ಮೂಡಲಗಿ: ಶಿಕ್ಷಕರು ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದು ಗೋಕಾಕ ತಾಲೂಕ ಪಂಚಾಯತಿಯ ಕಾರ್ಯನಿವಾಹಕ ಅಧಿಕಾರಿ ಎಮ್.ಎಚ್ ದೇಶಪಾಂಡೆ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರದಾಸೋಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಬಿಸಿ ಊಟ ವಿತರಿಸಿ ಮಾತನಾಡಿ, ಸರ್ಕಾರ ಅದರಲ್ಲೂ ಶಿಕ್ಷಣ ಇಲಾಖೆ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗಾಗಿ ಹಲವಾರು ಯೋಜನೆಗಳನ್ನು ಪ್ರಾಯೋಗಿಕವಾಗಿ ಪರಿಶೀಲನೆ ಮಾಡಿಯೇ ಜಾರಿಗೆ ತಂದಿರುತ್ತಾರೆ.
ಹೀಗಿರುವಾಗ ಶಿಕ್ಷಕರು ಇವುಗಳನ್ನು ಉತ್ತಮವಾಗಿ ಸಮುದಾಯ ಹಾಗೂ ಗ್ರಾಮಪಂಚಾಯತಿ ಸಹಕಾರದೊಂದಿಗೆ ಜಾರಿಗೆ ತಂದಾಗ ಶಾಲಾ ಅಭಿವೃದ್ದಿ ಸಾಧ್ಯವಾಗುತ್ತದೆ ಹೀಗಿರುವಾಗ ಸರ್ಕಾರ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಬೆಳಗಾವಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾಳಜಿವಹಿಸುತ್ತಿರುವುದು ಅಭಿನಂದನೀಯ ಹಾಗೂ ತುಕ್ಕಾನಟ್ಟಿಯ ಶಾಲೆಯು ಹಲವಾರು ಯೋಜನೆಗಳೊಂದಿಗೆ ಅಕ್ಷರದಾಸೋಹ ಯೋಜನೆಯನ್ನು ರಾಜ್ಯದಲ್ಲಿಯೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದರಿಂದ ಇಲ್ಲಿಯ ಪ್ರಧಾನಗುರುಗಳು ರಾಜ್ಯಮಟ್ಟದ ಪುರಸ್ಕಾರಕ್ಕೆ ಒಳಗಾಗಿರುವದು ಶ್ಲಾಘನೀಯ, ನಮ್ಮ ಕಛೇರಿಯವತಿಯಿಂದ ಅವರಿಗೆ ಅಭಿನಂದನೆಗಳು ಎಂದರು.
ಅಕ್ಷರದಾಸೋಹ ತಾಲೂಕಾ ನಿರ್ದೇಶಕ ಅಶೋಕ ಮಲಬಣ್ಣವರ ಮಾತನಾಡಿ, ಗೋಕಾಕ ಹಾಗೂ ಮೂಡಲಗಿ ಎರಡೂ ವಲಯದ ಬಹುತೇಕ ಎಲ್ಲಾ ಶಾಲೆಗಳಲ್ಲೂ ಬಿಸಿಯೂಟವನ್ನು ಪರಿಣಾಕಾರಿಯಾಗಿ ಮಾಡುತ್ತಿದ್ದಾರೆ ಅದರಲ್ಲೂ ತುಕ್ಕಾನಟ್ಟಿಯ ಶಾಲೆಯಲ್ಲಿ ಮಕ್ಕಳು ಬಯಸಿದ ಅಡುಗೆಳನ್ನು ಮಾಡಿ ಬಡಿಸುತ್ತಿರುವದು ತುಂಬಾ ಶ್ಲಾಘನೀಯ ಇಂತಹ ಕಾರ್ಯಕ್ರಮಗಳಿಂದಲೇ ಈ ಶಾಲೆಗೆ ರಾಜ್ಯಮಟ್ಟದ ಪುರಸ್ಕಾರ ಒಲಿದು ಬಂದಿದೆ. ಸರ್ಕಾರಿ ಯೋಜನೆಗಳನ್ನು ಇಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಅಕ್ಷರ ದಾಸೋಹದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಶೇಂಗಾ ಹೋಳಿಗೆ, ಕೊಬ್ಬರಿ ಸಾರು, ಮಸಾಲೆ ರೈಸ್, ಮೊಳಕೆಕಾಳು ಪಲ್ಯ, ಜುಣಕ, ಬಳ್ಳೊಳ್ಳಿ ಖಾರ, ಶೇಂಗಾ ಚಟ್ನಿ, ಗುರೆಳ್ಳ ಹಿಂಡಿ ನೀಡಲಾಯಿತು ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದ ಪ್ರಧಾನ ಗುರುಗಳಾದ ಎ.ವ್ಹಿ.ಗಿರೆಣ್ಣವರ ಗುರುಗಳನ್ನು ಅಧಿಕಾರಿಗಳು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕಲ್ಲೋಳಿ ಸಮೂಹ ಸಂಪನ್ಮೂಲ ಅಧಿಕಾರಿ ಗಣಪತಿ ಉಪ್ಪಾರ, ಪ್ರಧಾನ ಗುರುಗಳಾದ ಎ.ವ್ಹಿ ಗಿರೆಣ್ಣವರ, ಗ್ರಾ.ಪಂ ಮಾಜಿ ಅಧ್ಯಕ್ಷ ಕುಮಾರ ಮರ್ದಿ, ಹಾಗೂ ಗೋವಿಂದ ನಾಂವಿ ಗುರುನಾಥ ಹುಕ್ಕೇರಿ, ಆನಂದ ಉಪ್ಪಾರ ಹಾಗೂ ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ್, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಲಕ್ಷ್ಮೀ ಹೆಬ್ಬಾಳ, ಸಂಗೀತಾ ತಳವಾರ, ರೂಪಾ ಗದಾಡಿ, ರೇಖಾ ಗದಾಡಿ, ಜ್ಯೋತಿ ಉಪ್ಪಾರ, ಖಾತೂನ ನದಾಫ, ಶಿವಲೀಲಾ ಹಣಮನ್ನವರ, ಶಂಕರ ಲಮಾಣಿ, ಮಹಾದೇವ ಗೋಮಾಡಿ, ಕಿರಣ ಭಜಂತ್ರಿ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.