ ಊರು ಚಡಚಣ. ವಿಜಯಪುರ ಜಿಲ್ಲೆಯ ವಾಯುವ್ಯ ದಿಕ್ಕಿನಲ್ಲಿರುವ ನಮ್ಮ ಊರು ಕರ್ನಾಟಕದ ಗಡಿಯ ಪ್ರದೇಶವಾಗಿದೆ. ಚಡಚಣದ ವಾಯುವ್ಯ ಪಶ್ಚಿಮ ಹಾಗೂ ನೈರುತ್ಯ ದಿಕ್ಕಿನಲ್ಲಿ ಸನಿಹದಲ್ಲಿಯೇ ಮಹಾರಾಷ್ಟ್ರ ರಾಜ್ಯದ ಗಡಿ ಪ್ರಾರಂಭವಾಗುತ್ತದೆ. ಚಡಚಣ ಇದೊಂದು ಮೊದಲಿನಿಂದಲೂ ದೊಡ್ಡ ವ್ಯಾಪಾರ ಕೇಂದ್ರ. ಸುತ್ತಲಿನ ಗ್ರಾಮದವರು ತಮ್ಮ ತಮ್ಮ ವ್ಯಾಪಾರ ವ್ಯವಹಾರಕ್ಕಾಗಿ ಚಡಚಣ ಗ್ರಾಮವನ್ನು ಅವಲಂಬಿಸಿದ್ದಾರೆ. ರೈತರು ತಮ್ಮ ಉತ್ಪನ್ನಗಳ ಮಾರಾಟ ಮಾಡಲು ತಮಗೆ ಬೇಕಾಗುವ ಬೀಜ ಗೊಬ್ಬರ ಖರೀದಿಸಲು ಬಟ್ಟೆ ಬರೆ ಕಿರಾಣಿ ಸಾಮಾನುಗಳನ್ನು ಕೊಂಡುಕೊಳ್ಳಲು ಸುತ್ತಲಿನ ನೂರಾರು ಗ್ರಾಮದವರು ಜಡಚಣಕ್ಕೆ ಆಗಮಿಸುತ್ತಾರೆ. ಆದ್ದರಿಂದ ಇದೊಂದು ದೊಡ್ಡ ಪಟ್ಟಣ ವ್ಯಾಪಾರಿ ಕೇಂದ್ರವಾಗಿದೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಪೂರ್ವ ಭಾಗದಲ್ಲಿರುವ ಅವಿಭಜಿತ ಇಂಡಿ ತಾಲೂಕಿನ ಗಡಿಯಲ್ಲಿ ಸುಮಾರು 44 ಹಳ್ಳಿಗಳು ಕನ್ನಡ ಭಾಷೆಯ ಪ್ರಭಾವಿ ಹಳ್ಳಿಗಳಾಗಿದ್ದು ಮರಾಠಿ ಜೊತೆಗೆ ಕನ್ನಡ ಶಾಲೆಯು ಕೂಡ ಗಡಿನಾಡಿನಲ್ಲಿ ಸಾಕಷ್ಟಿವೆ. ಮಂಗಳವೇಡಾ ತಾಲೂಕಿನ ಕನ್ನಡ ಭಾಷೆಯ ಹಳ್ಳಿಗಳಾದ ಸಲಗರ, ಜಂಗಲಗಿ, ಸೊಡ್ಡಿ, ಹುಲಜಂತಿ, ನಂದೂರ, ಬೋರ್ಯಾಳ, ಸಿದ್ಧಾಪೂರ ಮುಂತಾದ ಗ್ರಾಮಗಳಲ್ಲಿ ಹಿಂದಿನ ದಿನಗಳಲ್ಲಿ ಬಯಲಾಟಾದ ಪ್ರದರ್ಶನಗಳು ಜರುಗುತ್ತಿದ್ದವು. ಆದರೆ ಇತ್ತೀಚೆಗೆ ಈ ಕಲೆಯು ನಶಿಸಿಹೋಗಿದೆ. ಇನ್ನು ಜತ್ತ ತಾಲೂಕಿನ ಉಮದಿ, ಮರಬಗಿ, ಬೋರಗಿ, ಬೆಳ್ಳುಂಡಗಿ, ಸೊನ್ನಲಗಿ ಮುಂತಾದ ಪ್ರದೇಶಗಳಲ್ಲಿ ಕನ್ನಡವೇ ಮಾತೃಭಾಷೆಯಾಗಿದೆ. ಇಲ್ಲಿಯವರು ಸಹ 1960- 70ರ ದಶಕದಲ್ಲಿ ಬಹಳಷ್ಟು ಬಯಲಾಟ ಪ್ರದರ್ಶಿಸಿದ್ದನ್ನು ಕಂಡಿದ್ದೇನೆ ಎನ್ನುತ್ತಾರೆ.

ಇದೀಗ ಇಲ್ಲಿಯೂ ಈ ಕಲೆ ನೆಲಕಚ್ಚಿದೆ. ಕರ್ನಾಟಕದ ಗಡಿಭಾಗದ ಗ್ರಾಮಗಳಾದ ದಸೂರಾ, ಉಮರಜ, ರೇವತಗಾಂವ ನಿವರಗಿ, ಹಾಲಹಳ್ಳಿ ಶಿರಾಡೋಣ ಈ ಊರುಗಳಲ್ಲಿಯೂ ಕೂಡ ಹಿಂದಿನ ದಿನಗಳಲ್ಲಿ ಬಯಲಾಟ ಕತೆಯು ರಾರಾಜಿಸುತ್ತಿತ್ತು. ಅದೇ ರೀತಿ ಚಡಚಣದ ಸಮೀಪದ ಗ್ರಾಮಗಳಾದ ಗೋಡಿಹಾಳ, ಲೋಣಿ, ತದ್ದೆವಾಡಿ, ಏಳಗಿ, ಹಲಸಂಗಿ, ಜಳಕಿ ಮುಂತಾದ ಗ್ರಾಮಗಳಲ್ಲಿ ಪ್ರತಿ ವರ್ಷವೂ ಬಯಲಾಟ ಪ್ರದರ್ಶಿತವಾಗುತ್ತಿದ್ದವು. 2000 ನಂತರ ಈ ಕಲೆಯು ನಶಿಸಿ ಹೋಗಿದೆ. ಅದರಂತೆ ಬರಡೋಲ, ಜೀರಂಕಲಗಿ, ದೇವರನಿಂಬರಗಿ, ಜೀಗಜೀವಣಿ ಇಂಚಗೇರಿ ಮುಂತಾದ ಗ್ರಾಮಗಳಲ್ಲಿಯೂ ಕಲೆ ಮಾಯವಾಗಿದೆ.

ಭೀಮಾತೀರದ ಗುಂಡ ತದ್ದೇವಾಡಿಯಿಂದ ಮುಂದೆ ಸಾಗಿದರೆ ಧೂಳಖೇಡ, ಮರಗೂರ, ಅಣಚಿ, ಸಿರಗೂರ, ಚಣೇಗಾ೦ವ, ಇರಿಗಳಗಿ ಗ್ರಾಮಗಳು ಇದ್ದು ಇಲ್ಲಿ ಯೂ ಕೂಡ ಬಯಲಾಟ ಕಲೆಯ ಕುರುಹುಗಳು ಸಿಗುತ್ತವೆ. ಆದರೆ ಯಾವುದೇ ಬಯಲಾಟ ಕಲಾವಿದರು ನೋಡಲು ಸಿಗಲಾರರು. ಈಗ ಈ ಗ್ರಾಮಗಳಲ್ಲಿ ಸಂಪೂರ್ಣ ಕಲೆಯು ಮಾಯವಾಗಿದೆ. ಇನ್ನು ನದಿಯ ಆಚೆಯ ದಂಡೆಗುಂಟ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹಳ್ಳಿಗಳಿದ್ದು ಕಾರಕಲ್ಲಿ ಗ್ರಾಮದಲ್ಲಿ 1981 ರಲ್ಲಿ ಬಯಲಾಟ ಆಡಿಸಿದ್ದನ್ನು ನನ್ನ ಗಮನಕ್ಕೆ ಇದೆ. ಇತ್ತೀಚಿಗೆ ಅಲ್ಲಿಯೂ ಕೂಡ ನಶಿಸಿದೆ. ಮುಂದೆ ಸಾಗಿದರೆ ಟಾಕಳಿ ಯಳ್ಳ ನಿ೦ಬರಗಿ, ಮ೦ದ್ರೂಪ, ಕೂಡಲ. ಹತ್ತರಸಂಗ, ಶೇಗಾ೦ವ ಮುಂತಾದ ಕನ್ನಡ ಭಾಷಿಕರ ಗ್ರಾಮಗಳಿದ್ದು ಇಲ್ಲಿಯೂ ಕೂಡ ಹಿಂದಿನ ದಿನಗಳಲ್ಲಿ ಆಗಾಗ ನಮ್ಮ ಕನ್ನಡ ಬಯಲಾಟಗಳನ್ನು ಆಡುತ್ತಿದ್ದರು. ಅದೇ ಗ್ರಾಮದವರು ಕಲಿತು ಹಬ್ಬ ಹರಿದಿನಗಳಲ್ಲಿ ಆಡುತ್ತಿದ್ದರು. ಟಿವಿಗಳು ಬಂದ ನಂತರ ಹಾಗೂ ಜನರ ಅಭಿರುಚಿ ಬದಲಾದ ನಂತರ ಸಾಮಾಜಿಕ ನಾಟಕಗಳನ್ನು ಕಲಿತು ಆಡತೊಡಗಿದರು. ತಡವಾಳ, ಕರ್ಜಗಿ, ಭಂಕಲಗಿ, ಸುಲೇರ, ಜವಳಗಿ ಗ್ರಾಮಗಳಲ್ಲಿಯೂ ಯಥಾಸ್ಥಿತಿಯಾಗಿದೆ. ಇನ್ನು ನಮ್ಮ ತೀರದ ಇಂಡಿ ತಾಲೂಕಿನ ಗ್ರಾಮಗಳಾದ ಅಗರಖೇಡ, ಪಡನೂರ, ಆಳೂರ, ಲಚ್ಯಾಣ, ಚಿಕ್ಕಮಣೂರ, ಬೇನೂರ ಮುಂತಾದ ಗ್ರಾಮಗಳಲ್ಲಿ ಲೇಖಕರು ಸಂಪರ್ಕಿಸಿ ಕಲೆಯ ಏಳು ಬೀಳು ಗುರುತಿಸಿದ್ದಾರೆ.

ರಾಷ್ಟ್ರಕೂಟರ ಕಾಲದಲ್ಲಿ ಸಾಲೂಟಗಿಯು ಬಹಳ ಪ್ರಸಿದ್ಧ ಹೊಂದಿತ್ತು. ಆಗಿನ ಕಾಲದಲ್ಲಿ ಇಲ್ಲಿ ಒಂದು ವಿಶ್ವವಿದ್ಯಾಲಯ ಇತ್ತು ಎಂದು ನಾವು ಓದಿದ್ದೇವೆ. ಇಂಥ ಇತಿಹಾಸ ಪ್ರಸಿದ್ಧ ಗ್ರಾಮವು ಈಗಲೂ ಕೂಡ ಜನಪದ ಕಲಾವಿದರಿಂದ ತುಂಬಿ ತುಳುಕುತ್ತಿದೆ. ಪ್ರತಿ ವರ್ಷ ಶ್ರೀ ಶಿವಯೋಗೇಶ್ವರ ಮಂದಿರದ ಪ್ರಾಂಗಣದಲ್ಲಿ ಹಂತಿ ಕಟ್ಟಿ ಜೋಳದ ರಾಶಿ ಮಾಡುತ್ತಾರೆ. ಹಂತಿಯ ಪದಗಳ ಕಲಾವಿದರಿಗೆ ಒಂದು ಒಳ್ಳೆಯ ಅವಕಾಶ.

ಇಂಡಿ ತಾಲೂಕಿನ ಕಟ್ಟಕಡೆಯ ಹಳ್ಳಿಯಾದ ಮಿರಗಿಯಲ್ಲಿ 2019 ರಲ್ಲಿ ಶ್ರೀ ದೇವಿ ಮಹಾತ್ಮೆ ಬಯಲಾಟ ಪ್ರದರ್ಶನ ನೀಡಿದ್ದರು. ಆಲಮೇಲ ಪಟ್ಟಣದಲ್ಲಿಯೂ 1970ರ ದಶಕದಲ್ಲಿ ಬಯಲಾಟ ತಂಡಗಳು ಸಾಕಷ್ಟು ಇದ್ದವು. ಇಲ್ಲಿ ಕೂಡ ಬಯಲಾಟದ ವೇಷ ಭೂಷಣಗಳನ್ನು ಬಾಡಿಗೆ ರೂಪದಲ್ಲಿ ಒದಗಿಸಿಕೊಡುವಂತ ವ್ಯವಸ್ಥೆ ಇತ್ತು. ಇದೀಗ ಜನ ಸಾಮಾಜಿಕ ನಾಟಕಗಳ ಕಡೆಗೆ ಒಲವು ತೋರಿದ ಮೂಲಕ ರಂಗಭೂಮಿಗೆ ಅವಶ್ಯವಿರುವ ಸಾಮಗ್ರಿಗಳು ಕೂಡ ಇಲ್ಲಿ ಬಾಡಿಗೆಗೆ ಸಿಗುತ್ತವೆ.

ನೂರಾರು ವರ್ಷಗಳ ಹಿಂದೆಯೇ ಬಯಲಾಟ, ದೊಡ್ಡಾಟ, ಸಣ್ಣಾಟ ಮುಂತಾದವುಗಳ ಬಗ್ಗೆ ನಮ್ಮ ಹಿರಿಯರು ಹಸ್ತಪ್ರತಿಗಳನ್ನು ತಯಾರಿಸಿದ್ದಾರೆ. ಒಂದೊಂದು ಊರಿನಲ್ಲಿ ಒಂದೊಂದು ಕಥೆಗಳು ಬರೆಯಲ್ಪಟ್ಟಿವೆ. ಪುರಾಣ ಪುಣ್ಯ ಕಥೆಗಳಾಗಲಿ ರಾಮಾಯಣ ಮಹಾಭಾರತ ಕಥೆಗಳಾಗಲಿ ಮೂಲ ಕಥೆಗೆ ಯಾವುದೇ ಲೋಪವಾಗದಂತೆ, ಇದ್ದದ್ದು ಇದ್ದ ಹಾಗೆಯೇ ಕಥೆಗಳನ್ನು ರಚಿಸಿದ್ದಾರೆ. ಪಾತ್ರಗಳ ಅಭಿನಯಕ್ಕೆ ಅನುಗುಣವಾಗಿ ಸರಳವಾದ ದೃಶ್ಯಗಳನ್ನು ಅಳವಡಿಸಿಕೊಂಡಿದ್ದಾರೆ. ವೇದಿಕೆ ಮೇಲೆ ಕಾಣಿಸಲು ಸಾಧ್ಯವಾಗದೇ ಇರುವಂತಹ ಪ್ರಸಂಗಗಳನ್ನು ಸಂಭಾಷಣೆಯಲ್ಲಿಯೇ ವರ್ಣಿಸುತ್ತ ಪ್ರೇಕ್ಷಕರಿಗೆ ನಡೆಯುವ ದೃಶ್ಯಾವಳಿಗಳನ್ನು ಕಣ್ಣು ಮುಂದೆ ಬರುವಂತೆ ಪ್ರಯತ್ನಿಸಿದ್ದಾರೆ. ಬಯಲಾಟ ಸಣ್ಣಾಟ ದೊಡ್ಡಾಟಗಳಲ್ಲಿ ಮುಖ್ಯವಾಗಿ ಬರುವ ಪತ್ರ ಸಾರಥಿಯದು. ಈತನಿಂದಲೇ ಅಂದಿನ ಕಥೆಯ ವಿವರಗಳನ್ನು ಪ್ರೇಕ್ಷಕರಿಗೆ ಪರಿಚಯವಾಗುತ್ತದೆ. ಕಥೆಯ ಸಾರವನ್ನು ಪ್ರೇಕ್ಷಕರಿಗೆ ತಿಳಿಸಲು ಪ್ರಯತ್ನಿಸುತ್ತಾನೆ. ಈತನು ಕಥೆಯನ್ನು ಮುನ್ನಡೆಸಿಕೊಂಡು ಹೋಗುವ ಸಾರಥಿ ಇದ್ದಂತೆ. ಪ್ರತಿಯೊಂದು ಆಟದಲ್ಲಿಯೂ ಬಿಕ್ಕಟ್ಟು ಸನ್ನಿವೇಶಗಳಲ್ಲಿ ಅಭಿನಯಿಸಲು ಸಾಧ್ಯವಾಗದ ಸಂದರ್ಭದಲ್ಲಿ ಈ ಸಾರಥಿಯ ಕಥೆಯನ್ನು ಮುಂದುವರಿಯುವುದಕ್ಕೆ ಪೂರಕ ವಾತಾವರಣವನ್ನು ತನ್ನ ಸ್ವಗತ ಮಾತಿನಲ್ಲಿ ಪ್ರೇಕ್ಷಕರಿಗೆ ತಿಳಿತಿಳಿಯಾಗಿ ಅರಿಕೆ ಮಾಡಿ ಕೊಡುತ್ತಾನೆ. ಈಗಿನ ಬಯಲಾಟ ಹಸ್ತ ಪ್ರತಿಗಳಲ್ಲಿ ಬರುವ ಪದ್ಯಗಳನ್ನು ವಾಚಿಸಿದರೆ ಈ ಪದ್ಯವು ಯಾವ ರಾಗದಲ್ಲಿ ಯಾವ ತಾಳದಲ್ಲಿ ಗಾಯನ ಕಲಾವಿದರು ಹಾಡಬಹುದು ಎಂದು ಜನಸಾಮಾನ್ಯರು ಊಹಿಸಲಿಕ್ಕೆ ಸಾಧ್ಯವಾಗಲಾರದು. ಸಂಗೀತ ಮತ್ತು ಗಾಯನ ಕಲೆಯ ಕುರಿತು ಜ್ಞಾನವನ್ನು ಹೊಂದಿದ ಜನಸಾಮಾನ್ಯರು ಮಾತ್ರ ಸಂಗೀತ ತಿರುಳನ್ನು ಆನಂದಿಸುತ್ತಾರೆ. ಒಂದೇ ತರಹದ ಪದ್ಯವನ್ನು ಬೇರೆ ಬೇರೆ ಹಳ್ಳಿಗಳಲ್ಲಿ ವಿಭಿನ್ನ ರಾಗದಿಂದ ಹಾಡುವ ಗಾಯನ ಕಲಾವಿದರು ನಮಗೆ ಸಿಗುತ್ತಾರೆ. ಅವರುಗಳು ತಮ್ಮದೇ ಆದ ರಾಗ ಸಂಯೋಜನೆಯನ್ನು ಅಳವಡಿಸಿಕೊಂಡಿದ್ದಾರೆ. ಇಂಥ ರಾಗ ಸಂಯೋಜನೆಗೆ ಇಂಪಾದ ಸಂಗೀತವನ್ನು ಹೊಂದಿಸಿಕೊಂಡು ವೇದಿಕೆಯ ಮೇಲೆ ಇಡೀ ಸಂಗೀತ ಸಾಹಿತ್ಯವನ್ನು ಶ್ರೀಮಂತ ಗೊಳಿಸಿ ಪ್ರದರ್ಶನ ನೀಡುತ್ತಾರೆ. ಹೀಗೆ ತಮ್ಮ ಅನುಭವ ಕ್ಷೇತ್ರಕಾರ್ಯಗಳಲ್ಲಿ ಬಯಲಾಟ ಕುರಿತಂತೆ ಹತ್ತು ಹಲವು ಬಗೆಯಲ್ಲಿ ವಿವರಿಸಿದ್ದಾರೆ. ಮಾಹಿತಿ ಕಲೆ ಹಾಕಿ ಕಿರು ಹೊತ್ತಿಗೆ ತಂದಿದ್ದಾರೆ. ಬಯಲಾಟ ಹಾಗೂ ಯಕ್ಷಗಾನಕ್ಕೆ ಇರುವ ವ್ಯತ್ಯಾಸ, ಕಲಾವಿದರ ಸಮಸ್ಯೆಗಳು ಸಂಗೀತ ಹಾಗೂ ಕುಣಿತಗಳ ಬಗ್ಗೆ ಸವಿಸ್ತಾರವಾಗಿ ನಿರೂಪಿಸಿದ್ದಾರೆ.
ಕೃತಿಯಲ್ಲಿ ಬಯಲಾಟದ ಕುಣಿತಗಳು ಭಾಗದಲ್ಲಿ ಪುರುಷರ ಕುಣಿತಗಳು ಜನರಲ್ಲಿ ಉತ್ಸಾಹ ತುಂಬುವಂತದ್ದು. ಹೆಚ್ಚಾಗಿ ಈ ಕುಣಿತಗಳು ಅಡತಾಳದಲ್ಲಿ ಇರುತ್ತವೆ. ಸ್ತ್ರೀ ನೃತ್ಯ ಭರತ ನಾಟ್ಯ ಮಾದರಿಯದು. ಹತ್ತೆಂಟು ಜನರ ಗುಂಪು ಒಂದೇ ತೆರನಾದ ಹೆಜ್ಜೆ ಹಾಕುತ್ತಾ ಲೇಝಿಮ ಝಂಜ, ಕೋಲಾಟ ತಂಡಗಳು ಎಂತಹ ಸುಂದರ ಗಾಯನ ಮನೋಹರ. ಇವು ಹಿಂದಿನ ತಲೆಮಾರಿನ ಕರಬಲ ಕುಣಿತ, ಪಂಜು ಕುಣಿತ, ಲಾಟಿ ಕುಣಿತದ ಮಾದರಿಯಲ್ಲಿಯೇ ಹೊಸ ರೂಪಾಂತಾರಗೊಂಡಿದೆ. ಲೇಝಿಮ ಕುಣಿತದ ತಂಡಗಳು ಸೋಲಾಪುರ, ಅಕ್ಕಲಕೋಟಿ, ಮೈಂದರಗಿ, ದುಧನಿಗಳಲ್ಲಿ ನೋಡಲು ಸಿಗುತ್ತವೆ. ಎಷ್ಟೊಂದು ಸುಂದರನಾಗಿ ತಾಳಬದ್ದವಾಗಿ ಹೆಜ್ಜೆ ಹಾಕುತ್ತಾ ಮೆರವಣಿಗೆಗೆ ಶೋಭೆಯನ್ನುಂಟುಮಾಡುತ್ತಾರೆ! ಪ್ರತಿ ಗ್ರಾಮಗಳಲ್ಲಿ ಇಂತಹ ತಂಡಗಳು ರಚನೆಯಾಗಬೇಕು ಹಿಂದು ಸಂಸ್ಕೃತಿ ಉಳಿಯಬೇಕು ಎ೦ದು ಆಶಿಸುತ್ತಾರೆ. ಮುಂದುವರೆದು ಧರ್ಮ ವಿಜಯ ಬಯಲಾಟದ ಪಕ್ಷಿನೋಟದಲ್ಲಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.

ಸತ್ಯ ಹರಿಶ್ಚಂದ್ರ , ದಕ್ಷಬ್ರಹ್ಮ, ಮೈಸಾಸುರ ಮರ್ದನ ಶ್ರೀದೇವಿ ಮಹಾತ್ಮೆ ಸಂಕ್ಷಿಪ್ತ ಕಥೆಯ ಸಾರಾಂಶ ತಿಳಿಸಿ ಅಭಿನಯಿಸಿದ ತಂಡಗಳು, ಕಲಾವಿದರ ಹೆಸರು ಪ್ರದರ್ಶನ ದಿನಾಂಕ ಮಾಹಿತಿ ಸಂಗ್ರಹಿಸಿ ದಾಖಲಿಸಿದ್ದಾರೆ. ತಮ್ಮೂರು ಚಡಚಣದಲ್ಲಿ ಬಯಲಾಟಗಳು ನಡೆದು ಬಂದ ದಾರಿ ವಿವರಿಸಿದ್ದಾರೆ. ಅಂತೆಯೇ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಲೆ ಅವಲೋಕಿಸಿದ್ದಾರೆ. ಭೀಮಾತೀರದ ಕಲಾವಿದರ ಅವಲೋಕನ, ಸಾಲೂಟಗಿ ಪರಿಸರದಲ್ಲಿ ಬಯಲಾಟಗಳು, ಬಯಲಾಟದಲ್ಲಿ ಹಾಸ್ಯ, ಕಲಾವಿದರು ಅಂದು ಇ೦ದು ಹೀಗೆ ಬಯಲಾಟದ ಎಲ್ಲಾ ಆಯಾಮಗಳಲ್ಲೂ ಮಾಹಿತಿ ಕ್ರೂಡೀಕರಿಸಿದ್ದಾರೆ. ಒಟ್ಟಾರೆ ಉತ್ತರ ಕರ್ನಾಟಕದ ಜನಪದ ಅಧ್ಯಯನ ಮಾಡಬಯಸುವವರಿಗೆ ಇದೊಂದು ಉಪಯುಕ್ತ ಕೃತಿ.


ಗೊರೂರು ಅನಂತರಾಜು,
ಹಾಸನ.
ಮೊ: 9449462879

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group