ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

0
321

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ ಪ್ರತಿಷ್ಠಾನದ ರಜತ ಸಂಭ್ರಮದ ಪುಸ್ತಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಗೇಶ್ ಅವರ ೨೦೧೯ ರ ಸಾಲಿನಲ್ಲಿ ಪ್ರಕಟವಾದ ‘ಬಯಲು ಕನ್ನಡಿ’ ವಿಮರ್ಶಾ ಸಂಕಲನಕ್ಕೆ ಎಸ್. ಎಂ. ಕುಲಕರ್ಣಿ ಷಷ್ಟ್ಯಬ್ಧಿ ದತ್ತಿ ಪ್ರಶಸ್ತಿ(೨೫೦೦/- ರೂ ನಗದು) ಹಾಗೂ ೨೦೨೦ ರ ಸಾಲಿನಲ್ಲಿ ಪ್ರಕಟಗೊಂಡ ‘ಗರೀಬನ ಜೋಳಿಗೆ’ ಗಜಲ್ ಸಂಕಲನಕ್ಕೆ ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿ ಪ್ರಶಸ್ತಿಯನ್ನು (೧೦೦೦/- ರೂ. ನಗದು) ಪ್ರದಾನ ಮಾಡಲಾಯಿತು.

ಖ್ಯಾತ ಪತ್ರಕರ್ತ ಎಲ್. ಎಸ್. ಶಾಸ್ತ್ರಿ, ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ, ಮೌಲ್ಯಮಾಪಕರಾದ ಡಾ. ಲಕ್ಷ್ಮೀ ಶಂಕರ ಜೋಶಿ, ಧಾರವಾಡ ಆಕಾಶವಾಣಿ ಮುಖ್ಯಸ್ಥರಾದ ಡಾ. ಬಸು ಬೇವಿನಗಿಡದ, ಡಾ. ಪಿ ಜಿ. ಕೆಂಪಣ್ಣವರ, ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಈ ಎರಡೂ ಪ್ರಶಸ್ತಿಗಳಿಗೆ ಭಾಜನರಾದ ನಾಗೇಶ್ ನಾಯಕ ಅವರನ್ನು ರಾಮಲಿಂಗೇಶ್ವರ ವಿದ್ಯಾಮಂದಿರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು, ಶಿಕ್ಷಕ, ಸಿಬ್ಬಂದಿವರ್ಗ, ವಿದ್ಯಾರ್ಥಿ ಬಳಗ ಹಾಗೂ ಉಡಿಕೇರಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.