ಸಿಂದಗಿ: ಈ ನಾಡಿನಲ್ಲಿ ಜನಪದ ಸಾಹಿತ್ಯವನ್ನು ರುಮಾಲು ಮತ್ತು ಟೋಪಿ ಹಾಗೂ ಇಲಕಲ್ ಸೀರೆ ಉಟ್ಟ ಮಹಿಳೆಯರು ಉಳಿಸಿಕೊಂಡು ಬಂದಿದ್ದಾರೆ ಇಂದು ಫೇಸ್ಬುಕ್ ವಾಟ್ಸಾಪ್ ಭರಾಟೆಯಲ್ಲಿ ಅವಸಾನ ಹಂತ ತಲುಪುತ್ತಿರುವುದು ಖೇದಕರ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಯರಗಲ್ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮನವ ಹಕ್ಕುಗಳ ಕಲ್ಯಾಣ ಮಂಡಳಿ ವಿಜಯಪುರ ಇವುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಜಾನಪದ ಸಂಗೀತ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂದು ಹೊಲಗಳಲ್ಲಿ ರಾಶಿ ನಡೆಯಬೇಕಾದರೆ ಹಂತಿ ಜನಪದ ಸಾಹಿತ್ಯದ ಮೂಲಕ ಮೊದಲು ಬಂದ ಕಾಳುಕಡಿಗಳನ್ನು ಕಾಯಕಯೋಗಿಗಳಿಗೆ ದಾನ- ಧರ್ಮ ಮಾಡುವ ಪರಂಪರೆಯಲ್ಲಿ ಹಲವಾರು ಜನರಿಗೆ ಆಶ್ರಯವಾಗುತ್ತಿದ್ದರು. ಹಳ್ಳಿಗಳಲ್ಲಿ ರೈತಾಪಿ ಜನರು ಪ್ರತಿ ಮನೆಗೊಂದು ನಾಲ್ಕಾರು ದನಗಳನ್ನು ಕಟ್ಟಿ ಹೆಂಡಿ ಕಸ ಮಾಡಿ ಸಂತೋಷ ಪಡುತ್ತಿದ್ದರು ಇಂದು ದೊಡ್ಡ ದೊಡ್ಡ ಶಹರಗಳಲ್ಲಿ ಮನೆಗೆ ನಾಕೈದು ನಾಯಿಗಳನ್ನು ಸಾಕುತ್ತ ಪಾಲನೆ ಪೋಷಣೆ ಮುಂದಾಗಿ ಜನಪದ ಸಾಹಿತ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವರಿಂದ ಸಾಹಿತ್ಯ ಹಾಳಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಇದೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿ, ಜನಪದ ಸಾಹಿತ್ಯಕ್ಕೆ ದೊಡ್ಡ ಶಕ್ತಿಯಿದೆ. ಆದರೆ ಇಂದಿನ ಜನರು ತಂತ್ರಜ್ಞಾನಕ್ಕೆ ಮಾರುಹೋಗಿ ಜನಪದ ಸಾಹಿತ್ಯಕ್ಕೆ ಹೊಡೆತ ಬಿದ್ದಂತಾಗಿದೆ. ಸಾಹಿತ್ಯ ಕಲೆ, ಸಂಸ್ಕಾರ ಸೇರಿದಂತೆ ಹಲವು ಪ್ರತಿಭೆಗಳನ್ನು ಹೊರತರುವಂತ ಕಾರ್ಯ ನಡೆಯಬೇಕಾಗಿರುವುದು ಅತ್ಯವಶ್ಯಕವಾಗಿದೆ. ಹಿಂದಿನ ಮಹಿಳೆಯರು ಪ್ರತಿ ಹಂತದಲ್ಲಿ ಜನಪದ ಸಾಹಿತ್ಯವನ್ನು ಬಳಕೆ ಮಾಡುವ ಮೂಲಕ ಉಳಿಸಿಕೊಂಡು ಬಂದಿದ್ದಾರೆ. ಮಹಿಳೆಯರು ಸಹನೆ ತಾಳ್ಮೆಯಿಂದ ಮಕ್ಕಳ ಪಾಲನೆ ಪೋಷಣೆಯೊಂದಿಗೆ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ದತ್ತಿ ಸಂಚಾಲಕ ನ್ಯಾಯವಾದಿ ಮಹ್ಮದಗೌಸ ಹವಾಲ್ದಾರ ಮಾತನಾಡಿ, ಜಾನಪದ ಸಾಹಿತ್ಯ ಸುಗ್ಗಿ ಸಂದರ್ಭದಲ್ಲಿ ರೈತರು ಹೊಲಗಳಲ್ಲಿ ದುಡಿದು ಬಂದು ಕಟ್ಟೆ ಮೇಲೆ ಕುಳಿತು ಒಬ್ಬರ ಬಾಯಿಂದ ಇನ್ನೊಬ್ಬರ ಬಾಯಿಯಲ್ಲಿ ಹುಟ್ಟಿಕೊಂಡಿರುವ ಜಾನಪದ ಸಾಹಿತ್ಯ ಇಂದು ದೃಶ್ಯ ಮಾದ್ಯಮದ ಭರಾಟೆಯಿಂದ ನಶಿಸಿಹೋಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ನಿಲೋಗಿ ವೀರಕ್ತಮಠದ ಪೂಜ್ಯಶ್ರೀ ಜಗದ್ಗುರು ಸಿದ್ದಲಿಂಗ ಸ್ವಾಮಿಗಳು, ಸಾನ್ನಿಧ್ಯ ವಹಿಸಿದ ಯರಗಲ್ ಬಿ.ಕೆ ಆರೂಢಮಠದ ಪೂಜ್ಯಶ್ರೀ ಅದ್ವೈತಾನಂದ ಸ್ವಾಮೀಜಿ, ಶಂಕರಾನಂದಮಠದ ಪೂಜ್ಯಶ್ರೀ ರಾಜಪ್ಪಯ್ಯ ಸ್ವಾಮಿಜಿ, ಅಧ್ಯಕ್ಷತೆ ವಹಿಸಿದ ತಾಲೂಕು ಅಧ್ಯಕ್ಷ ರಾಜಶೇಖರ ಕೂಚಬಾಳ, ವೇ,ಮೂ. ಸಂಗಯ್ಯ ಹಳದಮಠ, ಮಹಿಬೂಬ ಜಮಾದಾರ ಮಾತನಾಡಿದರು.
ಗ್ರಾಮದ ಹಿರಿಯರಾದ ಗುರಲಿಂಗಪ್ಪಗೌಡ ಪಾಟೀಲ, ಹುಸೇನಸಾಬ ನದಾಫ್, ಮಡಿವಾಳಪ್ಪ ಕಡ್ಲಗೊಂಡ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಕಸಾಪದ ಅಶೋಕ ಗಾಯಕವಾಡ ವೇದಿಕೆ ಮೇಲಿದ್ದರು.
ಹುಬ್ಬಳ್ಳಿಯ ಚಲನಚಿತ್ರ ಸಂಗೀತ ಕಲಾವಿದೆ ಕು. ಪ್ರಣತಿ, ವಿಜಯಪುರದ ಭರತನಾಟ್ಯ ಕಲಾವಿದೆ ದಿವ್ಯಾ ಭಿಸೆ, ಜನಪದ ನೃತ್ಯ ಕಲಾವಿದೆ ದೀಕ್ಷಾ ಭಿಸೆ, ಸಿಂದಗಿಯ ವೀಣಾ ನಾಯಕ, ವಿಜಯಪುರ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ, ಆಲಮೇಲ ಜನಪದ ಸಂಗೀತ ಕಲಾವಿದೆ ಐಶ್ವರ್ಯ ಕೊಳಾರಿ ನಡೆಸಿದ ಸಾಹಿತ್ಯ ಜನಮನ ಸೂರುಗೊಂಡಿತ್ತು.
ಸುತ್ತಮುತ್ತಲಿನ ಗ್ರಾಮಸ್ಥರು, ಕಲಾಭಿಮಾನಿಗಳು, ಸಂಗೀತ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಬಾಗವಹಿಸಿ ಜನಪದ ಸಾಹಿತ್ಯದ ಸವಿ ಉಂಡಿದ್ದು ವಿಶೇಷವಾಗಿತ್ತು.
ಹುಬ್ಬಳ್ಳಿಯ ಚಲನಚಿತ್ರ ಸಂಗೀತ ಕಲಾವಿದೆ ಕು. ಪ್ರಣತಿ ಪ್ರಾರ್ಥಿಸಿದರು. ಭೀಮಣ್ಣ ಹೆರೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿದರು.