ಮೂಡಲಗಿ 1 : ಅಳೆದು ತೂಗಿ ಹೋರಾಟದ ಮೂಲಕ ತಾಲೂಕಾಗಿ ಹೊರಹೊಮ್ಮಿದ ಮೂಡಲಗಿಯಲ್ಲಿ ಅಭಿವೃದ್ಧಿ ಕಾರ್ಯ ಒಂದು ಕಡೆ ಇರಲಿ ಸಾರ್ವಜನಿಕರ ತೆರಿಗೆ ಹಣ ಪೋಲಾಗದಿದ್ದರೆ ಸಾಕು ಎನ್ನುವಂತಾಗಿದೆ.
ಮೂಡಲಗಿಯು ತಾಲೂಕು ಕೇಂದ್ರವಾಗಿ ಹಲವು ವರ್ಷಗಳೇ ಕಳೆದರೂ ಅಭಿವೃದ್ಧಿ ಮಾತ್ರ ಶೂನ್ಯ. ಎಲ್ಲೆಂದರಲ್ಲಿ ತಗ್ಗು ದಿನ್ನೆಯ ರಸ್ತೆಗಳು, ತುಂಬಿಕೊಂಡ ಗಟಾರುಗಳು, ಅವುಗಳಲ್ಲಿ ನಲಿದಾಡುವ ಹಂದಿಗಳು…..ಈ ನಗರದ ಚಂದವನ್ನು ಹಾಡಿ ಹೊಗಳಬೇಕು. ನಗರ ಬೆಳೆದಂತೆ ದಿನೇ ದಿನೇ ಜನದಟ್ಟಣೆಯೂ ಹೆಚ್ಚುತ್ತಿದೆ ಹೀಗಿರುವಾಗ ನಗರದೆಲ್ಲೆಡೆ ಜನರು ಬೀದಿ ಬದಿಯಲ್ಲಿ ಮಲ,ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ದುರ್ವಾಸನೆ ಹಾಗೂ ರೋಗ ಹರಡುವ ಭೀತಿ ಹೆಚ್ಚಾಗುತ್ತಿದೆ. ಪುರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿಕೊಂಡು ಕುಳಿತಿರುವುದರಿಂದ ಸ್ವಚ್ವ ಭಾರತ ಅಭಿಯಾನ ಇಲ್ಲಿ ಕಣ್ಮರೆಯಾಗಿದೆ.
ಇದಕ್ಕೆ ಒಂದು ಉದಾಹರಣೆ ಎಂದರೆ, ಬಳಕೆಯಾಗದ ಸಂಚಾರಿ ಶೌಚಾಲಯಗಳು ಪುರಸಭೆ ಆವರಣದಲ್ಲಿ ಹಾಳಾಗಿ ಹೋಗುತ್ತಿವೆ. ಪುರಸಭೆ ಮುಂದೆಯೇ ಹಾಗೂ ಉಳಿದ ಏರಿಯಾಗಳಲ್ಲಿ ಬೀದಿ ಬದಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಮಹಿಳೆಯರು ದಿನನಿತ್ಯ ಓಡಾಡುವ ಸ್ಥಳಗಳಲ್ಲಿ ಮುಜುಗರಕ್ಕೀಡಾಗುತ್ತಿದ್ದಾರೆ.
ಈ ಸಂಚಾರಿ ಶೌಚಾಲಯಗಳ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣ ಹೀಗೂ ಪೋಲು ಆಗುತ್ತಿದೆ ಅಂತಾರೆ ವಿದ್ಯಾವಂತ ನಾಗರಿಕರು. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ವಚ್ಚ ಭಾರತ ಅಭಿಯಾನ ಒತ್ತು ನೀಡಬೇಕು ಎನ್ನುವುದು ಜನರ ಆಗ್ರಹ.
ಹಲವು ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ ಅಂತೂ ಹೇಳತಿರದು. ತಾಜಾ ಉದಾಹರಣೆಯೆಂದರೆ ಕಳೆದ ಮೂರ್ನಾಲ್ಕು ದಿನಗಳಿಂದ ಚರಂಡಿ ನೀರು ತುಂಬಿಕೊಂಡು ಸರಾಗವಾಗಿ ಹರಿಯದೆ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡು ನೀರು ನಿಂತಲ್ಲೇ ನಿಂತಿರುವುದರಿಂದ ದುರ್ವಾಸನೆ ಬೀರುತ್ತಿದೆ, ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ. ಆದರೆ ಪುರಸಭೆ ಮಾತ್ರ ಗಾಢ ನಿದ್ರೆಯಲ್ಲಿದೆ.