Homeಸುದ್ದಿಗಳುಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ - ಅಜಿತ್ ಮೆನ್ನಿಕೇರಿ

ಮಕ್ಕಳಿಗೆ ತೊಂದರೆಯಾಗದಂತೆ ಪರೀಕ್ಷೆ ನಡೆಸಲು ಸಕಲ ಸಿದ್ಧತೆ – ಅಜಿತ್ ಮೆನ್ನಿಕೇರಿ

ಮೂಡಲಗಿ – ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಆಯಾ ಊರುಗಳಲ್ಲಿಯೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೂಡಲಗಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮೆನ್ನಿಕೇರಿ ಹೇಳಿದರು.

ಬರುವ ದಿ.೧೯ ಹಾಗೂ ೨೨ ರಂದು ನಡೆಯಲಿರುವ ಹತ್ತನೇ ತರಗತಿಯ ಪರೀಕ್ಷೆಗಾಗಿ ಕೈಗೊಳ್ಳಲಾದ ಸಿದ್ಧತೆಗಳ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಬೆಳಿಗ್ಗೆ ೧೦.೩೦ ಕ್ಕೆ ಇದ್ದರೂ ಕೋವಿಡ್ ಶಿಷ್ಟಾಚಾರದ ಸಲುವಾಗಿ ೮.೩೦ ಕ್ಕೇ ಹಾಜರಿರಲು ಮಕ್ಕಳಿಗೆ ಸೂಚನೆ ನೀಡಲಾಗಿದೆ. ಅದಕ್ಕಿಂತ ಮುಂಚೆ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲು ಗ್ರಾಮ ಪಂಚಾಯತಿಗೆ ಮನವಿ, ಸುರಕ್ಷಾ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಹಾಗೂ ಆರೋಗ್ಯದ ಕ್ರಮಗಳಿಗಾಗಿ ಆರೋಗ್ಯ ಇಲಾಖೆಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

೧೨ ಮಕ್ಕಳಿಗೆ ಒಂದು ಕೊಠಡಿ ಎಂದು ನಿರ್ಧರಿಸಲಾಗಿದ್ದು, ಈ ಸಲ ಮೂಡಲಗಿ ವಲಯದಲ್ಲಿ ಗ್ರಾಮೀಣ ಭಾಗದಿಂದ ೪೪೭೫ ಮಕ್ಕಳು, ನಗರ ಪ್ರದೇಶದಿಂದ ೨೧೭೪ ಮಕ್ಕಳು, ಬಾಹ್ಯ ಕೇಂದ್ರದಿಂದ ೧೦೨ ಮಕ್ಕಳಿದ್ದರೆ ಕೇಂದ್ರ ಬದಲಾವಣೆ ಮಾಡಿರುವ ೧೭೨ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

ಲಿಂಗವಾರು ಮಕ್ಕಳ ಸಂಖ್ಯೆಯಲ್ಲಿ ಮೂಡಲಗಿ ವಲಯದಲ್ಲಿ ೩೫೫೬ ಗಂಡು ಮಕ್ಕಳು, ೩೦೯೩ ಹೆಣ್ಣು ಮಕ್ಕಳು ಪರೀಕ್ಷೆಗಾಗಿ ನೋಂದಾಯಿತರಾಗಿದ್ದಾರೆ. ೪೦೪೧ ಸರ್ಕಾರಿ, ೧೫೨೪ ಅನುದಾನಿತ, ೧೦೮೪ ಅನುದಾನರಹಿತ ಶಾಲೆಗಳ ಮಕ್ಕಳು ನೋಂದಾಯಿತ ರಾಗಿದ್ದಾರೆ ಹಾಗೆಯೇ ಮಾಧ್ಯಮವಾರು ಮಕ್ಕಳಲ್ಲಿ ಒಟ್ಟು ೬೨೫೨ ಕನ್ನಡ ಮಾಧ್ಯಮ, ೪೨೦ ಆಂಗ್ಲ ಮಾಧ್ಯಮ ಮತ್ತು ೧೯೪ ಉರ್ದು ಮಾಧ್ಯಮದ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆಗಾಗಿ ಎಲ್ಲ ಸಿದ್ಧತೆಗಳು ಮುಗಿದಿವೆ. ನಮ್ಮ ಶಾಸಕರು ೮೦೦೦ ಮಾಸ್ಕ್ ಗಳನ್ನು ಮಕ್ಕಳಿಗಾಗಿ ಕೊಟ್ಟಿದ್ದಾರೆ. ನಿರಾಣಿ ಫೌಂಡೇಶನ್ ದವರು ಸ್ಯಾನಿಟೈಸರ್ ಕೊಟ್ಟಿದ್ದಾರೆ ಹಾಗೆಯೇ ವಿವಿಧ ಸಂಘ ಸಂಸ್ಥೆಗಳು ಕೋವಿಡ್ ರಕ್ಷಣೆಗಾಗಿ ಸಹಾಯ ಹಸ್ತ ಚಾಚಿವೆ ಎಂದು ಅಜಿತ್ ಮೆನ್ನಿಕೇರಿ ಹೇಳಿದರು.

ದಿ. ೧೯ ಹಾಗೂ ದಿ ೨೨ ರಂದು ಜರುಗುವ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಬಿಇಓ, ವರ್ಗದ ಶಿಕ್ಷಕರಿಗೆ ೬ ಬಾರಿ, ಎಲ್ಲ ೭೮ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯ ರಿಗೆ ೫ ಸಲ ಗೂಗಲ್ ಮತ್ತು ೨ ಸಲ ಪ್ರತ್ಯಕ್ಷ ಸಭೆ ಮಾಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಕೋರಲಾಗಿದೆ. ೬೭೫೧ ವಿದ್ಯಾರ್ಥಿಗಳಿಗೆ ಓಎಮ್ಆರ್ ಗಳನ್ನು ಲಭ್ಯ ಮಾಡಿಸಿ ರೂಢಿಸಲು ಶಿಕ್ಷಕರಿಗೆ ತಿಳಿಸಲಾಗಿದೆ. ಶಾಲಾ ಹಂತದ, ಕ್ಲಸ್ಟರ್ ಹಾಗೂ ಬ್ಲಾಕ್ ಹಂತದ ದೂರವಾಣಿ ಕರೆ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪರೀಕ್ಷಾ ನೋಡಲ್ ಅಧಿಕಾರಿ ಸತೀಶ ಬಿ ಎಸ್ ಹಾಗೂ ಇಸಿಓಟಿ ಕರಿಬಸವರಾಜು ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು

RELATED ARTICLES

Most Popular

error: Content is protected !!
Join WhatsApp Group