ಸಿಂದಗಿ; ವಿದ್ಯಾರ್ಥಿಗಳಿಗೆ ಬದುಕಿನ ಮೌಲ್ಯಗಳಾದ ಶಿಸ್ತು, ಸಂಯಮ, ಸಮಯ ಪರಿಪಾಲನೆ ಇವುಗಳೆಲ್ಲದರ ಸಂಗಮದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ಚಡಚಣ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಎಸ್. ದೇಸಾಯಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾ.ಶಿ.ಪ್ರ. ಮಂಡಳಿಯ ಸಿ.ಎಮ್. ಮನಗೂಳಿ ಪದವಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಸದ್ಭಳಕೆ ಮಾಡಿಕೊಂಡು ತಮ್ಮ ಜೀವನದ ಯಶಸ್ವಿಗೆ ಶ್ರಮವಹಿಸಬೇಕಲ್ಲದೆ ಸತತ ಓದಿನ ಕಡೆ ಹೆಚ್ಚಿನ ನೀಗಾ ವಹಿಸಿಬೇಕು ಎಂದು ತಿಳಿಸಿದರು.
ಉದ್ಘಾಟನೆಯನ್ನು ನೆರವೇರಿಸಿದ ನಿವೃತ್ತ ಪ್ರಾಚಾರ್ಯ ಪ್ರೊ. ಬಿ.ಎಮ್. ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಸೌಲಭ್ಯಗಳನ್ನು ಸಮರ್ಪಕವಾದ ರೀತಿಯಿಂದ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಡಾ. ಬಿ.ಜಿ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಪದವಿ ನಂತರದ ಜೀವನ ಸ್ಪರ್ಧಾತ್ಮಕವಾಗಿದ್ದು, ಸ್ಪರ್ಧೆಗೆ ಸಿದ್ದಗೊಳ್ಳಲು ತಾವು ಪಡೆದ ಶಿಕ್ಷಣ ಪೂರಕವಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಅಂಬರೀಶ ಬಿರಾದಾರ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕುಮಾರಿ ಶರಣಮ್ಮ ಬಿರಾದಾರ, ವಿದ್ಯಾರ್ಥಿ ಒಕ್ಕೂಟದ ಮಹಿಳಾ ಪ್ರತಿನಿಧಿ ಕುಮಾರಿ ಭಾಗ್ಯಶ್ರೀ ಬಿರಾದಾರ ಹಾಗೂ ಮಹಾವಿದ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ವೃಂದ ಪಾಲ್ಗೊಂಡಿದ್ದರು.
ಕಾಲೇಜು ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ರಾಹುಲ್ ಕಾಂಬಳೆ ಸ್ವಾಗತಿಸಿದರು. ಡಾ. ರಾಜೇಶ್ವರಿ ಹಲಸಂಗಿ ನಿರೂಪಿಸಿದರು. ಡಾ. ಆರತಿ ಅಳಗುಂಡಗಿ ವಂದಿಸಿದರು.