ಮೈಸೂರಿನ ಜೆ.ಪಿ.ನಗರ ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಿ.೨೭ ರಂದು ನಾಟ್ಯಚಾರ್ಯ, ವಿದ್ವಾಂಸ, ಕಲಾವಿದರು ಹಾಗೂ ರಾಜೋತ್ಸವ ಪುರಸ್ಕೃತರಾದ ಕೆ.ರಾಮಮೂರ್ತಿರಾವ್ ರವರನ್ನು ಸಂಘದ ಆವರಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ.ರಾಮಮೂರ್ತಿರಾವ್ ರವರು ಮನುಷ್ಯ ಮನುಷ್ಯನ ನಡುವೆ ಸ್ನೇಹ ಸಂಬಂಧವೇ ಬಹುದೊಡ್ಡ ಆಸ್ತಿ, ಸ್ನೇಹಕ್ಕೆ ಮಿಗಿಲಾದ ಸಂಬಂಧ ಬೇರೊಂದಿಲ್ಲ. ಕಷ್ಟ, ಸುಖ, ದುಃಖಗಳಲ್ಲಿ ಸ್ನೇಹಿತರು ಸಹಕಾರ ನೀಡುವುದರ ಜೊತೆಗೆ ಸಹಬಾಳ್ವೆಯಿಂದ ಬದುಕಬಹುದೆಂದು ತಿಳಿಸಿದರು.
ಮೈಸೂರು ಕಲೆಗಳ ತವರೂರು, ನನ್ನಂತಹ ಸಾವಿರಾರು ಜನ ಕಲಾವಿದರನ್ನು ಬೆಳೆಸಿದ ಸಾಂಸ್ಕೃತಿಕ ನೆಲೆವೀಡು. ರಾಜ ಮಹಾರಾಜರುಗಳು ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದರು. ಇಂದಿಗೂ ಕೂಡ ಇದು ಮುಂದುವರಿಯುತ್ತಿರುವುದು ಅತ್ಯಂತ ಪ್ರಶಂನೀಯ ವಿಚಾರ. ಪ್ರತಿಭೆ ಎಂಬುದು ಪ್ರತಿಯೊಬ್ಬರಲ್ಲಿಯು ನೆಲೆಸಿರುತ್ತದೆ, ಅದನ್ನು ಗುರುತಿಸಲು ವೇದಿಕೆ ಬಹಳ ಮುಖ್ಯ, ಯುವಕರು ವೇದಿಕೆಯನ್ನು ಬಳಸಿಕೊಂಡು ಪ್ರತಿಭೆಯನ್ನು ಪ್ರದರ್ಶಿಸಿ ಅತ್ಯುತ್ತಮ ಕಲಾವಿದರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾದ ಸಂಘದ ನಿರ್ದೇಶಕ ಕೆ.ಎಸ್.ಕುಮಾರ್ ಮಾತನಾಡಿ ಸಮಾಜದಲ್ಲಿ ಬಡತನವಿದ್ದು ಕಲೆಯನ್ನು ಪ್ರದರ್ಶಿಸಲಾಗದೆ ತಮ್ಮೊಳಗೆ ಕೆಲವರು ಮುಡಿಪಾಗಿಟ್ಟಿರುತ್ತಾರೆ. ಅದನ್ನು ಹೊರತೆಗೆದು ನೂರಾರು ಜನ ಗುರುತಿಸುವಂತಾದರೆ ಕಲೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗುತ್ತದೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಮಾನವ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ.ಎಸ್.ಕೃಷ್ಣರವರು ಮಾತನಾಡಿ ಸಮಾಜಕ್ಕೆ ಒಳ್ಳೆಯ ಕೆಲಸಗಳ ಮೂಲಕ ಋಣ ತೀರಿಸಲು ಮನಸ್ಸು ಇರಬೇಕು ಆ ಮನಸ್ಸನ್ನು ನಾವೆಲ್ಲರೂ ಬೆಳೆಸಿಕೊಂಡಾಗ ಸಮಾಜ ಮತ್ತಷ್ಟು ಬೆಳವಣಿಗೆ ಹೊಂದಲು ಸಹಾಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ದಿನಚರಿ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಶ್ರೀಮತಿ ಲತಾರಾಮಮೂರ್ತಿರಾವ್, ಸಂಘದ ಉಪಾಧ್ಯಾಕ್ಷರಾದ ಜಯರಾಮೇಗೌಡ, ಕಾರ್ಯದರ್ಶಿ ಎ.ಎಸ್.ಶಿವಕುಮಾರ್, ನಿರ್ದೇಶಕರಾದ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಬಿ.ಕೆಂಪರಾಜ್, ಶಿವಕುಮಾರ್ ಹಾಗೂ ಇತರರು ಹಾಜರಿದ್ದರು.

