ಅಂಬೇಡ್ಕರ್ ಎಂದರೆ ಅರಿವಿನ ಮಾರ್ಗ: ಪ್ರೊ. ಎಚ್. ಟಿ ಪೋತೆ

Must Read

ಅನುವಾದಕ ಡಾ.ಜೆ.ಪಿ. ದೊಡಮನಿಯವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಶ್ರೀ ಧನಂಜಯ ಕೀರ ಅವರ ಮೂಲ ಕೃತಿ ‘ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜೀವನ ಚರಿತ್ರೆ’ಯ ಲೋಕಾರ್ಪಣೆ ಸಮಾರಂಭವು  ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯದ ನಿರ್ದೇಶಕ ಎಚ್.ಟಿ. ಪೋತೆ, “ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರ ಚಿಂತನೆಗಳು ಅರಿವಿನ ಮಾರ್ಗವಾಗಬೇಕಿದೆ. ಮೇಲ್ವರ್ಗದ ಕೇರಿಗಳಲ್ಲಿ ಅಂಬೇಡ್ಕರ್ ಪ್ರತಿಮೆಗಳನ್ನು ಸ್ಥಾಪಿಸುವುದು ಅವಮಾನ ಎಂದು ಭಾವಿಸುವ ಸಂದರ್ಭದಲ್ಲಿ, ಕೆಲವರ್ಗದ ಕೇರಿಗಳಲ್ಲಿ ಯಾವುದೇ ದೇವರ ದೇವಸ್ಥಾನಗಳನ್ನು ಕಟ್ಟುವುದು ಶ್ರೇಷ್ಠವಲ್ಲ ಎಂದು ಭಾವಿಸುವ ಕೆಲ ಜನರ ಮನಸ್ಥಿತಿ ಬದಲಾಗಬೇಕಾಗಿದೆ. ವರ್ಗ ವರ್ಗಗಳ ನಡುವೆ ಇರುವಂತಹ ಶೋಷಣೆಯ ನೆಲೆಯನ್ನು ಅರಿಯಲು ಅಂಬೇಡ್ಕರ್ ಮಾರ್ಗವು ನಮ್ಮೆಲ್ಲರಿಗೆ ದಾರಿದೀಪವಾಗಿದೆ,” ಎಂದರು.

ವಿಮರ್ಶಕ, ಪ್ರಾಧ್ಯಾಪಕ ಸುಭಾಷ ರಾಜಮಾನೆ ಕೃತಿಯ ಕುರಿತು ಮಾತನಾಡಿ, “ಅನುವಾದಿತ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅವಶ್ಯಕ. ಅಂಬೇಡ್ಕರ್ ಅವರ ಸಾಹಿತ್ಯ ಇಂದಿನ ಯುವಜನಾಂಗವನ್ನು ಆಕರ್ಷಿಸುತ್ತಿದೆ. ಅಂಬೇಡ್ಕರ್ ಅವರು ಕಟುವಾದ ಭಾಷೆಯನ್ನು ಬಳಸಿದ್ದರೂ ಕೂಡ ಎಲ್ಲರಿಗೂ ಸ್ಫೂರ್ತಿಯಾಗಿದ್ದರು. ಅವರ ಭಾಷಣದ ಬೇಗೆಯು ಎಲ್ಲರನ್ನೂ ತಲುಪುತ್ತಿತ್ತು. ಕಾಲ ಮತ್ತು ದೇಶವನ್ನು ಹೊರತುಪಡಿಸಿ ಒಬ್ಬ ವ್ಯಕ್ತಿ ಮತ್ತು ಚಿಂತನೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಆದರೆ ಇದೆಲ್ಲವೂ ಅಂಬೇಡ್ಕರ್ ಅವರಿಂದ ಮಾತ್ರ ಸಾಧ್ಯ,” ಎಂದರು.

ಕಾರ್ಯಕ್ರಮದ ಉದ್ಘಾಟನೆ ಮತ್ತು ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, “ಜಾತಿ ಪದ್ಧತಿಯನ್ನು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದಲೂ ತಿರಸ್ಕೃತವಾಗುವಂತೆ ಶಿಕ್ಷಣ ನೀಡಬೇಕು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ಜಾತಿ ಪದ್ಧತಿಯ ಕುರಿತು ಭಿನ್ನಾಭಿಪ್ರಾಯಗಳನ್ನು ಈ ಕೃತಿಯಲ್ಲಿ ಕಾಣಬಹುದು. ಹೀಗೆ ಹಲವಾರು ಪ್ರಮುಖ ವಿಚಾರಗಳ ಕುರಿತು ಈ ಕೃತಿ ಮಾತನಾಡುತ್ತದೆ,” ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಲೇಖಕ ಡಾ. ಜೆ.ಪಿ ದೊಡಮನಿ ಹಾಗೂ ಕವಯಿತ್ರಿ, ಅನುವಾದಕಿ ಶ್ರೀಮತಿ ಪ್ರಭಾ ಬೂರಾ ಗಾವಂಕರ ಹಾಜರಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group