ಮೂಡಲಗಿ: ದೇಶ ಕಂಡ ಅಪ್ರತಿಮ ವೀರ ಸನ್ಯಾಸಿ, ರಾಷ್ಟ್ರ ಚಿಂತಕ, ಸಮಾಜ ಸುಧಾರಕ, ಧಾರ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಜೀವನ ಕುರಿತಾದ ಪುಸ್ತಗಳನ್ನು ವಿದ್ಯಾರ್ಥಿಗಳು ಓದಿದರೆ ಅವು ವಿದ್ಯಾರ್ಥಿಗಳ ಜೀವನ ಪಥವನ್ನು ಬದಲಿಸಬಲ್ಲವು ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸಂಗಮೇಶ ಗುಜಗೊಂಡ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಪುಸ್ತಕ ಪ್ರದರ್ಶನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಯುವ ಜನತೆ ಮೇಲೆ ವಿವೇಕಾನಂದರು ಬಹಳಷ್ಟು ಭರವಸೆಯನ್ನು ಇಟ್ಟಿದ್ದರು, ಅವರು ನೀಡಿದ ಯುವಶಕ್ತಿಗೆ ಸ್ಪೂರ್ತಿದಾಯಕ ಸಂದೇಶಗಳನ್ನು ಇಂದಿನ ವಿದ್ಯಾರ್ಥಿಗಳು ಸದಾಶಯದಿಂದ ಸ್ವೀಕರಿಸಿದರೆ ಯುವ ಜನತೆ ದೇಶಕಟ್ಟುವ ಕೆಲಸ ಮಾಡಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಆರ್.ಎ.ಶಾಸ್ತ್ರೀಮಠ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಕೇವಲ ಕೇಳುವುದಲ್ಲದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದರೆ ಮಾತ್ರ ಇಂತಹ ಆಚರಣೆಗೆ ಮಹತ್ವ ಬರುತ್ತದೆ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಕುರಿತಾದ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಬಲ್ಲ ಪುಸ್ತಕಗಳನ್ನು ಪ್ರದರ್ಶಿಸಲಾಯಿತು.
ಸಮಾರಂಭದಲ್ಲಿ ಪ್ರೊ.ವ್ಹಿ.ಎಸ್.ಹಂಪನ್ನವರ, ಡಾ.ಬಿ.ಸಿ.ಪಾಟೀಲ, ಪ್ರೊ.ಎಸ್.ಜಿ.ನಾಯಕ, ಪ್ರೊ.ಎಸ್.ಬಿ.ಖೋತ, ಪ್ರೊ.ಜಿ.ವ್ಹಿ.ನಾಗರಾಜ, ಪ್ರೊ.ಜಿ.ಸಿದ್ರಾಮರಡ್ಡಿ, ಡಾ.ಎಸ್.ಎಸ್.ಹೂಗಾರ, ಪ್ರೊ.ಎ.ಎಸ್.ಮೀಸಿನಾಯ್ಕ, ಪ್ರೊ.ಭೀಮಪ್ಪ ಗಡಾದ, ಗ್ರಂಥಪಾಲಕ ಬಸವಂತ ಬರಗಾಲಿ, ಮನೋಹರ ಲಮಾಣಿ ಮತ್ತಿತರಿದ್ದರು.

