ಭಾರತ ಪ್ರಜಾಪ್ರಭುತ್ವ ರಾಷ್ಟ್ರ.ಇಲ್ಲಿ ಹುಟ್ಟಿನಿಂದ ಬರುವ ಏಕೈಕ ಹಕ್ಕು ಮತದಾನ. ಬಹುಶಃ ಈ ಹಕ್ಕು ಬೇರೆ ಯಾವುದೇ ದೇಶದಲ್ಲಿ ಇರಲಿಕ್ಕಿಲ್ಲ.ಹುಟ್ಟಿ ಹದಿನೆಂಟು ವರ್ಷಕ್ಕೆ ಮತದಾನದ ಹಕ್ಕನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಪಡೆದುಕೊಳ್ಳುತ್ತಾನೆ. ಇದು ಜನ್ಮ ಸಿದ್ದ ಹಕ್ಕು. ಚುನಾವಣಾ ಸಂದರ್ಭಗಳಲ್ಲಿ ಮತದಾರರ ಪಟ್ಟಿ ಮಾಡಬೇಕು. ಇದನ್ನು ಭಾರತೀಯ ಚುನಾವಣಾ ಆಯೋಗ ಪ್ರತಿಶತ 99% ರಷ್ಟು ಶಿಕ್ಷಕರನ್ನೇ ನಿಯೋಜನೆ ಮಾಡಿದೆ.ಈ ಶಿಕ್ಷಕರು ಮತಗಟ್ಟೆ ಅಧಿಕಾರಿಗಳು.
ಇವರ ಕೆಲಸ ತಮ್ಮ ವ್ಯಾಪ್ತಿಯಲ್ಲಿ ಬರುವ ಹದಿನೆಂಟು ವರ್ಷ ತುಂಬಿದ ಯುವ ಜನರಿಗೆ ಮತದಾನ ಮಾಡಲು ಅವಕಾಶ ಮಾಡಿಕೊಡುವ ಸಲುವಾಗಿ ಮತದಾರರ ಗುರುತಿನ ಚೀಟಿಯನ್ನು ಮುದ್ರಿಸಿ ಕೊಡುವುದು. ಇದನ್ನು ಪ್ರತಿವರ್ಷ ಜನವರಿ ತಿಂಗಳ ಇಪ್ಪತ್ತೈದನೇ ತಾರೀಖಿನಂದು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಅಂದು ನೂತನ ಮತದಾರರಿಗೆ ಮತದಾನದ ಗುರುತಿನ ಚೀಟಿಯನ್ನು ಕೊಟ್ಟು ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಅಲ್ಲಿನ ಸ್ಥಳೀಯ ಮತಗಟ್ಟೆ ಅಧಿಕಾರಿಗಳು ಅವರಿಗೆ ಹಸ್ತಾಂತರಿಸುತ್ತಾರೆ. ಗುರುತಿನ ಚೀಟಿಯ ಮಹತ್ವ ಮತ್ತು ಅವಶ್ಯಕತೆ ಕುರಿತು ಮಾತನಾಡುತ್ತಾರೆ. ಅಲ್ಲಿಗೆ ಒಂದು ಜವಾಬ್ದಾರಿ ಮುಗಿಯಿತು. ನಂತರ ಈ ಮತದಾರರ ಗುರುತಿನ ಚೀಟಿಯನ್ನು ಪಡೆದವರು ರಾಷ್ಟ್ರೀಯ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗುತ್ತಾರೆ. ಹೊಸ ಮತದಾರರಿಗೆ ಯಾವುದೇ ನಿರ್ಬಂಧಗಳನ್ನು ವಿಧಿಸಿರುವುದಿಲ್ಲ.ಅವರು ಸ್ವತಂತ್ರ ಭಾರತದ ಸ್ವತಂತ್ರ ಪ್ರಜೆ .ಅವರು ತಮಗೆ ಬೇಕಾದ ಯಾವುದೇ ರಾಜಕೀಯ ಪಕ್ಷಗಳಿಗೆ ಮತದಾನ ಮಾಡಲು ಅರ್ಹತೆಯನ್ನು ಹೊಂದಿರುತ್ತಾರೆ.
ಈ ಹೊಸ ಮತದಾರರನ್ನು ರಾಜಕೀಯ ಪಕ್ಷಗಳು ತಮ್ಮ ಕಡೆಗೆ ಗಮನ ಸೆಳೆಯುವ ಉದ್ದೇಶದಿಂದ ಆಮಿಷಗಳನ್ನು ಒಡ್ಡುತ್ತಾರೆ. ಆ ಮೂಲಕ ಈ ಯುವ ಜನತೆ ತಮ್ಮ ಅಮೂಲ್ಯವಾದ ಒಂದು ಮತವನ್ನು ಹಾಳುಮಾಡಿಕೊಳ್ಳುತ್ತವೆ. ರಾಜಕೀಯ ಪಕ್ಷಗಳು ಕೇವಲ ಕೆಲವು ದಿನಗಳ ಕಾಲ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ, ಯುವ ಜನತೆಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತವೆ.
ಯುವ ಜನತೆ ರಾಜಕೀಯ ಪಕ್ಷಗಳು ನೀಡುವ ಬಿಡಿಗಾಸಿಗೆ ತಮ್ಮನ್ನು ತಾವು ಮಾರಿಕೊಳ್ಳುತ್ತವೆ. ರಾಜಕೀಯ ಎಂದರೆ ಏನು ಎಂಬುದರ ಕನಿಷ್ಠ ಅರಿವೂ ಕೂಡ ಇರದ ಯುವ ಜನತೆ ರಾಜಕೀಯಕ್ಕೆ ಧುಮುಕುವಂತೆ ಪ್ರೇರೇಪಿಸುತ್ತವೆ. ಯುವ ಜನತೆ ತಮ್ಮ ಬಾಳ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಂಡು ರಾಜಕೀಯಕ್ಕೆ ತಮ್ಮನ್ನು ತಾವು ಗುಲಾಮಗಿರಿಗೆ ಅರ್ಪಿಸಿಕೊಳ್ಳುತ್ತವೆ.
ರಾಜಕೀಯ ಕೆಲವು ಕೆಟ್ಟ ಪುಡಾರಿಗಳ ಗುಂಪು ಸೇರಿ ಯಾವುದೇ ರೀತಿಯ ದುಶ್ಚಟ ಮಾಡಿದ ಒಬ್ಬ ವ್ಯಕ್ತಿ ದುಶ್ಚಟಕ್ಕೆ ಬಲಿಯಾಗುತ್ತಾನೆ. ಇತ್ತೀಚಿನ ದಿನಗಳಲ್ಲಿ ಇನ್ನೂ ಪ್ರೌಢಶಾಲಾ ಶಿಕ್ಷಣ ಪಡೆಯುತ್ತಿರುವ ಅದೇಷ್ಟೋ ಮುಗ್ಧ ವಿದ್ಯಾರ್ಥಿಗಳ ಮೇಲೆ ಈ ರಾಜಕೀಯ ಪ್ರಭಾವ ಬೀರುತ್ತದೆ.
ಈ ವಿದ್ಯಾರ್ಥಿಗಳು ಅದೆಲ್ಲೋ ಕುಳಿತು ರಾಜಕೀಯ ಪಕ್ಷಗಳ ಮೇಲೆ ಮತಗಳ ಲೆಕ್ಕಾಚಾರ ಹಾಕುತ್ತಾರೆ. ಈ ವಿದ್ಯಾರ್ಥಿಗಳಿಗೆ ಈ ವಯಸ್ಸಿನಲ್ಲಿ ಈ ವಿಷಯ ಬೇಕಿತ್ತಾ? ಪಾಲಕರು ನಾವು ತಿಳಿದುಕೊಳ್ಳಬೇಕಿದೆ. ಒಂದೇ ಊರಿನ, ಒಂದೇ ಸಮುದಾಯದ, ಒಂದೇ ಮನೆತನದಲ್ಲಿ ಜನಿಸಿದ ಪಾಲಕರು ಪ್ರತಿದಿನ ರಾಜಕೀಯ ಪಕ್ಷಗಳ ಮೇಲೆ ಲೆಕ್ಕಾಚಾರ ಮಾಡುತ್ತಾರೆ. ಇದು ನಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ನಾವು ಯಾರೂ ಗಮನಿಸುತ್ತಿಲ್ಲ.
ಕಾರಣ ನಮ್ಮನ್ನು ನಾವು ಮಹಾನ್ ರಾಜಕೀಯ ತಜ್ಞರು ಎಂದು ತಿಳಿದುಕೊಂಡು ಮಾತನಾಡುತ್ತಿರುತ್ತೇವೆ.ಇದನ್ನು ಪಕ್ಕದಲ್ಲಿ ಕುಳಿತ ನಮ್ಮ ಮಕ್ಕಳು ಸೂಕ್ಷ್ಮವಾಗಿ ಗಮನಿಸುತ್ತವೆ.ಇದರ ಕಿಂಚಿತ್ತೂ ಅರಿವು ನಮಗಿಲ್ಲ.
ಮಾರನೇ ದಿನ ಇದೇ ವಿಷಯವನ್ನು ನಮ್ಮ ಮಕ್ಕಳು ಶಾಲೆಯಲ್ಲಿ ತಮ್ಮ ಸಹಪಾಠಿಗಳ ಜೊತೆಗೆ ಚರ್ಚಿಸುತ್ತವೆ.ಏನೂ ಅರಿಯದ ಮಕ್ಕಳು ನಮ್ಮ ಮನೆಯಲ್ಲಿ ಈ ರಾಜಕೀಯ ಪಕ್ಷಕ್ಕೆ ಸೇರಿದವರು, ನಮ್ಮ ಮನೆಯಲ್ಲಿ ಆ ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಮಾತನಾಡಿಕೊಂಡು,ತಮ್ಮ ಅಮೂಲ್ಯವಾದ ಸ್ನೇಹವನ್ನು ಕಳೆದುಕೊಳ್ಳುತ್ತವೆ. ನಮ್ಮ ಮಕ್ಕಳನ್ನು ನಿಜವಾಗಿಯೂ ದಾರಿ ತಪ್ಪಿಸುತ್ತಿರುವವರು ನಾವೇ.
ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಚಿಕ್ಕ ಯೋಚನೆ ಕೂಡ ನಮಗಿಲ್ಲ. ನಿಜವಾಗಿಯೂ ಯುವ ಜನತೆಯನ್ನು ಹಾಳು ಮಾಡುತ್ತಿರುವವರೂ ಬೇರೆ ಯಾರೂ ಅಲ್ಲ. ಮಾಧ್ಯಮಗಳ ಮೇಲೆ ಗೂಬೆ ಕೂರಿಸುತ್ತೇವೆ.ಇವೇ ಮಕ್ಕಳನ್ನು ಹಾಳು ಮಾಡುತ್ತವೆ ಎಂದು. ನಾವು ಈ ವಿಷಯವನ್ನು ಕೂಲಂಕುಷವಾಗಿ ಅಧ್ಯಯನ ಮಾಡುತ್ತೇವೆ. ಇದರಿಂದಾಗುವ ಪ್ರಯೋಜನವಾದರೂ ಏನು.?
ಚುನಾವಣಾ ಸಂದರ್ಭಗಳಲ್ಲಿ ಅವರು ಕೊಡುವ ಹಣ,ಹೆಂಡ,ಸೀರೆ ಮುಂತಾದ ವಸ್ತುಗಳು ನಮ್ಮ ಜೀವನವನ್ನು ಬದಲಿಸುವುದಿಲ್ಲ.ಅವರು ಕೊಟ್ಟಿದ್ದು ಅವತ್ತು ನಮ್ಮ ಒಂದು ದಿನದ ಊಟವನ್ನು ಹೊರತು ನಮ್ಮ ಮನೆಯ ಬಾಂಧವ್ಯವನ್ನು ಅಲ್ಲ. ಕೇವಲ ಯುವ ಜನತೆಯನ್ನು ಒಂದು ತಿಂಗಳ ಕಾಲ ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಬಳಸಿಕೊಂಡು ಅವರ ಭವಿಷ್ಯದ ಮೇಲೆ ಕಲ್ಲು ಹಾಕುವ ಶಕ್ತಿ ನಮಗೆ ಬೇಕಾ? ನಮ್ಮ ಮಕ್ಕಳು ಇಂದು ಏನನ್ನು ಮಾಡಿದರು? ಇನ್ನೂ ಏನು ಮಾಡಬೇಕೆಂದು ಯಾವತ್ತಾದರೂ ಯೋಚನೆ ಮಾಡಿದ್ದೇವೆಯೇ? ಈ ಪ್ರಶ್ನೆಗೆ ಉತ್ತರ ಇಲ್ಲ. ನಮ್ಮ ಮಕ್ಕಳು ಹೊರಗೆ ಹೋಗಿ ಅಲ್ಲಿ ಅವರು ಮಾಡುವ ಕಾರ್ಯಗಳನ್ನು ನಾವು ಯಾವತ್ತೂ ಯೋಚನೆ ಮಾಡಲಿಲ್ಲ. ಈ ರಾಜಕೀಯ ಚದುರಂಗದ ಆಟದಲ್ಲಿ ನಮ್ಮ ಯುವ ಜನತೆ ದಾಳವಾಗಿ ಆಡುತ್ತಿದ್ದಾರೆ. ರಾಜಕೀಯ ಪಕ್ಷಗಳು ನಮ್ಮ ಯುವ ಜನತೆಯನ್ನು ತಮ್ಮ ಆಟಕ್ಕೆ ಬಳಸಿಕೊಂಡು ಆಡುತ್ತಿದ್ದಾರೆ.
ಯಾವುದೇ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದರೂ,ನಮ್ಮ ಯುವ ಜನತೆಯನ್ನು ಮುನ್ನಡೆಸುವ ಶಕ್ತಿ ಇಲ್ಲ. ನಮ್ಮ ತಂದೆ ತಾಯಿ ಮತ್ತು ಕುಟುಂಬದ ನಿರ್ವಹಣೆಗೆ ನಾವು ಬೆಂಬಲವಾಗಿ ನಿಲ್ಲಬೇಕು. ಒಂದಷ್ಟು ದಿನ ರಾಜಕೀಯ ಪಕ್ಷಗಳ ಜೊತೆಗೆ ಸುತ್ತಾಡಿ ಬರುವ ನಮಗೆ ನಮ್ಮ ಕುಟುಂಬದ ಸದಸ್ಯರ ನೋವುಗಳು ಗೊತ್ತಿಲ್ಲ.
ಅಲ್ಲಿ ತುತ್ತು ಅನ್ನ ನೀಡುವ ಭೂಮಿ ಅಕಾಲಿಕ ಮಳೆಗೆ ಗುರಿಯಾಗುತ್ತಿದೆ.ಇಲ್ಲಿ ನಾವು ನಮ್ಮ ರಾಜಕೀಯ ನಾಯಕರ ಹಿಂದೆ ಬಾಲ ಬಡುಕರಾಗಿ ಸುತ್ತುತ್ತಾ ನಮ್ಮ ಜವಾಬ್ದಾರಿಯನ್ನು ಮರೆಯುತ್ತಿದ್ದೇವೆ.ಯಾವ ರಾಜಕೀಯ ಪಕ್ಷಗಳು ನಮಗೆ ಒಂದು ತುತ್ತು ಅನ್ನ ಹಾಕುವುದಿಲ್ಲ. ನಾವು ಕಷ್ಟ ಪಟ್ಟು ದುಡಿದು ಸಂಪಾದನೆ ಮಾಡಬೇಕು. ಅದಕ್ಕೆ ಗಾದೆ ಮಾತಿದೆ ರಾಮ ರಾಜ್ಯವಾದರೆ ರಾಗಿ ಬೀಸೋದು ತಪ್ಪುತ್ತಾ ಸಾದ್ಯವಿಲ್ಲ. ಹಾಗಾದರೆ ನಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಈ ರಾಜಕೀಯ ಪಕ್ಷಗಳಿಗೆ ಇಲ್ಲವೆಂದ ಮೇಲೆ ನಾವೇಕೆ ಹೀಗೆ ಇವುಗಳಿಗೆ ದಾಸರಾಗಬೇಕು? ಈ ರಾಜಕೀಯ ಪಕ್ಷಗಳು ನಮ್ಮ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವುದಿಲ್ಲ ಎಂದಾದರೇ ಇವುಗಳ ಅವಶ್ಯಕತೆ ಇದೆಯೇ? ಈ ರಾಜಕೀಯ ಪಕ್ಷಗಳು ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತವೆ. ಜೊತೆಗೆ ಹಿಂದಿನಿಂದಲೂ ಬೆಳೆದು ಬಂದಿರುವ ಸಂಬಂಧಗಳನ್ನು ಹಾಳು ಮಾಡುತ್ತವೆ ಎಂದಾದರೆ,ಇವುಗಳ ಅವಶ್ಯಕತೆ ನಮಗಿಲ್ಲ.
ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು