ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಸ್ಥಳೀಯ ಐತಿಹಾಸಿಕ ಸ್ಥಳಗಳ ಕುರಿತು ಜಾಗೃತಿ ಮೂಡಿಸಲು ಎಂ ಎನ್ ಆರ್ ಎ ಬಿಇಡ್ ಕಾಲೇಜಿನಿಂದ ವಿಶ್ವ ಪಾರಂಪರಿಕ ದಿನಾಚರಣೆಯ ಅಂಗವಾಗಿ ‘ ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ ‘ ಎಂಬ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಮಂಗಳವಾರ ನಗರದ ಕೋಟೆ ಆವರಣದಿಂದ ನಮ್ಮ ನಡಿಗೆ ಐತಿಹಾಸಿಕ ಸ್ಥಳದ ಕಡೆಗೆ ಎಂಬ ಜಾಗೃತಿ ಜಾಥಾಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಹವಾಲ್ದಾರ್ ರುಕ್ಮಿಣಿ ಲಕ್ಕನಗೌಡರ್ ಅವರು ಚಾಲನೆ ನೀಡಿದರು. ಕೋಟೆ ಆವರಣದ ದುರ್ಗಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಪ್ರೊ.ಎಸ್. ವಿ. ವಾಲಿಶೆಟ್ಟಿ ಕೋಟೆಯ ಇತಿಹಾಸ ತಿಳಿಸಿಕೊಟ್ಟರು. ಬಳಿಕ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಲಾಯಿತು.ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಸ್ಥಳದ ಐತಿಹಾಸಿಕ ಮಹತ್ವವನ್ನು ಬಿ.ಆಯ್.ಮಿಡಕನಟ್ಟಿ ತಿಳಿಸಿದರು ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ಮುಕ್ತಾನಂದರವರು ಭಾವೀ ಶಿಕ್ಷಕರನ್ನು ಬೋಧನೆಯ ಮುಖ್ಯ ಉದ್ದೇಶ ಜ್ಞಾನಾರ್ಜನೆ ಮತ್ತು ಚಾರಿತ್ರ್ಯ ನಿರ್ಮಾಣ ಎನ್ನುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಐತಿಹಾಸಿಕ ಪ್ರಸಿದ್ಧ ಕಮಲ ಬಸ್ತಿಗೆ ಭೇಟಿ ನೀಡಲಾಯಿತು.
ಡಾ.ಎನ್.ಜಿ.ಬಟ್ಟಲ ಕಮಲ ಬಸದಿಯ ವಾಸ್ತುಶೈಲಿ, ಅದರ ವಿಶೇಷತೆ, ಕಮಲ ಬಸದಿಯಂದು ಕರೆಯಲು ಕಾರಣವಾಗಿರುವ ಅದರ ಒಳರಚನಾ ವಿನ್ಯಾಸದ ಕುರಿತು ಉಪನ್ಯಾಸ ನೀಡಿದರು.
ಎಸ್.ಜಿ.ಚಿನಿವಾಲ ವಿಶ್ವ ಪಾರಂಪರಿಕ ದಿನಾಚರಣೆಯ ಉದ್ದೇಶಗಳನ್ನು ತಿಳಿಸಿದರು.
ಹೀಗೆ ಪಾರಂಪರಿಕ ನಡಿಗೆಯ ಬೆಳಗಾವಿಯ ಪ್ರಮುಖ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ನೆರವೇರಿತು.
ಈ ವೇಳೆ ಮಾಹಿತಿ ನೀಡಿದ ಪ್ರಾಂಶುಪಾಲರಾದ ಡಾ. ಎನ್ ಜಿ ಬಟ್ಟಲ ಅವರು, ವಿಶ್ವ ಪಾರಂಪರಿಕ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ನಮ್ಮ ನಡಿಗೆ ಬೆಳಗಾವಿಯ ಐತಿಹಾಸಿಕ ಸ್ಥಳಗಳ ಕಡೆಗೆ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಐತಿಹಾಸಿಕ ಸ್ಥಳಗಳ ಮಹತ್ವ ಮತ್ತು ಅವುಗಳ ರಕ್ಷಣೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ. ನಾವು ನಮ್ಮ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು.ಪಾರಂಪರಿಕ ನಡಿಗೆಯಿಂದ ಸ್ಥಳಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಶಿಕ್ಷಕರಾಗುವವರಿಗೆ ಮೊದಲು ಸ್ಥಳೀಯ ಇತಿಹಾಸದ ಅರಿವು ಇರಬೇಕು. ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಇರಬೇಕು ಎಂದು ತಿಳಿಸಿದರು.
ಇಂದಿನ ಯುವ ಜನತೆ ಕೇವಲ ಮೋಜು ಮಸ್ತಿಗಾಗಿ ಸಮಯ ವ್ಯರ್ಥ ಮಾಡದೆ ನಮ್ಮ ಸುತ್ತಮುತ್ತಲೂ ಇರುವ ಐತಿಹಾಸಿಕ ಸ್ಥಳಗಳ ಮಹತ್ವವನ್ನು ಅರಿಯಬೇಕು ಮತ್ತು ಅವುಗಳ ರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿನಿ ಚೈತ್ರಾ ಅಭಿಪ್ರಾಯಪಟ್ಟರು.
ಈ ವೇಳೆ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್.ವಿ ವಾಲಿಶೆಟ್ಟೆ, ಬಿ.ಐ ಮಿಡಕನಟ್ಟಿ, ಎಸ್ ಜಿ ಚಿನವಾಲ್, ಸುನಿಲ ಪಾನಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.