ಸಿಂದಗಿ: ಲಿಂಗಾಯತ ನೌಕರರ ಸಂಘದ ಸ್ಥಾಪನೆಯ ಧ್ಯೇಯ ಉದ್ದೇಶಗಳನ್ನು ಹಾಗೂ ಬಸವ ತತ್ವವನ್ನು ಒಪ್ಪಿಕೊಂಡು ಬಂದವರೆಲ್ಲ ಲಿಂಗಾಯತರು. ಈ ಸಂಘವು ಯಾವುದೇ ರಾಜಕೀಯ, ಬೇರೆ ಸಂಘಗಳ ಪರ ಹಾಗೂ ವಿರೋಧಿ ಸಂಘವಲ್ಲ ಎಂದು ಲಿಂ.ನೌ.ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವರಾಜ ಕಪಲಾಪುರೆ ಹೇಳಿದರು.
ಪಟ್ಟಣದ ಬಸವಮಂಟಪದಲ್ಲಿ ಹಮ್ಮಿಕೊಂಡ ಲಿಂಗಾಯತ ನೌಕರರ ಸಂಘ ಜಿಲ್ಲಾ ಘಟಕ ವಿಜಯಪುರ ಜಿಲ್ಲಾ ಸರ್ವ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದ ಚಟುವಟಿಕೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ಸಂಘವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿತ್ವದಿಂದ ಕೂಡಿ ದುಡಿಯಬೇಕು. ಇದರ ಯಶಸ್ವಿಗಾಗಿ ಎಲ್ಲರೂ ಶ್ರಮಿಸೋಣ ಎಂದರು.
ಈ ವೇಳೆ ಸರಕಾರಿ ನೌಕರರ ಲಿಂಗಾಯತ ಸಂಘ ವಿಜಯಪುರ ಜಿಲ್ಲಾ ಘಟಕದ ನೂತನ ಅಧ್ಯಕ್ಷರನ್ನಾಗಿ ಸಿಂದಗಿ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿಯ ಪ್ರಾಥಮಿಕ ಶಾಲೆಯ ಪದೋನ್ನತಿ ಮುಖ್ಯಗುರು ಶರಣಬಸವ ಲಂಗೋಟಿ, ಹುಣಶ್ಯಾಳ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಆರ್.ಆರ್. ನಿಂಬಾಳಕರ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹಾಗೂ ಸುಧಾಕರ ಬಿರಾದಾರ ಅವರನ್ನು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ರಾಜ್ಯ ಘಟಕದ ವತಿಯಿಂದ ಗೌರವಿಸಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಶಿವಾನಂದ ಡೋಮನಾಳ ಜಿಲ್ಲಾಧ್ಯಕ್ಷ ಕಲ್ಬುರ್ಗಿಯ ಪಾಟೀಲ, ರಾಜ್ಯ ಘಟಕದ ಸಹ ಕಾರ್ಯದರ್ಶಿ ಜಯಶ್ರೀ ಬೆಣ್ಣಿ ಮಾತನಾಡಿ, ಲಿಂಗಾಯತ ನೌಕರರ ಸಂಘದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಬಲಪಡಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಗುರುದೇವಾಶ್ರಮದ ಶಾಂತಗಂಗಾಧರ ಮಹಾಸ್ವಾಮಿಗಳು ಮನಗೂಳಿಯ ವಿರಕ್ತಮಠದ ವೀರತಿಶಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಭೆಯಲ್ಲಿ ಎಸ್.ಎನ್.ಪಾಟೀಲ, ಶರಣಪ್ಪ ಕಣಜೆ, ಭೀಮಣ್ಣ ದೇವಣಿ, ಚನ್ನಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದ ಭೂಸನೂರ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆರ್.ಹೆಚ್. ಬಿರಾದಾರ, ಪ್ರಾ.ಶಾ.ಶಿ. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಂಪುರ, ಎ.ಕೆ.ಬಿರಾದಾರ, ಸಿ.ಎನ್.ಶಿರಕನಳ್ಳಿ, ಎಮ್. ಡಿ. ಟಕ್ಕಳಕ್ಕಿ, ಶಿವುಕುಮಾರ ಶಿವಸಿಂಪಿ ಸೇರಿದಂತೆ ಅನೇಕರಿದ್ದರು.