ಗೋಕಾಕ – ತಾಲೂಕಿನ ಸಾವಳಗಿ ಗ್ರಾಮದ ಮನೆಯೊಂದರ ಪಕ್ಕದಲ್ಲಿ ಮೊಸಳೆಯ ಮರಿಯೊಂದು ಕಂಡುಬಂದಿದ್ದು ಅದರ ತಾಯಿ ಕೂಡ ಇಲ್ಲೇ ಇರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರಲ್ಲಿ ದುಗುಡ ಉಂಟಾಗಿದೆ.
ಅರಣ್ಯ ಇಲಾಖೆಯವರು ಮೊಸಳೆಯ ಜಾಡು ಹಿಡಿದು ಅದನ್ನು ಪತ್ತೆ ಮಾಡಬೇಕು ಆ ಮೂಲಕ ಮುಂದಾಗಬಹುದಾದ ಅಪಾಯ ತಪ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನದಿಯ ಪಕ್ಕ ಜಮೀನು ಇರುವವರು ತಮ್ಮ ಹೊಲಕ್ಕೆ ಹೋಗಲು ಹೆದರುವಂತಾಗಿದೆ. ಈಗ ಭತ್ತದ ಬೆಳೆ ಕೂಡ ಕಟಾವಿಗೆ ಬಂದಿದ್ದು ಮೊಸಳೆ ಅಲ್ಲಿಯೇ ಇರಬಹುದಾದ ಹೆದರಿಕೆಯಿಂದಾಗಿ ರೈತರು ಕಟಾವು ಕೆಲಸಕ್ಕೆ ಹೋಗಲಾರದಂತಾಗಿದೆ. ಶೀಘ್ರವೇ ಅರಣ್ಯ ಇಲಾಖೆಯವರು ಯೋಧರ ಸಹಾಯದಿಂದ ಮೊಸಳೆಯನ್ನು ಕಂಡುಹಿಡಿಯಬೇಕೆಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
೨೦೧೯ ರಲ್ಲಿ ನದಿಗೆ ಪ್ರವಾಹ ಬಂದು ಹೋದನಂತರ ೨೮ ಮೊಸಳೆ ಮರಿಗಳು ಪ್ರತ್ಯಕ್ಷವಾಗಿದ್ದವು. ಅದೇ ರೀತಿ ಈಗಲೂ ಮರಿಯೊಂದು ಕಾಣಿಸಿದ್ದು ಅದರ ತಾಯಿ ಇಲ್ಲೆಲ್ಲೊ ಇರಬಹುದೆಂಬ ಶಂಕೆಯಿದೆ. ಜನರು ಹೊಲಗಳಿಗೆ ಹೋಗಲು, ಮಹಿಳೆಯರು ಬಟ್ಟೆ ತೊಳೆಯಲು ನದಿಗೆ ಹೋಗಲು ಭಯದ ವಾತಾವರಣ ಇದ್ದು ತಕ್ಷಣವೇ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಚನ್ನಪ್ಪ ಮಗದುಮ್, ಬಸವರಾಜ ತಂಬೂರಿ, ಶಿವಾನಂದ ಮಗದುಮ್ ಹಾಗೂ ಗ್ರಾಮಸ್ಥರು ಇದ್ದರು