
ಮೂಡಲಗಿ: ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸಾಮೀಜಿಯವರ ಗುರುಗಳಾದ ವೇದಾಂತ ಕೇಸರಿ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ಜ್ಞಾನ ಪ್ರಸಾರಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಚಿಂತನೆಗಳನ್ನು ಪ್ರಸಾರ ಮಾಡಲಿಕ್ಕೆ ಮತ್ತು ಈ ಭಾಗದ ಜನರ ಮನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹುಟ್ಟುಹಾಕಲು ಈ ಆಶ್ರಮವು ಸಹಕಾರಿಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರ ನ.05 ರಂದು ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಶ್ರೀ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶ್ರೀ ಗುರುಪ್ರಸಾದ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಚಾಲನೆ ನೀಡಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಕಳೆದ 30 ವರ್ಷಗಳಿಂದ ಆಶ್ರಮವು ಸತ್ಸಂಗ, ಧಾರ್ಮಿಕ ಸಭೆ, ಪ್ರವಚನ ಹೀಗೆ ಹಲವಾರು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಉತ್ತಮ ಸಂಸ್ಕಾರ, ಸಂಸ್ಕೃತಿ, ಗುರು ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಮುಜರಾಯಿ ಇಲಾಖೆಯಿಂದ ಆಶ್ರಮದ ಜೀರ್ಣೋದ್ಧಾರಕ್ಕೆ ನೆರವು ನೀಡಲು ಗ್ರಾಮಸ್ಥರು ವಿನಂತಿಸಿದರು. ಇದಕ್ಕೆ ಸ್ಪಂದಿಸಿ ಸ್ಥಳಿಯ ಶಾಸಕರು ಮತ್ತು ನಾನು ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಿ, ಅನುದಾನ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ತಾ.ಪಂ ಮಾಜಿ ಸದಸ್ಯ ಗೋಪಾಲ ಕುದರಿ, ಗ್ರಾ.ಪಂ ಅಧ್ಯಕ್ಷ ಅಡಿವೆಪ್ಪ ಹಾದಿಮನಿ, ಗ್ರಾ.ಪಂ ಉಪಾಧ್ಯಕ್ಷ ಖಾನಪ್ಪ ಹೋಳಕರ, ಕಿಶನ್ ನಂದಿ, ನಾರಾಯಣ ತೊಟಗಿ, ಚಂದ್ರು ಮೊಟೆಪ್ಪಗೋಳ, ಜಗದೀಶ ಚಿಕ್ಕೋಡಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.