ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಕಿರಿಯ ಉರ್ದು ಶಾಲೆ ವತಿಯಿಂದ ಸಂಭ್ರಮದ ’73ನೇ ಗಣರಾಜ್ಯೋತ್ಸವ’ವನ್ನು ಆಚರಿಸಲಾಯಿತು.
ಎಸ್. ಡಿ. ಎಮ್. ಸಿ. ಉಪಾಧ್ಯಕ್ಷರಾದ ಲಕ್ಷ್ಮಿ ಗುಡಿಮನಿ ಧ್ವಜಾರೋಹಣ ನೆರವೇರಿಸಿದರು.
ಗ್ರಾಮದ ಹಿರಿಯರಾದ ರಾಯಪ್ಪಾ ನರೋಟಿಯ ಮಾತನಾಡಿ, ಗ್ರಾಮದ ಶಾಲೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು ಶಾಲೆಗೆ ಬೇಕಾದ ಸೌಲಭ್ಯಗಳನ್ನು ಪಂಚಾಯತಿ ಮತ್ತು ಗ್ರಾಮಸ್ಥರ ಸಹಕಾರ ಪಡೆದುಕೊಂಡು ಶಿಕ್ಷಣವನ್ನು ಸುಧಾರಿಸುವುದರ ಜೊತೆಗೆ, ಗ್ರಾಮವನ್ನು ಪ್ರಗತಿಯತ್ತ ಸಾಗಿಸೋಣ. ನಮ್ಮ ಗ್ರಾಮದ ಶಾಲಾ ಮಕ್ಕಳಲ್ಲಿ ಕಾಣುತ್ತಿರುವ ಶಿಸ್ತು ಮತ್ತು ಅಚ್ಚುಕಟ್ಟು ಹೀಗೆ ಮುಂದುವರೆದುಕೊಂಡು ಹೋಗಲಿ ಎಂದರು.
ಕಾರ್ಯಕ್ರಮ ನಿರೂಪಿಸುತ್ತಾ ಗಣರಾಜ್ಯೋತ್ಸವದ ಕುರಿತು ಮಾತನಾಡಿದ ಶಿಕ್ಷಕ ಶಿವಾನಂದ ತಲ್ಲೂರ, ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ ಗಳನ್ನು ಗೌರವಿಸುವುದರ ಜೊತೆಗೆ ಸಂವಿಧಾನ ನಮಗೆ ಕೊಡಮಾಡಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಪಾಲಿಸುತ್ತಾ ಏಕತಾ ಮನೋಭಾವದಿಂದ ಎಲ್ಲರೂ ಬದುಕಿದಾಗ ಮಾತ್ರ ಗಣತಂತ್ರ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ. ನಾವು ಯಾವಾಗಲೂ ದೇಶದ ಐಕ್ಯತೆ, ಸಮಗ್ರತೆಗಾಗಿ ದುಡಿಯುವ ಸಲುವಾಗಿ ವಿದ್ಯಾರ್ಥಿ ದೆಸೆಯಿಂದಲೇ ಅಂತಹ ಭಾವನೆಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಸ್ಕೌಟ್ ಶಿಕ್ಷಕಿ ಎಂ.ಪಿ. ಹೊಟ್ಟಿನವರರವರ ನೇತೃತ್ವದಲ್ಲಿ ಮಕ್ಕಳಿಂದ ಆಕರ್ಷಕ ಪಥಸಂಚಲನ ನೆರವೇರಿತು. ಕಾರ್ಯಕ್ರಮದಲ್ಲಿ ಎರಡು ಶಾಲೆಗಳ ಎಸ್.ಡಿ. ಎಂ.ಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಊರ ಹಿರಿಯರು ಸೇರಿದಂತೆ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮುಖ್ಯಾಧ್ಯಾಪಕಿ ಕೆ. ಎಫ್. ಭಾವಿಹಾಳ ಸ್ವಾಗತಿಸಿದರು, ಎಸ್.ಡಿ. ಎಂ.ಸಿ ಸದಸ್ಯರು ಪೂಜೆ ನೆರವೇರಿಸಿದರು, ಉರ್ದು ಶಾಲಾ ಶಿಕ್ಷಕರಾದ ರಾಜು ಸುತಾರ ಪ್ರಸ್ತಾವಿಕವಾಗಿ ಮಾತನಾಡಿದರು. ಕೊನೆಯಲ್ಲಿ ಶಿಕ್ಷಕಿ ಎಸ್ಎಸ್ ಸತ್ಯನಾಯಿಕ ವಂದಿಸಿದರು.