ಹಡಪದ ಅಪ್ಪಣ್ಣನವರ ವಚನವನ್ನು ಬದುಕಿಗೆ ಅಳವಡಿಸಿಕೊಳ್ಳಬೇಕು – ಶರಣೆ ಮೇಘಾ ಪಾಟೀಲ
ಬೆಳಗಾವಿ – ವಂದನೆಗೆ ನಿಲ್ಲಬೇಡ ನಿಂದೆಗಂಜಿ ಓಡಲಿಬೇಡ ಹಿಂದೆ ಮುಂದೆ ಆಡಲಿಬೇಡ ಸಂದೇಹಗೊಳಲಿ ಬೇಡ ದ್ವಂದ್ವ ಬುದ್ದಿಯ ಕಳೆದು ನಿಂದಿರೆ ಬಸವ ಪ್ರಿಯ ಕೊಡಲ ಚನ್ನಬಸವಣ್ಣ ಎಂಬ ಹಡಪದ ಅಪ್ಪಣ್ಣನವರ ವಚನ ಪ್ರಸ್ತುತ ನಮ್ಮ ಬದುಕಿಗೆ ಇದನ್ನು ಅರ್ಥೈಸಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ನಾವು ದ್ವಂದ್ವ ನೀತಿಯಿಂದ ಹೊರಬಂದು ಧೃಡ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಶರಣೆ ಮೇಘಾ ಪಾಟೀಲ ಹೇಳಿದರು.
ದಿನಾಂಕ ೧೦.೭.೨೦೨೨ ರವಿವಾರದಂದು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ, ವಾರದ ಸತ್ಸಂಗ ಕಾರ್ಯಕ್ರಮದಲ್ಲಿ ಶರಣ ಹಡಪದ ಅಪ್ಪಣ್ಣನವರ ಜಯಂತಿಯ ನಿಮಿತ್ಯ ಶರಣೆಯರು ಅಪ್ಪಣ್ಣನವರ ವಚನಗಳ ಚಿಂತನೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶರಣೆ ಮೇಘಾ ಅವರು, ಮುಂದಿನ ದಿನಗಳಲ್ಲಿ ವಾರದ ಸತ್ಸಂಗದಿಂದ ನಮ್ಮಲ್ಲಾದ ಬದಲಾವಣೆಗಳೇನು ಎಂಬುದಾಗಿ ಚಿಂತನವನ್ನು ನಡೆಸುವ ಸಲಹೆಯನ್ನು ಕೊಟ್ಟರು.
ಪ್ರೊಫೆಸರ್ ಶ್ರೀಕಾಂತ್ ಶಾನವಾಡರು ವ್ಯಾವಹಾರಿಕ ಮತ್ತು ವಾಸ್ತವ ಸತ್ಯದ ಬಗ್ಗೆ ಮಾತನಾಡಿದರು.
ಗುರುಗಳಾದ ಮೃತ್ಯಂಜಯ ಅಪ್ಪನವರು ತಮ್ಮ ಆಶೀರ್ವಚನದಲ್ಲಿ ಗುರು ಲಿಂಗ ಜಂಗಮ ಮಹತ್ವವನ್ನು ತಿಳಿಸಿದರು ಗುರುಗಳಾದ ದಳವಾಯಿ ಅಪ್ಪನವರು “ಹಡಪದ ಅಲ್ಲ ಅದು ಹರಪದ” ಎಂದು ಹೇಳಿ ಶರಣರ ಶ್ರೇಷ್ಠತೆ ಬಗ್ಗೆ ತಿಳಿಸಿದರು.
ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ತನುಶ್ರೀ ಮೂಲಿಮನಿ ಮತ್ತು ಸಂಜಿತ ಕಳಸಣ್ಣವರ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಅಧ್ಯಕ್ಷ ಎಸ್ ಜಿ ಸಿದ್ನಾಳರು ಮತ್ತು ಎಲ್ಲ ಶರಣ ತಂದೆ ತಾಯಿಗಳು ಉಪಸ್ಥಿತರಿದ್ದರು .ಶರಣ ಕಟ್ಟಿಮನಿ ಅವರು ನಿರೂಪಿಸಿದರು.