ಬೆಳಗಾವಿ: ಶಿಕ್ಷಕರು ಹಾಗೂ ಪದವಿಧರರು ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರು ಈ ನಾಡಿನ ಪ್ರಗತಿಯಲ್ಲಿ ಪ್ರಮುಖ ಮತ್ತು ನಿರ್ಣಾಯಕ ಪಾತ್ರವನ್ನು ಹೊಂದಿರುವವರು. ಹಾಗಾಗಿ ಅವರ ಮೇಲೆ ಗುರುತರವಾದ ಹೊಣೆಗಾರಿಕೆಯಿದ್ದು ಅದನ್ನು ಅವರು ಸಮರ್ಪಕವಾಗಿ ನಿಭಾಯಿಸಬೇಕೆಂದು ಪ್ರಾಚಾರ್ಯ ಬಸವರಾಜ ಮಠಪತಿ, ಜಿಲ್ಲಾ ಡಿ.ಎಡ್. ಬೆಳಗಾವಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರು ಹೇಳಿದರು.
ಅವರು ನಗರದ ನಾಗರಿಕರಿಗಾಗಿ, “ಉತ್ತರ ಕರ್ನಾಟಕ ಜನ ಸಂಗ್ರಾಮ ಪರಿಷತ್ತಿನಿಂದ “ ಆಯೋಜಿಸಲಾಗಿದ್ದ ಮತದಾರರ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕ ಜನ ಸಂಗ್ರಾಮ ಪರಿಷತ್ತಿನ (ಪ್ರಧಾನ) ಕಾರ್ಯದರ್ಶಿ ಮಂಜುನಾಥ ವಸ್ತ್ರದ ಮಾತನಾಡಿ, ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾದರೆ ತಮ್ಮ ಕರ್ತವ್ಯವನ್ನು ವಿವೇಚನೆಯಿಂದ ಪಾಲಿಸಬೇಕು ಎಂದು ಹೇಳಿದರು.
ಶ್ರೀ ಸಾಯಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಯಲ್ಲಪ್ಪ ಮೂಕನ್ನವರ, ಸಾಮಾಜಿಕ ಕಾರ್ಯಕರ್ತ ಭಗವಾನ ಮಾತನಾಡಿ, ಶಿಕ್ಷಕರು ಮತ್ತು ಪದವಿಧರರಲ್ಲಿ ಬಹಳಷ್ಟು ಜನ ಇಂದಿನ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಯನ್ನು ಹೊಂದಿ ತಮ್ಮ ಕರ್ತವ್ಯದಿಂದಲೆ ವಿಮುಖರಾಗುತ್ತಿರುವುದು ವಿಷಾದನೀಯ. ಮತದಾನ ನಮ್ಮ ಹಕ್ಕು. ಆದ್ದರಿಂದ ಆ ಬಗ್ಗೆ ಗೌರವವಿರಲಿ. ದೇಶದ ವ್ಯವಸ್ಥೆಗೆ ಅಡಿಪಾಯವಾಗಿರುವ ಪ್ರಜ್ಞಾ ವಂತರು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಸಬೇಕೆಂದು ವಿನಂತಿಸಿದರು.
ನ್ಯಾಯವಾದಿಗಳಾದ ಸಿ. ಬಿ. ಅಲಗೋಡಿ, ಸಂಜು ನಾಯಕವಾಡಿ, ಮಂಡೋಲ್ಕರ್, ಹಾಗೂ ಸತೀಶ ಘೋಡಕೆ, ಮುಂತಾದವರು “ನೋಂದಣಿ ಅಭಿಯಾನ”ದಲ್ಲಿ ಭಾಗವಹಿಸಿ, ಪ್ರಸ್ತುತ ಸಂದರ್ಭದಲ್ಲಿ ಉತ್ತರ ಕರ್ನಾಟಕ ಜನಸಂಗ್ರಾಮ ಪರಿಷತ್ತಿನ ಸಮಾಜಮುಖಿ ಕಾರ್ಯವನ್ನು ಶ್ಲಾಘಸಿದರು.