ಮೂಡಲಗಿ – ಹಬ್ಬಗಳು ಯಾರಿಗೂ ತೊಂದರೆ ಕೊಡುವಂತೆ ಇರಬಾರದು. ಹಾಗೆ ಹೋಳಿ ಹಬ್ಬವನ್ನು ಎಲ್ಲರೊಂದಿಗೆ ಶಾಂತಿ ಮತ್ತು ಸೌಹರ್ದತೆಯಿಂದ, ಸಂತೋಷದಿಂದ ಆಚರಿಸಿ ಎಂದು ಮೂಡಲಗಿ ಪಿಎಸ್ಐ ಸೋಮೇಶ ಗೆಜ್ಜಿ ಹೇಳಿದರು.
ಹೋಳಿ ಹಬ್ಬದ ನಿಮಿತ್ತ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಯಾರ ಕಡೆಯಿಂದಲೂ ಒತ್ತಾಯದಿಂದ ಹಣ ವಸೂಲಿ ಮಾಡಬಾರದು, ಪರೀಕ್ಷೆಗೆ ಹೋಗುವವರಿಗೆ ಯಾವುದೇ ಕೆಲಸಕ್ಕೆ ಹೋಗುವವರಿಗೆ ತೊಂದರೆ ಕೊಡಬಾರದು, ಒತ್ತಾಯದಿಂದ ಬಣ್ಣ ಹಚ್ಚಬಾರದು, ಸಂತೋಷವಾಗಿ ಹೋಳಿ ಆಚರಿಸಬೇಕು
ಕೆಮಿಕಲ್ ಮಿಶ್ರಿತ ಬಣ್ಣಗಳನ್ನು ಬಳಸಬಾರದು ಎಂದು ಸಲಹೆ ನೀಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಭಾವೈಕ್ಯತೆ ಬೆಳೆಸುವಂಥ ಹೋಳಿ ಹಬ್ಬವನ್ನು ಆಚರಿಸಿ ಮೂಡಲಗಿಯಿಂದಲೇ ಇಡೀ ರಾಜ್ಯಕ್ಕೆ ಒಂದು ಒಳ್ಳೆಯ ಸಂದೇಶ ದೊರಕುವಂತೆ ಮಾಡಬೇಕು ಎಂದು ನುಡಿದರು.
ಪುರಸಭಾ ಅಧ್ಯಕ್ಷ ಹನುಮಂತ ಗುಡ್ಲಮನಿ ಮಾತನಾಡಿ, ಓಣಿ ಓಣಿಗಳಲ್ಲಿ ಡಾಲ್ಬಿ ಸೌಂಡ್ ಹಚ್ಚುವುದರಿಂದಲೂ ಗಲಭೆಗಳಾಗುವ ಸಂಭವವಿದೆ ಇದನ್ನು ತಡೆಯಬೇಕು ಎಂದರು.
ಪತ್ರಕರ್ತ ಉಮೇಶ ಬೆಳಕೂಡ ಮಾತನಾಡಿ, ಎಲ್ಲ ಗಲಭೆಗಳಿಗೆ ಕಾರಣವಾಗುವ ಮದ್ಯವನ್ನು ಬಂದ್ ಮಾಡಬೇಕು. ಹಿಂಬಾಗಿಲಿನಿಂದ ಮದ್ಯ ಮಾರುವವರ ಮೇಲೆ ಕ್ರಮ ಕೈಗೊಳ್ಳಬೇಕು, ಗಂಡು-ಹೆಣ್ಣುಮಕ್ಕಳು ಜಂಟಿಯಾಗಿ ಬಣ್ಣ ಆಡುವ ಪದ್ಧತಿಗೆ ಕಡಿವಾಣ ಹಾಕುವ ಮೂಲಕವೂ ಹೋಳಿ ಹಬ್ಬವನ್ನು ಶಾಂತಿ ಹಾಗೂ ನೆಮ್ಮದಿಯಿಂದ ಆಚರಿಸಬಹುದು ಎಂದರು.
ಇದಕ್ಕೆ ಸಮ್ಮತಿಸಿದ ಪಿಎಸ್ಐ ಯವರು ಹೋಳಿ ಸಂದರ್ಭದಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗುವುದು ಯಾರಾದರೂ ಮಾರಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜೈ ಹೋ ಜನತಾ ವೇದಿಕೆಯ ಅಧ್ಯಕ್ಷ ಸುಭಾಸ ರಡರಟ್ಟಿ ಮಾತನಾಡಿ, ಪ್ರತಿವರ್ಷದಂತೆ ಈವರ್ಷವೂ ನಡೆಯುವ ಹಲಗೆ ಹಬ್ಬದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ರವಿ ಮಹಾಲಿಂಗಪೂರ, ಅಶೋಕ ಸಿದ್ಲಿಂಗಪ್ಪಗೋಳ ಮಾತನಾಡಿದರು.
ಸರ್ವ ಧರ್ಮೀಯರೂ ಪಾಲ್ಗೊಂಡಿದ್ದ ಈ ಸಭೆಯನ್ನು ಎನ್ ಎಸ್ ವಡೇರ ಪೊಲೀಸರು ನಿರೂಪಿಸಿದರು.