ಬೀದರ – ಇದೇ ವರ್ಷದ ಜನವರಿ ೨೧ ರಂದು ನಗರದ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಕೇಂದ್ರದ ಸಿಎಎ ಕಾಯ್ದೆ ಕುರಿತು ನಡೆದ ನಾಟಕವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಬಗ್ಗೆ ಮಕ್ಕಳು ಅವಹೇಳನಕಾರಿ ಮಾತುಗಳನ್ನಾಡಿದ್ದರ ಬಗ್ಗೆ ಮಕ್ಕಳ ವಿಚಾರಣೆ ನಡೆಸಿದ ಪೊಲೀಸರ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.
ನಾಟಕದಲ್ಲಿ ಪ್ರಧಾನಿಯವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಮಕ್ಕಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಈ ಕುರಿತು ಸಾಮಾಜಿಕ ಕಾರ್ಯಕರ್ತ ನೀಲೇಶ ರಕ್ಷಾಲ್ ಜ.೨೬ ರಂದು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸಮವಸ್ತ್ರ ಧರಿಸಿದ ಪೊಲೀಸರು ಶಾಲೆಗೆ ಬಂದು ಮಕ್ಕಳ ವಿಚಾರಣೆ ನಡೆಸಿದ್ದು ಮಕ್ಕಳ ಹಕ್ಕು ಅಪಹರಣವಾಗಿದೆ ಎಂಬುದಾಗಿ ದೂರು ದಾಖಲಾಗಿರುವುದರಿಂದ ಹೈಕೋರ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ.
ಇಬ್ಬರು ಗಂಡು ಮಕ್ಕಳು, ಒಬ್ಬಳು ಹುಡುಗಿಯನ್ನು ಐವರು ಪೊಲೀಸರು ಸಮವಸ್ತ್ರ ಧರಿಸಿ ವಿಚಾರಣೆ ನಡೆಸುತ್ತಿರುವ ಫೋಟೋ ಇದ್ದು ಅದರಲ್ಲಿ ಇಬ್ಬರು ಪೊಲೀಸರು ಶಸ್ತ್ರಧಾರಿಗಳಾಗಿದ್ದಾರೆ ಎಂದು ಹೈಕೋರ್ಟ್ ಉಲ್ಲೇಖಿಸಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣವಾಗಿದೆ. ವಿಚಾರಣೆ ಕೈಗೊಂಡ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ