ಸಿಂದಗಿ: ಕಲೆ ಎಂಬುದು ಯಾರೊಬ್ಬರ ಸ್ವತ್ತಲ್ಲ ಕಲೆ ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿ ಕಾರ್ಯ ನಿರ್ವಹಿಸುತ್ತದೆ ಅದನ್ನು ಅನಾವರಣಗೊಳಿಸುವ ಮನಸ್ಥಿತಿ ಬೆಳೆಸಿಕೊಂಡಾಗ ಮಾತ್ರ ಕಲೆ ವಿಜೃಂಭಿಸಲು ಸಾಧ್ಯ ಎಂದು ಯೂ ಟ್ಯೂಬ ಕಲಾವಿದ ಚಂದ್ರಕಾಂತ ಬೂದಿಹಾಳ ಅಭಿಮತ ವ್ಯಕ್ತಪಡಿಸಿದರು.
ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ನಡೆದ ನಟಕೇಸರಿ ಹಂದಿಗನೂರ ಸಿದ್ದರಾಮಪ್ಪ ಹಾಗೂ ಕನ್ನಡದ ಗಾನಗಾರುಡಿಗ ಘಝಲ್ ಗಾಯಕ ರವಿ ಹಂದಿಗನೂರ ಇವರ ಸ್ಮರಣೋತ್ಸವ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ನಾನು ಯೂ ಟೂಬದಲ್ಲಿ ಬರುವ ಕಾರ್ಯಕ್ರಮವನ್ನು. ನೋಡುತಿದ್ದೆ.
ಆಗ ನನ್ನ ಮನದಲ್ಲಿ ಆಲೋಚನೆ ಬಂತು. ನಾನೂ ಯಾಕೆ ಈ ರೀತಿಯ ನಗೆ ಚಟಾಕಿಯ ಕಾರ್ಯಕ್ರಮವನ್ನು ಜನರಲ್ಲಿ ಬಿತ್ತರಿಸಬಾರದು ಎಂದು ಪ್ರಾರಂಭಿಸಿದ ನಗೆ ಚಟಾಕಿಗೆ ಇಂದು ಅಭಿಮಾನಿಗಳು ಜೊತೆಯಾಗಿ ಉತ್ಸಾಹವನ್ನು ತುಂಬುತ್ತಿರುವುದು ನನಗೆ ಹರ್ಷ ತಂದಿದೆ ಅದೇ ಉತ್ಸಾಹ ಇಂದು ನನ್ನನ್ನು ಇಂಥ ಕಲಾವಿದರ ಊರಲ್ಲಿ ಸನ್ಮಾನ ಮಾಡಿಸಿಕೊಳ್ಳುವ ಭಾಗ್ಯ ತಂದಿದೆ ಎಂದರು.
ಸನ್ಮಾನ ಸಮಾರಂಭದಲ್ಲಿ ಸಿಂದಗಿಯ ವಿಜಯಕುಮಾರ ಪತ್ತಾರ, ರಾಂಪುರದ ಹೈದರ ಚಟ್ಟರಕಿ, ಮುರಡಿಯ ಮೌನೇಶ ಬಡಿಗೇರ, ಚೆನ್ನಪ್ಪಗೌಡ ಬಿರಾದಾರ ವೇದಿಕೆಯ ಮೇಲಿದ್ದರು.