ಬೀದರ – ಗಡಿ ಜಿಲ್ಲೆಯ ಬೀದರ ಎಲ್ಲಿಯ ಸೇಲಂ.. ಎಲ್ಲಿಯ ಬೀದರ ನಲ್ಲಿ ಬರೋ ಬರಿ… 14 ತಿಂಗಳಿನಿಂದ ಮನೆಯಿಂದ ಕಾಣೆಯಾದ ವ್ಯಕ್ತಿಯೊಬ್ಬ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತೋರಿದ ಕರುಣೆಯಿಂದಾಗಿ ಮರಳಿ ತನ್ನ ಗೂಡು ಸೇರುವಂತಾಗಿದೆ.
ಅವರು ಪುನರ್ಜನ್ಮ ಪಡೆದಂತಾಗಿದೆ ಎಂದು ಹೇಳಿದರೂ ತಪ್ಪೇನು ಇಲ್ಲ.ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ಯಡಪ್ಪಾಡಿ ಊರಿನ ವ್ಯಕ್ತಿಯಾದ ತಿರುಮಲ ತಂದೆ ಪಲನಿಸ್ವಾಮಿ ಅವರೇ ಮರಳಿ ತನ್ನೂರು ಸೇರುವಂತಾದ ವ್ಯಕ್ತಿ.
14 ತಿಂಗಳಾಯಿತು ತಿರುಮಲ ಮನೆಗೆ ಬಂದಿಲ್ಲ. ನಮ್ಮಿಂದ ಆತನು ದೂರವಾಗಿದ್ದಾನೆ ಎಂದು ತಿಳಿದುಕೊಂಡಿದ್ದ ಕುಟುಂಬದವರಿಗೆ ತಿರುಮಲ ಇನ್ನು ಬದುಕಿದ್ದಾನೆ ಎಂಬುದು ಗೊತ್ತಾಗಿ ಸಂತಸಕ್ಕೆ ಪಾರವಿಲ್ಲದಂತಾಗಿದೆ.
ಬಿಡುವಿಲ್ಲದ ಕಾರ್ಯಗಳ ಮಧ್ಯೆಯೂ ತಿರುಮಲನನ್ನು ಮಾತನಾಡಿಸಿ, ಆತನ ಯೋಗಕ್ಷೇಮ ವಿಚಾರಿಸಿ ಮಾನವೀಯತೆ ಮೆರೆದ ಬೀದರ್ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್.ಅವರು ತಿರುಮಲ ಮರಳಿ ತನ್ನ ಗೂಡು ಸೇರಲು ಯಶಸ್ವಿ ಪ್ರಯತ್ನಮಾಡಿದ್ದಾರೆ.
ಅವರಿಗೆ ತಿರುಮಲನ ಕುಟುಂಬದವರು ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.
ತಿರುಮಲ ಅವರು ಕಳೆದ 14 ತಿಂಗಳಿನಿಂದ ಮನೆಯಿಂದ ಕಾಣೆಯಾಗಿ ಎಲ್ಲೆಲ್ಲೋ ತಿರುಗಿ ಕರ್ನಾಟಕದ ಬೀದರ ಜಿಲ್ಲೆಗೆ ಬಂದಿದ್ದಾರೆ. ಮನನೊಂದ ವ್ಯಕ್ತಿಯಂತೆ ಅಲ್ಲಲ್ಲಿ ತಿರುಗುತ್ತಿದ್ದ ತಿರುಮಲ ಅವರು, ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಆಗಸ್ಟ್ 21ರಂದು ಬಸವಕಲ್ಯಾಣ ಪ್ರವಾಸದಲ್ಲಿದ್ದಾಗ ಬೀದರ-ಮನ್ನಾಏಖೆಳ್ಳಿ ಹೆದ್ದಾರಿಯಲ್ಲಿ ಕಣ್ಣಿಗೆ ಬಿದ್ದಿದ್ದಾರೆ.
ಬಸವಕಲ್ಯಾಣದಿಂದ ತಿರುಗಿ ಬರುವಾಗಲೂ ಅದೇ ದಾರಿಯಲ್ಲಿ ತಿರುಮಲ ಅವರು ಒಂಟಿಯಾಗಿ ತಿರುಗುತ್ತಿರುವುದನ್ನು ಕಂಡಾಗ ಜಿಲ್ಲಾಧಿಕಾರಿಗಳು ಆತನ ಹತ್ತಿರ ಹೋಗಿ ಮಾತನಾಡಿಸಿದರು..
ತಿರುಮಲನ ಭಾಷೆಯ ಬಗ್ಗೆ ಅರಿತ ಜಿಲ್ಲಾಧಿಕಾರಿಗಳು, ಆತನ ಆರೋಗ್ಯ ತಪಾಸಣೆ ಸಂಬಂಧಿಸಿದಂತೆ ಕ್ರಮ ವಹಿಸಲು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು..
ಆ ಬಳಿಕ ಬಗದಲ್ ಕಂದಾಯ ಅಧಿಕಾರಿಯು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಅವರಿಂದ ಅಂಬ್ಯುಲೆನ್ಸ್ ಮೂಲಕ ಈ ತಿರುಮಲ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ..
ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿ, ಮುಂದಿನ ಕ್ರಮಕ್ಕಾಗಿ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು..
ಬಳಿಕ ನಗರಸಭೆ ಅಧಿಕಾರಿಗಳು ತಿರುಮಲ ಅವರನ್ನು ಗಾಂಧಿಗಂಜ್ ವಾಟರ್ ಟ್ಯಾಂಕ್ ಹತ್ತಿರ ಇರುವ ನಗರ ವಸತಿ ರಹಿತರ ಕೇಂದ್ರಕ್ಕೆ ದಾಖಲಿಸಿದ್ದಾರೆ.
ನಂತರ ಮಾನವ ವಿಕಾಸ ಸಂಸ್ಥೆಯ ಸಂಜೀವಕುಮಾರ ಪಾತರಪಳ್ಳಿ ಅವರು ತಿರುಮಲ ಅವರ ಕೇಶಮುಂಡನ ಮಾಡಿ, ಊಟ ಉಪಚಾರ, ಬಟ್ಟೆ ನೀಡಿದ್ದಾರೆ.
ಬಳಿಕ ತಿರುಮಲ ಅವರ ವಾರಸುದಾರರನ್ನು ಪತ್ತೆ ಹಚ್ಚಲು ಪೊಲೀಸ್ ವೃತ್ತ ನಿರೀಕ್ಷಕರಿಗೆ ತಿಳಿಸಲಾಗಿದೆ.
ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದರು.
ಈ ವೇಳೆ ತಮಿಳುನಾಡಿನ ಮೂಲದವರಾದ ಈಗ ಸದ್ಯ ಬೀದರ ನಿವಾಸಿಯಾಗಿರುವ ಆರ್.ಪಿ.ರಾಜು ಅವರನ್ನು ನಿರಾಶ್ರಿತರ ಕೇಂದ್ರಕ್ಕೆ ಕರೆಯಿಸಿ ತಿರುಮಲ ಅವರೊಂದಿಗೆ ಮಾತನಾಡಿಸಲಾಗಿದೆ.
ತಿರುಮಲ ಅವರೊಂದಿಗೆ ತಮಿಳಿನಲ್ಲಿ ಮಾತನಾಡಿದ ರಾಜು ಅವರು ತಿರುಮಲ ಅವರು ನೀಡಿದ ಸುಳಿವಿನ ಆಧಾರದ ಮೇಲೆ ತಮಿಳುನಾಡಿನ ಸಂಬಂಧಿಸಿದ ಪೊಲೀಸ್ ಠಾಣೆ ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ.
ಹೀಗೆ ಬೀದರ ಮತ್ತು ತಮಿಳುನಾಡಿನ ಪೊಲೀಸರ ಸಹಾಯದಿಂದಾಗಿಯೂ ತಿರುಮಲ ಅವರು ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯ ಯಡಪ್ಪಾಡಿಯ ವ್ಯಕ್ತಿ ಎಂಬುದು ಗೊತ್ತಾಗಿದೆ.
ಈಗ ಸದ್ಯ ತಿರುಮಲ ಅವರು ಗಾಂಧಿಗಂಜ್ ವಾಟರ್ ಟ್ಯಾಂಕ್ ಹತ್ತಿರ ಇರುವ ನಗರ ವಸತಿ ರಹಿತರ ಕೇಂದ್ರದಲ್ಲಿದ್ದು, ಇವರನ್ನು ಕರೆದೊಯ್ಯಲು ಅವರ ಅಣ್ಣನ ಮಗನಾದ ದಿನೇಶ ಕೃಷ್ಣ ಅವರು ಆಗಸ್ಟ್ 23ರಂದು ಬೀದರಗೆ ಬಂದಿದ್ದರು. ತಮ್ಮ ಕುಟುಂಬಕ್ಕೆ ತಿರುಮಲ ಅವರನ್ನು ಮರಳಿ ಸೇರಿಸಿದ್ದಕ್ಕಾಗಿ ಜಿಲ್ಲಾಧಿಕಾರಿಗಳನ್ನು ಖುದ್ದು ಅವರ ಕಚೇರಿಯಲ್ಲಿ ಭೇಟಿ ಮಾಡಿ ದಿನೇಶ ಕೃಷ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ತಿರುಮಲ ಅವರ ವಾರಸುದಾರರ ಪತ್ತೆ ಮಾಡುವಲ್ಲಿ ಕ್ರಮ ವಹಿಸಿದ ನಗರಸಭೆ ಪೌರಾಯುಕ್ತರಾದ ರವೀಂದ್ರ ಅಂಗಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಜಶೇಖರ ಮಠ, ಸಮುದಾಯ ಸಂಘಟಿಕರಾದ ಮಾರ್ಕ್, ಕೌಶಲ ಅಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕರಾದ ಭೀಮಣ್ಣ ಮೆಹತಾ, ಸಿಪಿಐ ಮಲ್ಲಮ್ಮ ಛೌಬೆ, ಮಾನವ ವಿಕಾಸ ಕೇಂದ್ರದ ವ್ಯವಸ್ಥಾಪಕರಾದ ಸಂಜೀವಕುಮಾರ ಪಾತರಪಳ್ಳಿ, ಕಾರ್ಮಿಕ ಸಂಘಟನೆಯ ಆರ್.ಪಿ. ರಾಜು ಮತ್ತು ಇನ್ನಿತರರಿಗೆ ಜಿಲ್ಲಾಧಿಕಾರಿಗಳು ಇದೆ ವೇಳೆ ಅಭಿನಂದನೆ ಸಲ್ಲಿಸಿದ್ದಾರೆ.