ಸಿಂದಗಿ; ಪಟ್ಟಣದ ಪುರಸಭೆ ಅಧ್ಯಕ್ಷ – ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕಾರಣಕ್ಕೆ ೧೬ ಜನ ಸದಸ್ಯರು ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಯಾಗಿ ತೆರವಾದ ಸ್ಥಾನಗಳಿಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮೆ. ೨೮ ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಾ. ಶಾಂತವೀರ ಮನಗೂಳಿ, ಉಪಾಧ್ಯಕ್ಷರಾಗಿ ಸಂದೀಪ ಚೌರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಘೋಷಣೆ ಮಾಡಿದರು.
ಒಟ್ಟು ೨೩ ಸದಸ್ಯರು ಹಾಗೂ ಶಾಸಕರು, ಸಂಸದರು ಸೇರಿ ೨೫ ಚುನಾಯಿತ ಸದಸ್ಯರಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಕೊನೆ ಹಂತದಲ್ಲಿ ಒಂದು ನಾಮಪತ್ರ ಹಿಂಪಡೆದಿದ್ದು. ಉಪಾದ್ಯಕ್ಷ ಸ್ಥಾನಕ್ಕೆ ಸಂದೀಪ ಚೌರ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಪರಿಶೀಲನೆ ಮಾಡಲಾಗಿ ಎಲ್ಲ ದಾಖಲೆಗಳು ಸರಿಯಿದ್ದ ಕಾರಣ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ೨೩ ವಾರ್ಡಗಳ ಪೈಕಿ ೨೨ ಜನ ಸದಸ್ಯರು ಹಾಜರಿದ್ದು ಓರ್ವ ಸದಸ್ಯೆ ವಿಜಯಲಕ್ಷ್ಮಿ ನಾಗೂರ ಗೈರು ಉಳಿದಿದ್ದಾರೆ. ಕೋರಂ ಭರ್ತಿಯಾಗಿದ್ದರಿಂದ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೂತನ ಅದ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಪುರಸಭೆಯ ಉಳಿದ ಅವಧಿಯಲ್ಲಿ ಶಾಸಕರ ಮಾರ್ಗದರ್ಶನದಲ್ಲಿ ಪೌರಾಡಳಿತ ಇಲಾಖೆ ಸಚಿವರಲ್ಲಿ ಅನುದಾನ ತಂದು ಅಭಿವೃದ್ಧಿಗೆ ಮುಂದಾಗುತ್ತೇವೆ ಅಲ್ಲದೆ ಪುರಸಭೆ ಆಡಳಿತ ಯಂತ್ರವನ್ನು ಬದಲಾವಣೆ ಮಾಡಲು ಪ್ರಯತ್ನಿಸುತ್ತೇನೆ. ನಮ್ಮಿಬ್ಬರ ಅವಿರೋಧವಾಗಿ ಆಯ್ಕೆಯಾಗುವಲ್ಲಿ ಪಕ್ಷ ಭೇದ ಮರೆತು ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು
ಈ ವೇಳೆ ಪುರಸಭೆ ಸದಸ್ಯರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಹಾಸೀಂ ಆಳಂದ, ಬಸವರಾಜ ಯರನಾಳ, ಖೈರೂನಬಿ ನಾಟೀಕಾರ, ಬೀಮಣ್ಣ ಕಲಾಲ, ಶ್ರೀಶೈಲ ಬೀರಗೊಂಡ, ಪ್ರತಿಬಾ ಕಲ್ಲೂರ, ಶರಣಗೌಡ ಬಿರಾದಾರ, ಗೊಲ್ಲಾಳ ಬಂಕಲಗಿ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.