spot_img
spot_img

ಕೊರೋನಾಕ್ಕೆ ವರ್ಷ ; ಹದಗೆಟ್ಟ ಬದುಕಿನ ನೆನಪು ನಿರಂತರ

Must Read

- Advertisement -

ಚೀನಾದ ವುಹಾನ್ ನಲ್ಲಿ ಹುಟ್ಟಿಕೊಂಡು ಜಗದಾದ್ಯಂತ ವ್ಯಾಪಿಸಿ ಅಪಾರ ಸಾವು ನೋವಿಗೆ ಕಾರಣವಾಗಿದೆ ಎಂದು ಹೇಳಲಾದ ಕೊರೋನಾ ವೈರಸ್ ಬಂದ ನಂತರ ಸಾಮಾನ್ಯವಾದ ನೆಗಡಿಯ ಚಿಕಿತ್ಸೆಗೂ ವೈದ್ಯರ ದೃಷ್ಟಿಕೋನ ಬದಲಾಗಿದೆ. ಕೊರೋನಾ ಇರಬಹುದಾ ? ಎಂಬ ಸಂದೇಹದಿಂದಲೇ ಅವರ ಚಿಕಿತ್ಸೆ ಆರಂಭವಾಗುತ್ತದೆ. ಮುಖ್ಯವಾಗಿ ರೋಗಿಯ ಶರೀರದ ಆಮ್ಲಜನಕದ ಪ್ರಮಾಣ ಹಾಗೂ ಜ್ವರದ ತೀವ್ರತೆಯನ್ನು ಅಳೆಯಲಾಗುತ್ತದೆ. ಆಮ್ಲಜನಕ ದ ಪ್ರಮಾಣ ತೀರ ಕಡಿಮೆಯಿದ್ದರೆ ಪ್ರಾಥಮಿಕವಾಗಿ ಆ ರೋಗಿಯನ್ನು ನೋಡಲು ಸ್ವಲ್ಪ ಹಿಂದೆ ಮುಂದೆ ನೋಡತೊಡಗುತ್ತಾರೆ. ಅಂದರೆ ಕೊರೋನಾ ಇರಬಹುದೆಂಬ ಸಂದೇಹದಿಂದ ದೊಡ್ಡ ಆಸ್ಪತ್ರೆಗೋ ಅಥವಾ ಸರ್ಕಾರಿ ಆಸ್ಪತ್ರೆಗೋ ಕಳಿಸಿಕೊಡುತ್ತಾರೆ.

೨೦೧೯ ರಲ್ಲಿ ಕೊರೋನಾ ಎಂಬ ಮಹಾಮಾರಿ ಕಾಣಿಸಿಕೊಂಡಾಗ ಇಡೀ ಜಗತ್ತೇ  ಅಕ್ಷರಶಃ ನಲುಗಿತು, ನಡುಗಿತು. ಕೊರೋನಾ ಕಾಣಿಸಿಕೊಂಡ ವ್ಯಕ್ತಿಗೆ ಚಿಕಿತ್ಸೆ ಕೊಡುವುದಿರಲಿ ಹತ್ತಿರದಿಂದ ನೋಡಲು ಕೂಡ ಹೆದರುವಂಥ ವಾತಾವರಣ ನಿರ್ಮಾಣವಾಗಿತ್ತು. ಅದಕ್ಕೆ ಕಾರಣ ಕೊರೋನಾ ಅನ್ನುವುದು ಒಂದು ಸಾಂಕ್ರಾಮಿಕ ಅಷ್ಟೇ ಅಲ್ಲ ಭೀಕರ ಸಾಂಕ್ರಾಮಿಕ ಎನ್ನುವುದು.

ಕೊರೋನಾ ಬಂದವರು ಉಸಿರುಗಟ್ಡಿ ಸಾಯುತ್ತಿದ್ದರು, ರಸ್ತೆಯಲ್ಲಿ ಹೋಗುವಾಗಲೇ ಕುಸಿದು ಬೀಳುತ್ತಿದ್ದರು. ಯಾರೂ ಅವರನ್ನು ಹಿಡಿಯುವಂತಿರಲಿಲ್ಲ. ಸಮೀಪ ಕೂಡ ಹೋಗುವಂತಿರಲಿಲ್ಲ. ಕಣ್ಣೆದುರಿಗೇ ವ್ಯಕ್ತಿಯೊಬ್ಬ ಗಂಟಲು ಹಿಡಿದುಕೊಂಡು ನೆಲಕ್ಕೆ ಉರುಳಾಡಿ ಸಾಯುತ್ತಿದ್ದರೂ ಅಸಹಾಯಕರಾಗಿ ನೋಡುತ್ತ ನಿಲ್ಲುವ ಪರಿಸ್ಥಿತಿ. ಅಷ್ಟೇ ಯಾಕೆ ಸ್ವತಃ ತಮ್ಮ ಮಗುವೇ ಗಂಟಲಿನ ನೋವಿನಿಂದ ನರಳುತ್ತಿದ್ದರೂ ದೂರದಿಂದಲೇ ಸಮಾಧಾನ ಮಾಡುತ್ತ ಕಣ್ಣೀರು ಹಾಕುವ ಸಂಕಟ ತಂದೆ ತಾಯಿಯದಾಗಿತ್ತು. ಅಂಥ ಭೀಕರ ಸನ್ನಿವೇಶವನ್ನು ಕೊರೋನಾ ತಂದಿಟ್ಟಿತ್ತು. ಶತಮಾನದ ಹಿಂದೆ ಪ್ಲೇಗ್ ಎನ್ನುವ ಮಹಾಮಾರಿ ಜಗತ್ತನ್ನು ಕಾಡಿದ ಸ್ಥಿತಿಯನ್ನೇ ಜಗತ್ತು ಇಂದು ಕಾಣುತ್ತಿತ್ತು.

- Advertisement -

ಈ ರೋಗಕ್ಕೆ ಕೋವಿಡ್ ೧೯ ಎಂಬ ಹೆಸರಿಡಲಾಯಿತು. ಇದು ಜಗತ್ತಿನಲ್ಲಿ ವ್ಯಾಪಿಸಿಕೊಂಡ ರೀತಿ, ಅಲ್ಲಿನ ಜನರ ಜೀವನವನ್ನು ಬಿರುಗಾಳಿ ಯಂತೆ ದಿಕ್ಕುತಪ್ಪಿಸಿ ಹಾರಿಸಿದ ರೀತಿಗೆ ಇಡೀ ಜಗತ್ತೇ ಕಂಗಾಲಾಗಿತ್ತು. ವಿಚಿತ್ರವೆಂದರೆ ಪ್ರಪಂಚದಲ್ಲಿಯೇ ಮುಂದುವರೆದ ದೇಶಗಳೆನ್ನಿಸಿಕೊಂಡಿದ್ದ ಅಮೇರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಯಂಥ ದೇಶಗಳು ತತ್ತರಿಸಿ ಹೋಗಿದ್ದವು. ಆಧುನಿಕ ಜೀವನ ಶೈಲಿಗೆ ಮರುಳಾಗಿದ್ದ ಆ ದೇಶಗಳು ಕೊರೋನಾ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿ ಜನರ ಪ್ರಾಣವೆನ್ನುವುದು ತೀರಾ ತರಗೆಲೆಯಂತಾಗಿತ್ತು. ಪ್ರತಿದಿನ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದರು.

ಸತ್ತವರನ್ನು ಹೂಳಲು ಜಾಗವಿಲ್ಲ. ಮೊದಲಿಗೆ ಹೆಣಗಳನ್ನು ಹೊರುವವರಿಲ್ಲ ! ಜೆಸಿಬಿ ಯಂತ್ರದಿಂದ ಹೆಣಗಳನ್ನು ಸಾಗಿಸಿ ಹೂಳುವಂಥ ಭೀಕರ ಪರಿಸ್ಥಿತಿ. ಮೈಯನ್ನು ಇಡಿಯಾಗಿ ಮುಚ್ಚಿಕೊಂಡರೂ ಎಲ್ಲಾದರೂ ಸಣ್ಣ ಬಿರುಕಿನಲ್ಲಿ ವೈರಸ್ ಅತಿಕ್ರಮಣ ಮಾಡುವುದೋ ಎಂಬ ಭೀತಿಯಲ್ಲಿಯೇ ವೈದ್ಯಕೀಯ ಸೇವೆ ಮಾಡುವ ಅನಿವಾರ್ಯತೆ. ಪಿಪಿಇ ಕಿಟ್ ಎಂದು ಕರೆಯಲ್ಪಡುವ ದಿರಿಸು ಧರಿಸಿ ಯಾವುದೋ ಅನ್ಯಗ್ರಹದ ಜೀವಿಯಂತೆ ಕಾಣುತ್ತ ರೋಗಿಯ ಹತ್ತಿರ ಹೋಗುತ್ತಲೇ ಇದನ್ನು ನೋಡಿಯೇ ರೋಗಿ ಅರ್ಧ ಪ್ರಾಣ ಕಳೆದುಕೊಂಡು ಇನ್ನರ್ಧ ಪ್ರಾಣ ಸರಿಯಾದ ಚಿಕಿತ್ಸೆ ಸಿಗದೆ ಹೋಗುತ್ತಿತ್ತು. ಕೊರೋನಾ ಪಾಸಿಟಿವ್ ಅಂದರೆ ಸಾಕು ಶೇ.೯೯ ಆ ವ್ಯಕ್ತಿ ಬದುಕುವುದಿಲ್ಲ ಎಂಬುದು ಅಲಿಖಿತ ನಿಯಮವೇ ಆಗಿ ಎಲ್ಲರ ಬದುಕನ್ನು ಹೈರಾಣವಾಗಿಸಿತ್ತು.

ಜಗತ್ತಿನ ದೊಡ್ಡ ದೊಡ್ಡ ದೇಶಗಳಲ್ಲಿಯೇ ಜನರು ನೊಣಗಳಂತೆ ಸಾಯುತ್ತಿದ್ದರೆ ಇನ್ನೂ ಮೂಢನಂಬಿಕೆ, ಕಂದಾಚಾರ, ಅಜ್ಞಾನ ತುಂಬಿದ ದೇಶಗಳ ಪರಿಸ್ಥಿತಿ ಏನಾಗಿರಬೇಡ ! ಅಂಥ ದೇಶಗಳಲ್ಲಿ ನಮ್ಮದೂ ಒಂದು ತಾನೆ ? ಇಲ್ಲಿಯ ಜನರಲ್ಲಿ ಧಾವಂತವಿದೆ. ಜೀವದ ಖಬರಿಲ್ಲದೆ ದುಡಿಯಬೇಕೆಂಬ ತುಡಿತವಿದೆ. ಯಾವುದೇ ನಿಯಮಗಳ ಪಾಲನೆಯೆಂದರೆ ನಮಗೆ ಆಗಿಬರುವುದಿಲ್ಲ ! ಅಂಥ ದೇಶಕ್ಕೆ ಕೊರೋನಾ ವಕ್ಕರಿಸಿದರೆ ಗತಿಯೇನು ?

- Advertisement -

ಆದರೆ ಆದದ್ದೇ ಬೇರೆ. ನರೇಂದ್ರ ಮೋದಿಯವರಂಥ ಸಮರ್ಥ ನಾಯಕತ್ವ ಸಿಕ್ಕಿರುವ ದೇಶ, ಭಾರತವೀಗ ಬದಲಾಗಿದೆಯೆಂದೇ ಹೇಳಬೇಕು. ಮೋದಿಯವರ ಒಂದು ಇಷಾರೆಗೆ ಇಡೀ ದೇಶವೇ ಒಂದಾಗಿ ನಿಲ್ಲುತ್ತದೆಯೆನ್ನುವುದು ಕೊರೋನಾ ಕಾಲದಲ್ಲಿ ಸಾಬೀತಾಯಿತು. ೨೦೧೯ ನೇ ಸಾಲಿನ ಆರಂಭದಲ್ಲಿ ಭಾರತಕ್ಕೆ ಅದೇ ತಾನೆ ಕೊರೋನಾ ತನ್ನ ಕರಾಳ ಕಾಲಿಟ್ಟಿತ್ತು.

ದೈವ ಭಕ್ತರಾದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯಲ್ಲಿ ಸ್ಫೂರ್ತಿ ತುಂಬಲು  ಹಾಗೂ ಕೊರೋನಾ ರೋಗಿಗಳ ಸೇವೆಗೆ ನಿಂತ ವೈದ್ಯರು ದಾದಿಯರು, ಕೊರೋನಾ ವಾರಿಯರ್ಸ್ ಗಳಿಗೆ  ಅಭಿನಂದನೆ ಸಲ್ಲಿಸಲು ದೇಶಕ್ಕೆ ದೇಶವೇ ಹತ್ತು ನಿಮಿಷಗಳ ಕಾಲ ತಂತಮ್ಮ ಮನೆಗಳಲ್ಲಿ ದೀಪ ಬೆಳಗಿಸಲು ಹೇಳಿದರು. ಅವರ ಮಾತಿಗೆ ಸಿಕ್ಕ ಸ್ಪಂದನೆ ಅಭೂತಪೂರ್ವ ! ಇಡೀ ದೇಶಕ್ಕೆ ದೇಶವೇ ಸಾಯಂಕಾಲ ದೀಪಗಳ ಬೆಳಕಿನಿಂದ ಕಂಗೊಳಿಸಿತು. ಪ್ರತಿಯೊಬ್ಬರ ಮನೆಯ ಮುಂದೆ ಮತ್ತು  ಹೃದಯದಲ್ಲೂ ದೀಪಗಳ ಬೆಳಕು !! ಆ ಮೂಲಕ ಕೊರೋನಾ ವಾರಿಯರ್ಸ್ ಗಳ ಸೇವೆಗೆ ದೇಶದ ಜನತೆ ಗೌರವ ನೀಡಿದರು.

ಪ್ರತಿದಿನ ಕೊರೋನಾ ತನ್ನ ಕಬಂಧ ಬಾಹುಗಳನ್ನು ಹೆಚ್ಚೆಚ್ಚು ಚಾಚುತ್ತಿತ್ತು. ಅದರ ನಿಯಂತ್ರಣಕ್ಕೆ ಇಡೀ ದೇಶ ಮನೆಯಲ್ಲಿ ಕೂರದೆ ವಿಧಿಯಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ ೨೨ ರಂದು ಒಂದು ದಿನದ ಲಾಕ್ ಡೌನ್ ಘೋಷಣೆ ಮಾಡಿದರು. ಯಾರೂ ಮನೆ ಬಿಟ್ಟು ಹೊರಗೆ  ಹೋಗುವ ಹಾಗಿಲ್ಲ. ಯಾವುದೇ ವಾಹನ, ಮನುಷ್ಯರು, ಸಾಕು ಪ್ರಾಣಿಗಳು, ಎಲ್ಲರೂ ಮನೆಯಲ್ಲಿಯೇ ಇರಬೇಕು , ಅದೂ ಒಂದು ತಿಂಗಳ ಕಾಲ !

ಬೃಹತ್ ದೇಶ ಭಾರತ ಬಂದ್ ಆಗಿತ್ತು. ಎಲ್ಲಿಯೂ ಒಂದು ನರಪಿಳ್ಳೆಯೂ ಹೊರಗೆ ಕಾಣುತ್ತಿರಲಿಲ್ಲ. ವಾಹನಗಳ ಶಬ್ದವಿಲ್ಲ. ವಾಯು ಮಾಲಿನ್ಯವಿಲ್ಲ, ಶಬ್ದ ಮಾಲಿನ್ಯವಿಲ್ಲ. ಎಲ್ಲವೂ ಸ್ತಬ್ದ, ಸ್ತಬ್ಧ ! ಇದನ್ನು ಕಂಡ ಪ್ರಕೃತಿಗೆ ವಿಚಿತ್ರವೆನಿಸಿರಬೇಕು. ಎಲ್ಲೆಲ್ಲೂ ಶುದ್ಧ ಗಾಳಿ, ಶಾಂತ ವಾತಾವರಣ ! ಕೋಟ್ಯಂತರ ಖರ್ಚು ಮಾಡಿದ್ದರೂ ಸ್ವಚ್ಛವಾಗದ ಗಂಗಾ, ಯಮುನಾ, ಸರಸ್ವತಿಯಂಥ ನದಿಗಳು ಮಾಲಿನ್ಯವಿಲ್ಲದೆ ಫಳ ಫಳ ಹೊಳೆಯುತ್ತಿದ್ದವು. ಜಲಚರಗಳು, ಪ್ರಾಣಿ ಪಕ್ಷಿಗಳು ಆರೋಗ್ಯಕರ ಉಸಿರನ್ನು ಎಳೆದುಕೊಳ್ಳುತ್ತಿದ್ದವು.

ವಾಯು ಮಾಲಿನ್ಯಕ್ಕೆ ಹೆಸರಾಗಿದ್ದ ದೆಹಲಿ ಮಹಾನಗರ ಸ್ವಚ್ಛವಾಗಿತ್ತು ! ಹಾಗೆಯೇ ದೇಶ ಕೂಡ ! ಇದೆಲ್ಲದರ ಜೊತೆಗೆ ಕೊರೋನಾ ಕೂಡ ನಿಯಂತ್ರಣಕ್ಕೆ ಬಂದಿತ್ತು.

ಆದರೆ…..

ಜನರ ಬದುಕು ಹೈರಾಣಾಗಿತ್ತು. ಉದ್ಯೋಗ, ವ್ಯವಸಾಯಗಳು ಬಂದ್ ಆಗಿ ಜನರ ಜೀವನ ತೊಂದರೆಗೆ ಸಿಲುಕಿತ್ತು. ಹೇಳತೀರದಷ್ಟು ಸಂಕಷ್ಟಗಳು ಬಂದೊದಗಿದ್ದವು.  ಆದರೆ ಇದು ಅನಿವಾರ್ಯವಾಗಿತ್ತು. ದುಡ್ಡಿದ್ದವರು ಹೇಗೋ ಜೀವಿಸಿದರೆ, ಅಂದೇ ದುಡಿದು ಅಂದೇ ತಿನ್ನುವವರಿಗೆ ಜೀವನ ಅಕ್ಷರಶಃ ನರಕವಾಗಿತ್ತು. ಮಹಾನಗರಗಳಲ್ಲಿ ಸಿಲುಕಿದ್ದ ಯುವಕರು ಕೈಯಲ್ಲಿ ಕಾಸಿಲ್ಲದೆ ತಂತಮ್ಮ ಊರುಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಅಂಥದರಲ್ಲಿ ನಟ ಸೋನು ಸೂದ್ ಅಂಥವರು ಮಾನವೀಯತೆ ದೃಷ್ಟಿಯಿಂದ ಗಾಡಿಗಳ ವ್ಯವಸ್ಥೆ ಮಾಡಿ ಅವರವರ ಗೂಡು ತಲುಪಿಸಿದರು. ಮಾನವೀಯತೆ ಎನ್ನುವುದು ಈ ಕಾಲಕ್ಕೆ ವಿಜೃಂಭಿಸಿತ್ತು. ಎಷ್ಟೋ ಜನರು ಉದಾರವಾಗಿ ಆಹಾರ ಕಿಟ್ ಗಳನ್ನು ಜನರಿಗೆ ತಲುಪಿಸಿದರು. ಹೊಟ್ಟೆ ತುಂಬಿಸಿದರು. ಆದರೆ ಇಂಥ ಪರಿಸ್ಥಿತಿಯಲ್ಲಿಯೇ ಅನೈತಿಕವಾಗಿ ದುಡ್ಡು ಮಾಡುವವರೂ ಕಡಿಮೆ ಇರಲಿಲ್ಲ. ಕೊರೋನಾ ಪೀಡಿತರಿಗೆ ಹೆಚ್ಚು ಸಹಾಯ ಮಾಡಿದ ವೈದ್ಯಕೀಯ ಕ್ಷೇತ್ರದವರೇ ಹೆಚ್ಚು ಹೆಚ್ಚಾಗಿ ಜನರ ಹಣ ಕಿತ್ತು ಶೋಷಣೆ ಮಾಡಿದ್ದು ಅವರ ಸೇವೆಯನ್ನು ಮುಚ್ಚಿಹಾಕಿತು. ಒಂದು ಪಂಗಡದವರಂತೂ ಕೊರೋನಾವನ್ನು ಹರಡಲೆಂದೇ ಪಣ ತೊಟ್ಟವರಂತೆ ವರ್ತನೆ ತೋರಿದ್ದು ಭಾರತದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ನಿಂತಿತು.

ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿಯವರ ಸಹನೆ, ಭ್ರಾತೃತ್ವ ಗುಣವನ್ನು ಎಷ್ಟು ಕೊಂಡಾಡಿದರೂ ಸಾಲದು. ಮನಸು ಮಾಡಿದ್ದರೆ ಉದ್ದೇಶಪೂರ್ವಕವಾಗಿ ಕೊರೋನಾ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದಿತ್ತು ಅಥವಾ ಅವರನ್ನು ಗುಂಡಿಟ್ಟು ಕೊಲ್ಲಿ ಎಂಬ ಬಹುಜನರ ಬೇಡಿಕೆಯಂತೆ ಕೊಲ್ಲಬಹುದಿತ್ತು. ಅಂಥ ಕೆಲಸವನ್ನು ಕೇಂದ್ರ ಸರ್ಕಾರ ಮಾಡದೆ ಸಂಯಮ ತೋರಿದ್ದು ಅತ್ಯಂತ ಗಮನಾರ್ಹ. ಮೊಬೈಲ್ ನಲ್ಲಿ ಬರುತ್ತಿದ್ದ ಕಾಲರ್ ಟ್ಯೂನ್ ಕೂಡ, ‘ ನಾವು ವ್ಯಕ್ತಿಯನ್ನು ನೋಡಿ ಚಿಕಿತ್ಸೆ ಕೊಡಬೇಕೇ ಹೊರತು ವ್ಯಕ್ತಿಯ ಜಾತಿಯನ್ನಲ್ಲ ‘ ಎಂದು ಬದಲಾಗಿದ್ದು ‘ ಆ ‘ ವಿಶೇಷ ಧರ್ಮೀಯರಿಗೆ ಮುಖಕ್ಕೆ ಹೊಡೆದಂತಿತ್ತು.

ಹೀಗೆ ಅನೇಕ ವಿಷಯಗಳಲ್ಲಿ ಒಂದು ದಾಖಲೆಯನ್ನೇ ಸ್ಥಾಪಿಸಿದ ಕೊರೋನಾ ಎಂಬ ವೈರಸ್ ಜಗತ್ತಿನಾದ್ಯಂತ ಭೀಕರ ಪರಿಣಾಮಗಳನ್ನು ಸೃಷ್ಟಿಸಿ ಜನರ ಬದುಕನ್ನು ತಿಂದು ಹಾಕಿತು. ಈಗ ಮತ್ತೆ ಕೊರೋನಾ ಮಹಾಮಾರಿಯ ಭೀಕರತೆ ಹೆಚ್ಚಾಗಿದ್ದು  ಜನತೆ ಎಚ್ಚತ್ತುಕೊಳ್ಳಬೇಕಾಗಿದೆ.

ಎರಡನೆ ಅಲೆಯ ಹೆಸರಿನಲ್ಲಿ ಇನ್ನೂ ಹೆಚ್ಚಿನ ಕ್ರೂರತೆಯೊಂದಿಗೆ ಕೊರೋನಾ ವಕ್ಕರಿಸಿದೆ.ಆದರೆ ಕೊರೋನಾವನ್ನು ಎದುರಿಸಲು ಬೇಕಾದ ಪ್ರಾಥಮಿಕ ಎಚ್ಚರಿಕೆಯನ್ನು ಕೂಡ ಪಾಲಿಸಲು ಜನರು ಹಿಂಜರಿಯುತ್ತಿದ್ದುದು ಮುಂದಿನ ಅಪಾಯದ ಮುನ್ನೆಚ್ಚರಿಕೆಯನ್ನು ನೀಡುತ್ತಿದೆ. ಜನರು ತಿಳಿವಳಿಕೆಯಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಆದರೆ ಈಗ ಕೊರೋನಾದಿಂದ ಸತ್ತವರನ್ನು ಸುಡಲು ಕ್ಯೂ ಹಚ್ಚಬೇಕಾದ ಪರಿಸ್ಥಿತಿ ಬಂದಿರುವುದು ಕಂಡೂ ಕಾಣದಂತೆ ಇರುವುದು ತೀರಾ ಅಪಾಯಕಾರಿ. ಈ ನೋವು ನಿರಂತರವಾಗಿರುವಂತೆ ಕಾಣುತ್ತಿದೆ.

ಇನ್ನಾದರೂ  ಎಚ್ಚತ್ತುಕೊಳ್ಳಬೇಕು.  ಜನರು ಒಂದು ವಿಷಯ ಅರಿಯಬೇಕು. ಎಲ್ಲಾ ವಿಷಯಗಳಲ್ಲಿಯೂ ಸರ್ಕಾರವೇ ನಮ್ಮ ನೆರವಿಗೆ ಬರಲು ಸಾಧ್ಯವಿಲ್ಲ. ನಮ್ಮ ಬದುಕು ನಮ್ಮ ಕೈಯಲ್ಲಿಯೇ ಇದೆ. ಆದಷ್ಟು ನಾವು ಕೊರೋನಾ ವಿರುದ್ಧ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ಎಚ್ಚರಿಕೆಗಳು ಕೇವಲ ನೆಪ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರಬೇಕು.

ಉಮೇಶ ಬೆಳಕೂಡ, ಮೂಡಲಗಿ    

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group