ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (ರಿ) ಬೆಂಗಳೂರು ವತಿಯಿಂದ ಮಲ್ಲೇಶ್ವರಂ ಸರ್ಕಲ್ ನಲ್ಲಿ ಆಯೋಜಿಸಲಾಗಿದ್ದ ಕುವೆಂಪು ಜನ್ಮದಿನೋತ್ಸವದಲ್ಲಿ ಯುವ ಸಾಹಿತಿ ಬದರೀನಾಥ ಜಹಗೀರದಾರ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ “ಕುವೆಂಪು ಸ್ಮಾರಕ ಸಾಹಿತ್ಯ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಮನು ಬಳಿಗಾರ್ ವಹಿಸಿ ಮಾತನಾಡಿ, ಕುವೆಂಪು ಅವರ ವ್ಯಕ್ತಿತ್ವ ಮತ್ತು ವಿಶ್ವಮಾನವ ಸಂದೇಶದ ವಿವರಣೆಯನ್ನು ನೀಡಿದರು. ಕುವೆಂಪು ಅವರ ಕೃತಿಗಳು ಬೇರೆ ಭಾಷೆಗಳಿಗೆ ಭಾಷಾಂತರವಾದರೆ ಅವರ ಸಾಹಿತ್ಯದ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯುವುದು. ಮುನುಜಮತ ವಿಶ್ವಪಥ ಎಂಬುವ ನುಡಿ ನಿಜಕ್ಕೂ ವಿಶ್ವಕ್ಕೆ ಉತ್ತಮ ಸಂದೇಶ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಮಿಳುನಾಡಿನ ಡಾ. ತಮಿಳು ಸೇಲ್ವಿ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಜಾತಿ ಧರ್ಮಗಳನ್ನು ಮೀರಿದ್ದು. ವಿಶ್ವಮಾನವ ಸಂದೇಶ ನೀಡಿದ ಅಪ್ರತಿಮರು. ರಾಮಾಯಣ ದರ್ಶನಂ ಕೃತಿಯ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತ ಅಲ್ಲಿರುವ ವಿಶೇಷ ಪಾತ್ರ ಪರಿಚಯವನ್ನು ನೀಡಿದರು. ವಾಸ್ತವ ಸಂದೇಶ ನೀಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ ಎಂದರು.
ಕನ್ನಡ ಹೋರಾಟಗಾರ ರಂಗನಾಥ ಅವರು ಮಾತನಾಡಿ, ಕುವೆಂಪು ಅವರೊಂದಿಗಿನ ಒಡನಾಟ ಮತ್ತು ಅವರಿಗಿದ್ದ ಕನ್ನಡದ ಅಭಿಮಾನದ ಬಗ್ಗೆ ವಿವರಿಸಿದರು. ನಾಡಿನ ಶ್ರೇಷ್ಠ ಸಾಹಿತಿ ಆಗಿದ್ದರೂ ಯಾವುದೇ ಹಮ್ಮಿಲ್ಲದ ಸರಳ ವ್ಯಕ್ತಿ ಕುವೆಂಪು. ಇಂದು ಕನ್ನಡ ಉಳಿಸಿಕೊಳ್ಳಲು ಹರಸಾಹಸ ಮಾಡಬೇಕಿದೆ. ಸರಕಾರ ಸಂಘಟನೆಯ ಸದಸ್ಯರನ್ನು ತನ್ನ ವಶಕ್ಕೆ ತೆಗೆದುಕೊಂಡು ನಮ್ಮನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕೂಡಲೇ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಸಿ. ಎನ್.ಅಶ್ವಥ್ ನಾರಾಯಣ ವಹಿಸಿ ಮಾತನಾಡಿ, ಕನ್ನಡ ಸಾರಸ್ವತ ಲೋಕಕ್ಕೆ ಮಹಾಕವಿ ಕುವೆಂಪು ಅವರ ಕೊಡುಗೆ ಅಪಾರ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ರಚಿಸಿ ನಾಡನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬದುಕು ಬರಹ ಒಂದೇ ಆಗಿತ್ತು. ಅವರ ತತ್ವಆದರ್ಶಗಳು ಸರ್ವಕಾಲಕ್ಕೂ ಸಲ್ಲುವವು. ಕನ್ನಡದ ಉಳಿವಿಗಾಗಿ ಕನ್ನಡ ಸಂಘಟನೆಗಳು ಮಾಡುತ್ತಿರುವ ಹೋರಾಟಗಳು ಬಹಳಷ್ಟು ಮಹತ್ವ ಪಡೆದಿವೆ. ನಾಡಿಗೆ ಉತ್ತಮ ಸಂದೇಶ ಸಾರುವ ಸಾಹಿತ್ಯ ರಚನೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯಧ್ಯಕ್ಷ ಶಿವರಾಮೇಗೌಡರು, ಕನ್ನಡ ಕೃಷ್ಣ, ಕುಮಾರ, ಡಾ. ಮಲಕಪ್ಪ, ಹಿರಿಯ ಜಾನಪದ ವಿದ್ವಾಂಸ ಡಾ. ಅಪ್ಪಗೆರೆ ತಿಮ್ಮರಾಜು, ಕನ್ನಡ ಸಂಘಟನೆಗಳು, ಸದಸ್ಯರು, ಸಾಹಿತಿಗಳು, ಸಾಹಿತ್ಯಅಭಿಮಾನಿಗಳು, ಕಲಾವಿದರು ಭಾಗವಹಿಸಿದ್ದರು.