Homeಸುದ್ದಿಗಳುದಾನ ಮಾಡುವುದು ಪುಣ್ಯದ ಕಾರ್ಯ ಅದರಲ್ಲೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಭಾಷ್ ಕಂಪನಿಯ ಕಾರ್ಯ ಮಹತ್ವದ್ದು -...

ದಾನ ಮಾಡುವುದು ಪುಣ್ಯದ ಕಾರ್ಯ ಅದರಲ್ಲೂ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಭಾಷ್ ಕಂಪನಿಯ ಕಾರ್ಯ ಮಹತ್ವದ್ದು – ಗಣಪತಿ ಮಹರಾಜರು

ಯರಗಟ್ಟಿಃ ದಾನ ಮಾಡುವುದು ಒಂದು ಪುಣ್ಯದ ಕಾರ್ಯ  ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಯರಗಟ್ಟಿ ಸರಕಾರಿ ಶಾಲೆಗೆ ಭಾಷ್ ಕಂಪನಿಯವರು ನೀಡುತ್ತಿರುವ ಈ ಕೊಡುಗೆ ತುಂಬಾ ಮಹತ್ವದ್ದು.ಇದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅನುಕೂಲಕರ.ಮುಂದಿನ ದಿನಗಳಲ್ಲಿ ಭವಿಷ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೂಡ ಆಯೋಜಿಸುವ ಭಾಷ್ ಕಂಪನಿಯವರ ನಿರ್ಧಾರ ಸ್ವಾಗತಾರ್ಹ.ಇದರ ಸದುಪಯೋಗವಾಗಲಿ ಎಂದು ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾಷ್ ಕಂಪನಿಯವರು ಶಾಲೆಗೆ ನೀಡಿದ ಸುಸಜ್ಜಿತ ಡಿಜಿಟಲ್ ಸಭಾಂಗಣದ ಉದ್ಘಾಟನಾ ಸಮಾರಂಭದ  ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಇಂದಿನ ಸ್ಪಧಾತ್ಮಕ ಯುಗದಲ್ಲಿ ಸರಕಾರಿ ಶಾಲೆಗಳಿಗೆ ಇಂತಹ ಕೊಡುಗೆಯ ಅವಶ್ಯಕತೆ ಇದೆ.ಮಕ್ಕಳಿಗೆ ಶಿಕ್ಷಕರು ತಮ್ಮ ಬೋಧನೆಯಲ್ಲಿ ಈ ಪರಿಕರಗಳನ್ನು ಅಳವಡಿಸಿಕೊಂಡು ಬೋಧನೆ ಜರುಗಿಸಿ ಮಕ್ಕಳು ಕೂಡ ಇವುಗಳ ಸದುಪಯೋಗಪಡಿಸಿಕೊಂಡು ಗುಣಾತ್ಮಕ ಶಿಕ್ಷಣದೊಂದಿಗೆ ಆದರ್ಶ ಬದುಕನ್ನು ರೂಪಿಸಿಕೊಳ್ಳಿರಿ ಎಂದು ಅವರು ಕರೆ ನೀಡಿದರು.

“ಕಳೆದ ಎರಡು ವರ್ಷಗಳಲ್ಲಿ ಭಾಷ್ ಕಂಪನಿ ಈ ಶಾಲೆಗೆ ೨೦ ಕಂಪ್ಯೂಟರಗಳೊಂದಿಗೆ ಒಂದು ಸಾವಿರ ಲೀಟರ್ ಶುದ್ಧ ಕುಡಿಯುವ ನೀರಿನ ಘಟಕ,  ಮುಖ್ಯ ಶಿಕ್ಷಕರ ಕೊಠಡಿಯ ಡಿಜಿಟಲೀಕರಣ,  ಶಾಲಾ ಒಳಾಂಗಣ ಮತ್ತು ಹೊರಾಂಗಣ ಟೈಲ್ಸ ಅಳವಡಿಕೆ, ಲ್ಯಾಪಟಾಪ್, ೮೦ ಇಂಚ್ ಅಳತೆಯ ಸುತ್ತಳತೆಯ ಡಿಜಿಟಲ್ ಬೋರ್ಡ, ಸಿ ಸಿ ಕ್ಯಾಮರಾ ಹೀಗೆ ೬೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಈ ಶಾಲೆಯನ್ನು ಭಾಷ್ ಕಂಪನಿ ಅಭಿವೃದ್ಧಿಪಡಿಸಿದೆ.ಇದರ ಸದುಪಯೋಗ ತರಗತಿ ಕೊಠಡಿಗಳಲ್ಲಿ ಜರುಗಿದರೆ ನಮ್ಮ ಶ್ರಮ ಸಾರ್ಥಕ.ಮುಂದಿನ ದಿನಗಳಲ್ಲಿ ಭೋಜನಾಲಯದ ಆಧುನೀಕರಣ ಕೂಡ ಕೈಗೆತ್ತಿಕೊಳ್ಳಲಾಗುವುದು” ಎಂದು ಭಾಷ್ ಕಂಪನಿಯ ಮ್ಯಾನೇಜರ್ ಪ್ರಕಾಶ ಪಾಟೀಲ ಹೇಳಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ ಮಾತನಾಡಿ, ಯರಗಟ್ಟಿ ಶಾಲೆಗೆ ಬಾಷ್ ಕಂಪನಿ ನೀಡಿದ ಕೊಡುಗೆ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ನಾಂದಿ. ಇಂದಿನ ಕಂಪ್ಯೂಟರ್ ಯುಗದಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ಬೋಧನೆ ಸಾಗಿದರೆ ಮಕ್ಕಳಿಗೆ ಅದರ ಪ್ರಯೋಜನ ದೊರತಂತಾಗುವುದು.ಈ ದಿಸೆಯಲ್ಲಿ ಈ ಶಾಲೆಯ ಶಿಕ್ಷಕ ಶಿಕ್ಷಕಿಯರು ಇದರ ಸದುಪಯೋಗ ಪಡೆದುಕೊಂಡು ಬೋಧನೆಯಲ್ಲಿ ಗುಣಾತ್ಮಕತೆ ಸಾಧಿಸಿರಿ ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಿದ್ದನಗೌಡರ ಮಾತನಾಡಿ, “ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಭಾಷ್ ಕಂಪನಿಯವರ ಈ ಕೊಡುಗೆ ತುಂಬ ಮಹತ್ವದ್ದು. ಸರಕಾರಿ ಶಾಲಾ ಮಕ್ಕಳು ಇಂತಹ ವಿಶಿಷ್ಟ ಪರಿಕರಗಳನ್ನು ಬಳಸಿ ಶಾಲೆಯ ಬೋಧನೆಯಲ್ಲಿ ತೊಡಗಲು ತುಂಬಾ ಸಹಕಾರಿ.ಈ ದಿಸೆಯಲ್ಲಿ ಭಾಷ್ ಕಂಪನಿಯ ನಿರ್ದೇಶಕ ಮಂಡಳಿಗೆ ಧನ್ಯವಾದಗಳು”ಎಂದು ಧನ್ಯತೆಯನ್ನು ಅರ್ಪಿಸಿದರು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಸತಿ ನಿಲಯದ ಮೇಲ್ವಿಚಾರಕಿ ಆಶಾ ಫರೀಟ್ ಮಾತನಾಡಿ “ ಬಾಷ್ ಕಂಪನಿಯ ಈ ಸೌಲಭ್ಯ ನಿಜಕ್ಕೂ ಹೆಮ್ಮೆಯ ಸಂಗತಿ. ನಮ್ಮ ವಸತಿ ನಿಲಯದ ವಿದ್ಯಾರ್ಥಿನಿಯರು ಈ ಶಾಲೆಯಲ್ಲಿ ಓದುತ್ತಿದ್ದು ಬಡ ಮಕ್ಕಳ ಶಿಕ್ಷಣದ ಆಶಾಕಿರಣವಾಗಿ ಭಾಷ್ ಕಂಪನಿ ಅನುಕೂಲ ಕಲ್ಪಿಸಿದ್ದು.ಇದರ ಸದುಪಯೋಗವನ್ನು ನಾವು ಕೂಡ ಪಡೆದುಕೊಳ್ಳುತ್ತೇವೆ”ಎಂದು ನುಡಿದರು.

 ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡಿ “ಭಾಷ್ ಕಂಪನಿಯವರು ಈ ಶಾಲೆಗೆ ಆಧುನಿಕ ತಂತ್ರಜ್ಞಾನದ ರೂಪವನ್ನು ನೀಡಿರುವರು.ಇದು ಅರ್ಪಣಾ ಮನೋಭಾವದ ಮೂಲಕ ಜರುಗಿದೆ. ಮಕ್ಕಳು ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡುವ ಮೂಲಕ ಇದು ಸದುಪಯೋಗವಾಗಬೇಕು.ಜ್ಞಾನವನ್ನು ಸೈದ್ಧಾಂತಿಕ ಕೌಶಲ್ಯವನ್ನಾಗಿ ಪರಿವರ್ತಿಸುವ ಇಂದಿನ ಹೊಸ ತಂತ್ರಜ್ಞಾನ ಆಧಾರಿತ ಬೋಧನೆ ಈ ಶಾಲೆಯಲ್ಲಿ ಜರುಗಲು ಇದು ಸಹಕಾರಿ.ಮುಂದಿನ ದಿನಗಳಲ್ಲಿ ಭಾಷ್ ಕಂಪನಿಯವರ ಹೊಸತನದ ಆಲೋಚನೆ ಅಭಿನಂದನಾರ್ಹ. ಇಂದು ಜರುಗುವಂತಾಗಲಿ” ಎಂದು ಹಾರೈಸಿದರು.

ಎಸ್.ಡಿ.ಎಂ.ಸಿ ಸದಸ್ಯರಾದ ಶಿವಾನಂದ ಬಳಿಗಾರ ಮಾತನಾಡಿ “ಕಲಿಕೆಗೆ ಶೈಕ್ಷಣಿಕ ವಿಧಾನಗಳಲ್ಲಿ ಆಧುನಿಕ ಬೋಧನೋಪಕರಣಗಳ ಅವಶ್ಯಕತೆಯನ್ನು ಮನಗಂಡು ಇಂದು ಭಾಷ್ ಕಂಪನಿಯವರು ನಮ್ಮ ಶಾಲೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ.ನಮ್ಮ ಶಾಲಾ ಸುಧಾರಣಾ ಸಮೀತಿಯವರ ಪರವಾಗಿ ಕಂಪನಿಯ ನಿರ್ದೇಶಕರಿಗೆ ಧನ್ಯವಾದಗಳನ್ನು ಸಲ್ಲಿಸುವೆ.ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಗುಣಾತ್ಮಕ ಶಿಕ್ಷಣದತ್ತ ಪ್ರಗತಿಪರ ಹೆಜ್ಜೆ ಇರಿಸುತ್ತೇವೆ ಎಂಬ ಭರವಸೆ ನಮ್ಮ ಶಾಲೆಯ ಪರವಾಗಿ ನೀಡುವೆ”ಎಂದು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಅಜಿತಕುಮಾರ ದೇಸಾಯಿ, ಸುಧೀರ್ ಪಿಡ್ಡಿ, ಸಿಕಂದರ ಚಾಂದಕನ್ನವರ, ಸಕ್ಕೂಬಾಯಿ ಕುಂಬಾರ, ಮುಖ್ಯ ಶಿಕ್ಷಕರಾದ ಎ ಎ ಮಕ್ತುಂನವರ,  ಬಿ.ಆರ್.ಪಿಗಳಾದ ರಾಜು ಭಜಂತ್ರಿ ರತ್ನಾ ಸೇತಸನದಿ, ವ್ಹಿ.ಸಿ.ಹಿರೇಮಠ, ಬಿ.ಐ.ಚಿನಗುಡಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ, ರಾಜೇಂದ್ರ ವಾಲಿ, ರಮೇಶಗೌಡ ಪಾಟೀಲ, ಮಲ್ಲಿಕಾರ್ಜುನ ಹೂಲಿ, ಕುಮಾರ ಹಿರೇಮಠ ಎನ್.ಕೆ.ಹುಚ್ಚರಡ್ಡಿ, ಶಿವಾನಂದ ಮಿಕಲಿ, ಆರ್.ಕೆ.ಹುಣಸಿಕಟ್ಟಿ, ಸಿ.ಎಸ್.ಸಿದ್ದಬಸನ್ನವರ, ವ್ಹಿ.ಎಸ್.ಬಡಿಗೇರ, ಟಿ.ಎಂ.ಕಾಮನ್ನವರ, ರಮೇಶ ದೇವರಡ್ಡಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖ್ಯ ಶಿಕ್ಷಕರಾದ ಎ ಎ ಮಕ್ತುಂನವರ ಸ್ವಾಗತಿಸಿದರು. ಆರ್.ಕೆ.ಹುಣಸಿಕಟ್ಟಿ ನಿರೂಪಿಸಿದರು. ಶಿವಾನಂದ ಮಿಕಲಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group