Homeಸುದ್ದಿಗಳುಶಾಲೆಗೆ ಹೋದ ಮೊದಲ ದಿನವೇ ಅಪಘಾತಕ್ಕೆ ಬಲಿಯಾದ ಬಾಲಕ

ಶಾಲೆಗೆ ಹೋದ ಮೊದಲ ದಿನವೇ ಅಪಘಾತಕ್ಕೆ ಬಲಿಯಾದ ಬಾಲಕ

ನಾಗನೂರಿನ ಸಮರ್ಥ ಶಾಲೆಯ ನಿರ್ಲಕ್ಷ್ಯಕ್ಕೆ ಹಸುಳೆ ಬಲಿ

ಶಿಕ್ಷಣ ಅಧಿಕಾರಿಗಳೇ ಇದಕ್ಕೆ ಹೊಣೆ ಎಂದ ಸಾರ್ವಜನಿಕರು, ಪಾಲಕರು

ಖಾಸಗಿ ಶಾಲೆಗಳ ಅನಧಿಕೃತ ವಾಹನಗಳಿಗೆ ಕಡಿವಾಣ ಯಾವಾಗ….?

ಮೂಡಲಗಿ : ಅಪ್ಪ ಅಮ್ಮನ ಕನಸಿನಂತೆ ಶಾಲೆಗೆ ಹೋದ ಮೊದಲದಿನವೇ ಮುಗ್ಧ ಬಾಲಕ ಶಾಲಾ ವಾಹನದ ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾಗಿದ್ದು ತಂದೆ ತಾಯಿಯ ಮುತ್ತಾಗಿದ್ದ ಮುತ್ತು ಮುಗಳಖೋಡ ಎಂಬ ಬಾಲಕ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ.

ಶಾಲೆಯ ಬಸ್ ಇಳಿದ ತಕ್ಷಣ ಮುಧೋಳ- ನಿಪ್ಪಾಣಿ ರಾಜ್ಯ ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಮೊದಲು ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದ ಬಾಲಕನ ಮೇಲೆ ಮತ್ತೊಂದು ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಗುರ್ಲಾಪೂರ ಗ್ರಾಮದ ಹೊರವಲಯದಲ್ಲಿ ಬುಧವಾರ ಸಂಜೆ ನಡೆದಿದೆ.

ಬುಧವಾರದಂದು ತನ್ನ ಅಕ್ಕಂದಿರರೊಂದಿಗೆ ಮೊದಲ ಬಾರಿಗೆ ಮೂಡಲಗಿ ತಾಲೂಕಿನ ನಾಗನೂರ ಪಟ್ಟಣದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಹೋಗಿದ್ದ ಮುತ್ತುರಾಜ ಮುಗಳಖೋಡ (5) ಮೃತ ಬಾಲಕ. ಸಂಜೆ ಶಾಲೆಯ ಅನಧಿಕೃತ ವಾಹನವೊಂದರಲ್ಲಿ ಬಂದಿದ್ದ. ಮನೆಯ ಪಕ್ಕದಲ್ಲಿರುವ ಹೆದ್ದಾರಿಯ ಮೇಲೆ ವಾಹನ ನಿಲ್ಲಿಸಿ, ವಿದ್ಯಾರ್ಥಿಗಳನ್ನು ಕೆಳಗಿಳಿಸಿ ಮನೆ ತಲುಪಿಸಬೇಕಾದ ಚಾಲಕನ ದಿವ್ಯ ನಿರ್ಲಕ್ಷ್ಯ ಹಾಗೂ ವಾಹನದಲ್ಲಿ ಸಹಾಯಕನೊಬ್ಬ ಇರದೇ ಇದ್ದುದರಿಂದ ವಿದ್ಯಾರ್ಥಿಗಳ ಜೊತೆಗೆ ಬಾಲಕ ಕೂಡಾ ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಕೆಳಗೆ ಮೇಲೆ ಬಿದ್ದಿ ವೇಳೆ ಮತ್ತೊಂದು ಅಪರಿಚಿತ ವಾಹನ ಹಾಯ್ದು ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕೂಡಲೇ ಶಾಲಾ ವಾಹನ ಚಾಲಕ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಬಾಲಕ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, 1ನೇ ತರಗತಿಗೆ ದಾಖಲಾತಿ ಮಾಡಲು ಸಿದ್ದರಾಗಿದ್ದೆವು ಆದರೆ ಮೊದಲ ದಿನವೇ ಶಾಲೆಗೆ ಹೋಗಿದ್ದ ಮಗ ಜೀವಂತವಾಗಿ ಮನೆಗೆ ಬರಲಿಲ್ಲ ಎಂದು ದುಃಖ ತಪ್ತರಾಗಿದ್ದಾರೆ.

ಈ ಡಕೋಟಾ ಮಿನಿ ಬಸ್ಸೇ ಆ ಶಾಲೆಯ ವಾಹನ !

ಎಚ್ಚತ್ತುಕೊಳ್ಳದ ಅಧಿಕಾರಿಗಳು :
ಶಾಲಾ ವಾಹನಗಳಲ್ಲಿ ಬೇಕಾಬಿಟ್ಟಿಯಾಗಿ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಎಂದು ನಿಯಮವಿದ್ದರೂ ಮೂಡಲಗಿ ತಾಲೂಕಿನಲ್ಲಿ ಮಾತ್ರ ಅದು ಪಾಲನೆ ಆಗುತ್ತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಕುಲಗೋಡದ ಸರಸ್ವತಿ ನವೋದಯ ಶಾಲೆ ಎಂಬ ಶಾಲೆಯ ಅಪಘಾತಕ್ಕೆ ಈಡಾಗಿ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಪ್ರಕರಣ ನಡೆದ ನಂತರ ಜ. ೨೫ ರಿಂದಲೇ ಎಲ್ಲ ಶಾಲಾ ವಾಹನಗಳು ನಿಯಮ ಪಾಲನೆ ಮಾಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಮೂಡಲಗಿ ತಹಶೀಲ್ದಾರರು, ಸಾರಿಗೆ ಅಧಿಕಾರಿಗಳು, ಬಿಇಓ ಹಾಗೂ ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಶಾಲೆಗಳ ಆಡಳಿತ ಮಂಡಳಿಗಳು ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ.

ಶಾಲಾ ವಾಹನಗಳ ಪ್ರತ್ಯೇಕ ತಪಾಸಣೆ ಇಲ್ಲ:

ಶಾಲಾ ವಾಹನಗಳು ಸುರಕ್ಷತಾ ನಿಯಮ ಅನುಸರಿಸುತ್ತಿರುವ ಬಗ್ಗೆ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಪ್ರತ್ಯೇಕವಾಗಿ ತಪಾಸಣೆ ಮಾಡುತ್ತಿಲ್ಲ. ಆದರೆ, ನಿಯಮಾವಳಿ ಪ್ರಕಾರ ಸಾರಿಗೆ ಇಲಾಖೆಯಲ್ಲಿ ಶಾಲಾ ವಾಹನಗಳ ತಪಾಸಣೆಗೆ ಪ್ರತ್ಯೇಕ ತಂಡ ಇರಬೇಕು. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಿ ಅನಧಿಕೃತ ಶಾಲಾ ವಾಹನಗಳಿಗೆ ಕಡಿವಾಣ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು ವರ್ಷಗಳಿಂದ ಶಾಲಾ ವಾಹನಗಳ ತಪಾಸಣೆ ಮಾಡದೆ ಇರುವ ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಬೇರೆ ವಾಹನ ತಪಾಸಣೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ.

ಪಾಲನೆಯಾಗದ ಮಾರ್ಗಸೂಚಿ :

ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಹಲವು ಬಾರಿ ಮಾರ್ಗಸೂಚಿ ರೂಪಿಸಿದೆ. ವಾಹನಗಳಲ್ಲಿ ಸಿಸಿಟಿವಿ ಕ್ಯಾಮರಾ ಇರಬೇಕು, ಜಿಪಿಎಸ್ ಅಳವಡಿಸಬೇಕು, ಅಗ್ನಿಶಾಮಕ ಉಪಕರಣ ಅಳವಡಿಕೆ ಕಡ್ಡಾಯ. ತುರ್ತು ನಿರ್ಗಮನ ಬಾಗಿಲು, ಪ್ರಥಮ ಚಿಕಿತ್ಸಾ ಕಿಟ್, ಚಾಲಕನಿಗೆ ಸಮವಸ್ತ್ರ, ಗುರುತಿನ ಚೀಟಿ, ನಿಯಮಾವಳಿ ಪ್ರಕಾರ ವಾಹನದ ಸಂಪೂರ್ಣ ವಿವರ, ಚಾಲಕನ ಹೆಸರು, ಅನುಭವ, ಮೊಬೈಲ್ ಸಂಖ್ಯೆಯನ್ನು ಬಸ್ ಹೊರಭಾಗದಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಿದೆ. ಆದರೆ, ತಾಲೂಕಿನಲ್ಲಿ ಓಡಾಡುವ ಶಾಲಾ ವಾಹನಗಳಲ್ಲಿ ಈ ಮಾರ್ಗಸೂಚಿಗಳ ಪಾಲನೆ ಶೂನ್ಯವಾಗಿದೆ.
ಅಷ್ಟಕ್ಕೂ ಇಷ್ಟೆಲ್ಲ ಅಪಘಾತಗಳು ನಡೆಯುತ್ತಿದ್ದರೂ ಖಾಸಗಿ ಶಾಲೆಗಳ ವಾಹನಗಳ ವಿಷಯದಲ್ಲಿ ಶಿಕ್ಷಣಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group