ಭೂಮಿಯ ಮೇಲೆ ಯಾರು ಹೆಚ್ಚು ಆಸ್ತಿ ಮಾಡಬೇಕು? ಸ್ತ್ರೀ ಯೋ ಪುರುಷರೋ? ಆಸ್ತಿ ಇಲ್ಲವೆಂದರೆ ಅಸ್ತಿ ವಿಸರ್ಜನೆಗೂ ಯಾರೂ ಇರೋದಿಲ್ಲ ಎನ್ನುವ ಕಾಲದಲ್ಲಿ ಕಲಿಗಾಲವಿದೆ. ಹೀಗಾಗಿ ಆಸ್ತಿಗಾಗಿ ಹೊಡೆದಾಟ, ಬಡಿದಾಟ, ಹೋರಾಟ, ಹಾರಾಟ ಮಾರಾಟ ಮಾಡಿಕೊಳ್ಳುವ ವ್ಯವಹಾರದಲ್ಲಿ ಜೀವನ ಮುಳುಗಿಹೋಗುತ್ತಿದೆ.
ಆಸ್ತಿಯನ್ನು ಹೋಗುವಾಗ ಬರೋವಾಗ ಹೊತ್ತು ಬರೋದಾಗಿದ್ರೆ ಯಾರೂ ಬಡವರಾಗಿ ಹುಟ್ಟುತ್ತಿರಲಿಲ್ಲವೇನೋ? ಇಂದಿನ ಜೀವನ ಮುಂದೆ ಇರೋದಿಲ್ಲ.ಹೀಗಿರುವಾಗ ಈ ಜನ್ಮದ ಆಸ್ತಿ ಮುಂದಿನ ಜನ್ಮಕ್ಕೆ ಸಿಗುವುದೆ? ಆಸ್ತಿಯಲ್ಲಿಯೂ ಎರಡು ವಿಧವಿದೆ.ಒಂದು ಜ್ಞಾನ ಇನ್ನೊಂದು ವಿಜ್ಞಾನ. ಸತ್ಯಜ್ಞಾನದಿಂದ ಆಸ್ತಿ ಮಾಡಿದರೆ ಶಾಂತಿ,ಮಿಥ್ಯಜ್ಞಾನದಿಂದ ಮಾಡಿದ ಆಸ್ತಿ ಶಾಶ್ವತವಾದ ಶಾಂತಿ ಸಿಗೋದಿಲ್ಲವೆನ್ನುವ ಕಾರಣಕ್ಕಾಗಿಯೇ ಹಿಂದಿನ ಮಹಾತ್ಮರುಗಳು ಕೊನೆಗಾಲದಲ್ಲಿ ಭೂಮಿ ಮೇಲಿರುವ ತಮ್ಮ ಹೆಸರಿನ ಆಸ್ತಿಯನ್ನು ದಾನ ಮಾಡಿ ಮುಂದೆ ನಡೆದರು.
ಅವರ ಚರಾಸ್ತಿ ಭೂಮಿ ಮೇಲಿದ್ದರೂ ಯಾರದ್ದೋ ಪಾಲಾಗಿದೆ. ಸ್ಥಿರಾಸ್ತಿ ಜ್ಞಾನ ಮಾತ್ರ ಅವರ ಹೆಸರಲ್ಲಿದೆ. ಇದನ್ನು ಸ್ತ್ರೀ ಪುರುಷರಿಬ್ಬರೂ ಅರ್ಥ ಮಾಡಿಕೊಂಡು ಯಾವ ಆಸ್ತಿಗಾಗಿ ನಾವು ಜೀವನ ನಡೆಸಿರುವೆವೋ ಅದರಿಂದಾಗಿ ನನ್ನ ನಂತರದ ದಿನದಲ್ಲಿ ಯಾರಿಗೆ ಲಾಭ ಯಾರಿಗೆ ನಷ್ಟ ಎನ್ನುವ ಜ್ಞಾನ ನಾವೇ ಇದ್ದಾಗಲೇ ಪಡೆದಾಗಲೇ ಜೀವನಕ್ಕೆ ಅರ್ಥವಿರುತ್ತದೆ. ನಾವೆಷ್ಟೇ ಭೌತಿಕದಲ್ಲಿ ಆಸ್ತಿ ಮಾಡಿದರೂ ಮಿತಿಮೀರಿದರೆ ಸಮಸ್ಯೆಗಳಿಂದ ಬಿಡುಗಡೆ ಪಡೆಯಲು ಅದನ್ನು ದಾನ ಮಾಡಲೇಬೇಕು.
ಯಾರದ್ದೋ ಪಾಲನ್ನು ಯಾರೋ ಅನುಭವಿಸಿದರೂ ಅದರೊಡನೆ ಕರ್ಮಫಲ ಋಣವೂ ಸೇರಿರುವುದರಿಂದ ರೋಗ,ಕಷ್ಟ ನಷ್ಟಗಳು ಹೆಚ್ಚುತ್ತದೆ. ನಿಜ, ಹಣವಿದ್ದವರಲ್ಲಿ,ಆಸ್ತಿಯಿದ್ದವರಲ್ಲಿ ಸಮಾಜ ಗೌರವದಿಂದ ನಡೆಸಿಕೊಳ್ಳುತ್ತದೆ.ಆದರೆ ಅವರ ಹಿಂದಿನ ಉದ್ದೇಶ ಸ್ವಾರ್ಥ ಪೂರ್ಣವಾಗಿರುತ್ತದೆ.
ಜನರ ಮನಸ್ಸನ್ನು ಗೆಲ್ಲುವುದಕ್ಕಾಗಿ ಆಸ್ತಿ ಮಾಡೋದರಿಂದ ನಮ್ಮ ಆತ್ಮಕ್ಕೆ ತೃಪ್ತಿ, ಶಾಂತಿ,ಮುಕ್ತಿ ಸಿಗುವುದಾಗಿದ್ದರೆ ಈಗಿನ ಭಾರತದ ಜನಸಂಖ್ಯೆ ಇಷ್ಟೊಂದು ಬೆಳೆಯುತ್ತಿರಲಿಲ್ಲ. ಇಷ್ಟು ಅಧರ್ಮ, ಅನ್ಯಾಯ, ಭ್ರಷ್ಟಾಚಾರ ಬೆಳೆಯುತ್ತಿರಲಿಲ್ಲ. ಭೂಮಿಯ ಮೇಲೆ ಜನ್ಮ ಪಡೆದ ಜೀವಕ್ಕೆ ಜ್ಞಾನದ ಆಸ್ತಿ ಅತಿಮುಖ್ಯ. ಅದಿಲ್ಲದೆ ಎಷ್ಟು ಆಸ್ತಿ ಅಂತಸ್ತು, ಅಧಿಕಾರ, ಹಣಗಳಿಸಿದರೂ ಅದನ್ನು ತಿರುಗಿಸುವವರೆಗೂ ಆತ್ಮಕ್ಕೆ ಮುಕ್ತಿ ಯಿಲ್ಲ.
ಭೂಮಿಯ ಋಣ ತೀರಿದಲಾಗದು.ತಾಯಿಯ ಋಣ ತೀರಿಸಲಾಗದು ಎಂದ ಮೇಲೆ ಸ್ತ್ರೀಯಾಗಲಿ ಪುರುಷರಾಗಲಿ ಆಸ್ತಿಗಾಗಿ ಹೊಡೆದಾಡಿಕೊಂಡು ಜೀವನ ನಡೆಸೋದರಲ್ಲಿ ಅರ್ಥವಿಲ್ಲ. ಕೆಲವು ಸತ್ಯಗಳು ಎಲ್ಲರಿಗೂ ತಿಳಿಯುತ್ತದೆ.ಆದರೆ ಸಮಾಜದ ದೃಷ್ಟಿಯಿಂದ ನೋಡಿದಾಗ ಇದಿಲ್ಲದೆ ಸಮಾಜದಲ್ಲಿ ಜೀವನ ನಡೆಸೋದೆ ಕಷ್ಟವಾಗುತ್ತದೆ.
ಕಷ್ಟಪಡದೆ ಸುಖವಿಲ್ಲ ಎನ್ನುವುದು ಸತ್ಯ.ಆದರೂ ಇಂದು ಹೆಚ್ಚು ಜನರು ಅಡ್ಡ ದಾರಿಯಲ್ಲಿ ನಡೆದು ಭೌತಿಕದಲ್ಲಿ ಸುಖ ಜೀವನದಲ್ಲಿ ನಡೆಸುವಾಗ ನೇರವಾಗಿ ನಡೆಯುವವರನ್ನು ಸಮಾಜವೆ ತಡೆಯುತ್ತದೆ. ಹೀಗಾಗಿ ಸಮಸ್ಯೆ ಗಳು ಹೆಚ್ಚಾಗಿರೋದು. ಮಧ್ಯವರ್ತಿಗಳು ತಮ್ಮ ತಮ್ಮ ಆಸ್ತಿ, ಅಂತಸ್ತು, ಹೆಸರು ಅಧಿಕಾರಕ್ಕಾಗಿ ಮೇಲಿನವರ ಆಸ್ತಿಯನ್ನು ಕೆಳಗಿನವರಿಗೆ ತಲುಪಿಸೋ ಕೆಲಸದಲ್ಲಿ ಮಧ್ಯೆ ಹಾದುಹೋಗುವ ಇದನ್ನು ತಾವು ಬೇಕಾದಷ್ಟು ಬಳಸಿಕೊಂಡು ಅಳಿದುಳಿದ ಚೂರುಪಾರನ್ನು ಬಡವರಿಗೆ ನೀಡುತ್ತಾ ಬಡವರ ಜ್ಞಾನ ಕುಸಿದಿದೆ. ಬಡತನವಿರೋದು ಜ್ಞಾನದಲ್ಲಿ.
ಹಿಂದಿನ ಮಹಾತ್ಮರನ್ನು ಪೂಜಿಸುವವರಿಗೆ ಅವರ ಜ್ಞಾನದಿಂದ ಹಣ, ಹೆಸರು, ಅಧಿಕಾರ, ಸ್ಥಾನಮಾನಗಳು ಸುಲಭವಾಗಿ ಸಿಗುತ್ತಿದೆ ಎಂದರೆ ಜ್ಞಾನ ಪಡೆಯಲು ಅವರು ಕಷ್ಟಪಟ್ಟು ದುಡಿದು ಸಂಪಾದಿಸಿ ನಂತರ ಎಲ್ಲಾ ಸಮಾಜಕ್ಕೆ ದಾನ ಮಾಡಿ ಅಮರರಾದರು. ಯಾರ ಹಣಕ್ಕಾಗಲಿ, ಅಧಿಕಾರಕ್ಕಾಗಲಿ ಆಸೆ ಪಡದೆ ಜೀವನ ನಡೆಸಿದ ಅವರ ಜ್ಞಾನ ಇಂದಿಗೂ ಭೂಮಿಯಲ್ಲಿದೆ.
ಈ ಸತ್ಯ ಸಾಮಾನ್ಯಜ್ಞಾನದಿಂದ ಅರ್ಥ ಮಾಡಿಕೊಂಡರೆ ಈಗಿನ ಯುವಕ ಯುವತಿಯರಲ್ಲಿಯೂ ಆಂತರಿಕ ಜ್ಞಾನ ಇದೆ. ಆದರೆ ಅವರಿಗೆ ಯಾವ ಮಾರ್ಗದಲ್ಲಿ ನಡೆದರೆ ಅದರ ಸದ್ಬಳಕೆ ಆಗುವುದೆನ್ನುವುದನ್ನು ತಿಳಿಸಿಹೇಳುವ ಗುರುವಿಲ್ಲದೆ ಭೌತಿಕಾಸಕ್ತಿ ಹೆಚ್ಚಿಸಿಕೊಂಡು ರಾಜಕೀಯದ ಕಡೆ ಮುಖಮಾಡಿಕೊಂಡು ಹೋರಾಟಕ್ಕೆ ಇಳಿದಿದ್ದಾರೆ.
ಇದರಿಂದಾಗಿ ಜೀವನ ನಡೆಯುವುದೆ? ನಡೆದರೂ ಶಾಂತಿಯಿರುವುದೆ? ಹಣದ ಅಗತ್ಯವಿದೆ.ಆದರೆ ಅದನ್ನು ಸಂಪಾದಿಸುತ್ತಾ ಜೀವನ ಸತ್ಯ ತಿಳಿಯದೆ ಹೆಣವಾದರೆ ಹಣವನ್ನು ಇನ್ನಾರೋ ಬಳಸುತ್ತಾರೆ. ಬಳಸುವವರಲ್ಲಿಯೂ ಜ್ಞಾನವಿಲ್ಲವಾದರೆ ಆತ್ಮಕ್ಕೆ ಮುಕ್ತಿ ಸಿಗದೆ ಜನನ ಮರಣದ ಮಧ್ಯೆ ಸಿಲುಕಿ ಅದೇ ಹಿಂದಿನ ಜೀವನ.
ಇದೊಂದು ಅಜ್ಞಾನದ ಅತಿರೇಖವಷ್ಟೆ. ಹಿಂದೆ ದೊಡ್ಡ ಸಂಸಾರವಾದರೂ ಶಾಂತಿ ನೆಮ್ಮದಿ,ಸಂತೋಷ,ತೃಪ್ತಿ ಕರ ಜೀವನವಿತ್ತು. ಇಂದು ಸಣ್ಣ ಸಂಸಾರದಲ್ಲಿದ್ದರೂ ಶಾಂತಿಯಿಲ್ಲವಾದರೆ ಜ್ಞಾನದ ಕೊರತೆ ಕಾರಣ. ಹೀಗಾಗಿ ಭಾರತೀಯರಾಗಲಿ ವಿದೇಶಿಗರಾಗಲಿ ಮೊದಲ ಶಿಕ್ಷಣದಲ್ಲಿ ಸತ್ಯಜ್ಞಾನವಿರಲಿ.
ಮನುಕುಲದ ಉದ್ದಾರ ಸತ್ಯಜ್ಞಾನದೊಳಗಿದೆ.ಸತ್ಯ ಎಲ್ಲಿದೆ? ಭೂಮಿಯಲ್ಲಿದೆಯೇ? ಆಕಾಶದಲ್ಲಿದೆಯೆ? ಸತ್ಯ ನಮ್ಮೊಳಗೇ ಅಡಗಿದೆ. ಸತ್ಯವೇ ದೇವರಾಗಿದೆ. ಆದರೆ, ಭೌತಿಕದಲ್ಲಿ ಸತ್ಯಕ್ಕೆ ಬೆಲೆಯಿಲ್ಲದೆ ಆಧ್ಯಾತ್ಮ ಸತ್ಯ ಹಿಂದುಳಿದಿದೆ. ಮಕ್ಕಳನ್ನು ದೇವರೆನ್ನುತ್ತಿದ್ದರು ಕಾರಣ ಅವರ ನಿಷ್ಕಲ್ಮಶ ಮನಸ್ಸು ಸ್ವಚ್ಚವಾಗಿರುತ್ತಿತ್ತು.
ಆದರೆ ಇಂದಿನ ಮಕ್ಕಳ ಮನಸ್ಸು ಹಾಳು ಮಾಡಿ ಪೋಷಕರೆ ಅವರನ್ನು ಒಂದು ಯಂತ್ರದಂತೆ ಬಳಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಭೌತಿಕಾಸಕ್ತಿ ಹೆಚ್ಚಿಸಿ ಬೆಳೆಸಿದರೆ ಮಹಾತ್ಮರನ್ನು ದೂರಮಾಡಿಕೊಂಡಂತಾಗುತ್ತದೆ. ಧಾರ್ಮಿಕ ಆಚರಣೆ ಸತ್ಯ,ಧರ್ಮದ ಪರವಾಗಿದ್ದಿದ್ದರೆ ಈಗ ಯಾಕೆ ಇಷ್ಟು ಸಮಸ್ಯೆ ಬೆಳೆಯುತ್ತಿತ್ತು? ಆಚರಣೆಗಳಿಂದ ಮನಸ್ಸು ಆತ್ಮ ಶುದ್ದವಾಗಬೇಕಾದರೆ ಅದರಲ್ಲಿ ಸತ್ಯಜ್ಞಾನವಿರಬೇಕು.
ರಾಜಕೀಯದ ವ್ಯವಹಾರವಿದ್ದರೆ ಹಣ,ಆಸ್ತಿ,ಅಂತಸ್ತು, ಹೆಸರು, ಪದವಿ, ಪದಕ, ಪ್ರತಿಷ್ಟೆ ಸಿಕ್ಕರೂ ಎಲ್ಲೋ ಒಂದು ಮೂಲೆಯಲ್ಲಿರುವ ಸತ್ಯ ಜೀವನದ ಕೊನೆಯಲ್ಲಿ ಮುಂದೆ ಬಂದು ಪ್ರಶ್ನೆ ಮಾಡಿದರೆ ಉತ್ತರ ನಮ್ಮಲ್ಲಿರೋದಿಲ್ಲ. ಕಾರಣ ನಾವು ಸತ್ಯದ ಹಿಂದೆ ನಡೆದಿರೋದಿಲ್ಲವಲ್ಲ. ಹೀಗಾಗಿ ಆಚರಣೆಗಳ ಹಿಂದಿನ ಉದ್ದೇಶ, ಗುರಿ, ಗುರುವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಜ್ಞಾನದ ಶಿಕ್ಷಣದಿಂದ ಸಾಧ್ಯ.
ಯಾರೋ ಯಾವುದೋ ಯುಗ, ಕಾಲದಲ್ಲಿ ಹೇಳಿದ್ದಾರೆ, ಮಾಡಿದ್ದಾರೆ, ನಡೆದಿದ್ದಾರೆ ಎನ್ನುವ ಕಾರಣಕ್ಕೆ ನಾವು ಈಗಿನ ಕಾಲದಲ್ಲಿ ಹಾಗೆಯೇ ನಡೆಯಲು ಸಾಧ್ಯ ವಾದರೆ ಉತ್ತಮ. ಸಾಧ್ಯವಿಲ್ಲವೆಂದರೆ ಬೇರೆಯವರನ್ನು ನಡೆಸೋ ರಾಜಕೀಯ ಬಿಟ್ಟು ನಮ್ಮನ್ನು ನಾವು ಅರಿತು ನಮ್ಮ ಕಾಲುಬುಡದ ಸ್ವಚ್ಚತೆ ಕಡೆಗೆ ನಡೆಯಬೇಕು.
ನಮಗೆ ಅಧಿಕಾರ,ಜ್ಞಾನ ಭಗವಂತ ನೀಡಿರುವಾಗ ಅದನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳುವಾಗ ಎಲ್ಲರೊಳಗೂ ಅಡಗಿರುವ ಪರಮಾತ್ಮನ ಸತ್ಯವನ್ನು ಗೌರವದಿಂದ ಕಾಣುವುದೂ ಧರ್ಮವೆ. ಹಾಗಂತ ಸತ್ಯ ಕಾಣೋದಿಲ್ಲ. ಅರಿವಿಗೂ ಬರೋದಿಲ್ಲ. ಹೀಗಾಗಿ ಹಿಂದಿನ ಮಹಾತ್ಮರುಗಳು ತೋರಿಸಿದ ದಾರಿಯಲ್ಲಿ ನಡೆಯುವುದು ಅಗತ್ಯ.ದಾ ರಿಯನ್ನು ಮುಚ್ಚಿ,ಇಲ್ಲ ದಾರಿಗೆ ಅಡ್ಡ ನಿಂತು ರಾಜಕೀಯ ನಡೆಸುವವರಿಗೇ ಅಧಿಕಾರ, ಸಹಕಾರ, ಗೌರವ ನೀಡುತ್ತಾ ನಮ್ಮೊಳಗೇ ಇದ್ದ ಮಹಾಚೈತನ್ಯ ಮರೆತರೆ ನಷ್ಟ ಯಾರಿಗೆ? ಇಲ್ಲಿ ಸ್ತ್ರೀ ಆಸ್ತಿ ಮಾಡಿದರೆ ತಪ್ಪು, ಪುರುಷ ಮಾಡಿದರೆ ಸರಿ ಎನ್ನುವ ಭಿನ್ನಾಭಿಪ್ರಾಯ ದಿಂದ ಸ್ತ್ರೀ ಶಕ್ತಿಯನ್ನು ಆಳೋದಕ್ಕೆ ಹೊರಟು, ಈಗ ಸ್ತ್ರೀ ಭೌತಿಕದಲ್ಲಿ ಆಸ್ತಿ ಮಾಡಿ ಪುರುಷನಿಗೆ ವಿರೋಧಿಸುವ ಮಟ್ಟಿಗೆ ಸಂಸಾರ ನಡೆದಿದೆ.ಇದರಿಂದಾಗಿ ನಷ್ಟ ಯಾರಿಗಾಗಿದೆ? ಸಮಾನತೆ ಜ್ಞಾನದಲ್ಲಿರಲಿ. ಜ್ಞಾನವೇ ಮಾನವನ ಆಸ್ತಿ.
ಓದಿದ್ದನ್ನು ಅಳವಡಿಸಿಕೊಂಡು ಸತ್ಯ ತಿಳಿಯುವುದೆ ಜ್ಞಾನ. ಓದಿದ ವಿಚಾರ ಆಧ್ಯಾತ್ಮ ವಾಗಿದ್ದರೆ ಸಂಸಾರದಿಂದ ಮುಕ್ತಿ. ಭೌತಿಕವಾಗಿದ್ದರೆ ರಾಜಕಿಯ ಶಕ್ತಿ. ಆಳೋದು ತಪ್ಪಲ್ಲ.ಆದರೆ ಆಳಾಗಿ ಕಾಣೋದು ತಪ್ಪು. ಆಳೋರೂ ಒಂದು ರೀತಿಯಲ್ಲಿ ಆಳಾಗಿರುತ್ತಾರೆನ್ನುವುದೆ ಜ್ಞಾನ. ಪ್ರಜಾಪ್ರಭುತ್ವದಲ್ಲಿ ಆಳೋರು ಯಾರು? ಆಳಾಗಿರೋರು ಯಾರು? ಇಬ್ಬರೂ ದೇಶದ ಪ್ರಜೆಗಳೆ.
ಭಾರತಮಾತೆಯನ್ನು ಜ್ಞಾನದಿಂದ ಆಳಿದರೆ ಅದೇ ದೇಶದ ಆಸ್ತಿ. ಇದಕ್ಕೆ ಬೇಕಾಗಿದೆ ಭಾರತೀಯರಿಗೆ ಸತ್ಯ ಜ್ಞಾನದ ಶಿಕ್ಷಣ. ಸತ್ಯದಿಂದ ಭೌತಿಕ ಜಗತ್ತು ಬೆಳೆದರೆ ಶಾಂತಿ.ಇಲ್ಲವಾದರೆ ಕ್ರಾಂತಿಯ ಅಶಾಂತಿ.ಪುರಾಣ ಪುರುಷ ಸ್ತ್ರೀಯರು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾರೆ ಉತ್ತಮ ಜ್ಞಾನದಿಂದ ಸಂಸ್ಕಾರ ಪಡೆದ ಮಕ್ಕಳೊಳಗೆ ಮಹಾತ್ಮರನ್ನು ಕಾಣೋದಕ್ಕೆ ಗುರು ಹಿರಿಯರು, ಶಿಕ್ಷಕರು ಬೆಳೆಸೋದಕ್ಕೆ ಹಣಕ್ಕಿಂತ ಜ್ಞಾನದ ಶಿಕ್ಷಣ ನೀಡಬೇಕಿತ್ತು.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು