Homeಸುದ್ದಿಗಳುಒಳ್ಳೆಯ ಗುಣಗಳು ರತ್ನಗಳಿಗೆ ಸಮಾನ - ಯಶವಂತ ಗೌಡರ

ಒಳ್ಳೆಯ ಗುಣಗಳು ರತ್ನಗಳಿಗೆ ಸಮಾನ – ಯಶವಂತ ಗೌಡರ

ಸವದತ್ತಿಃ “ಪಾಪ ಕಾರ್ಯಕ್ಕೆ ಮನಸ್ಸನ್ನು ಕೊಡದೇ ಪುಣ್ಯ ಕಾರ್ಯವನ್ನೇ ಮಾಡಬೇಕು. ಮನುಷ್ಯನನ್ನು ಅವನ ಗುಣಗಳಿಂದ ಅಳೆಯುತ್ತಾರೆಯೇ ಹೊರತು ಸಂಪತ್ತಿನಿಂದ ಅಲ್ಲ.ನಮ್ಮ ನಿತ್ಯದ ಬದುಕಿನಲ್ಲಿ ನಿದ್ರೆ, ಎಚ್ಚರ ಕನಸು ಈ ಮೂರು ಅವಸ್ಥೆಗಳನ್ನು ನಾವು ಅನುಭವಿಸುತ್ತೇವೆ. ಇವುಗಳನ್ನು ರುದ್ರ, ವಿಷ್ಣು, ಬ್ರಹ್ಮನಿಗೆ ಹೋಲಿಸುತ್ತಾರೆ. ನಿದ್ರೆ ಸುಷುಪ್ತಿಯಾಗಿದ್ದು. ಮಾಯಾ ಆವರಣದ ಮುಸುಕಿನಲ್ಲಿ ನಾವು ಸುಖವನ್ನು ಪಡೆಯುತ್ತೇವೆ.ಎಚ್ಚರ ಸ್ಥಿತಿಯ ಪಾಲನೆಯಾಗಿದ್ದು ಇಲ್ಲಿ ನಾವು ದೇವರ ಪ್ರೇರಣೆಯಿಂದ ಬದುಕುತ್ತೇವೆ. ಕನಸು ಬ್ರಹ್ಮ ದೇವರ ಪ್ರೇರಣೆಯಾಗಿದ್ದು ಬ್ರಹ್ಮ ದೇವರು ಸಮುದ್ರ ಬೆಟ್ಟ ಮುಂತಾದವುಗಳನ್ನು ಸೃಷ್ಟಿ ಮಾಡಿರುತ್ತಾನೆ.ಇವುಗಳೆಲ್ಲವನ್ನೂ ನಾವು ಕನಸಿನಲ್ಲಿ ಕಾಣುತ್ತೇವೆ. ಈ ಮೂರು ಸ್ಥಿತಿಗಳಲ್ಲಿ ನಾವು ನಮ್ಮ ಬದುಕನ್ನು ಪಾಪಕಾರ್ಯಕ್ಕೆ ಎಡೆಮಾಡದೇ ಪುಣ್ಯವನೇ ಮಾಡುವ ಮೂಲಕ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು.”ಎಂದು ಮುನವಳ್ಳಿಯ ಹಿರಿಯ ಸತ್ಸಂಗಿಗಳಾದ ಯಶವಂತ ಗೌಡರ ಅವರು ನಿಜಗುಣ ಶಿವಯೋಗಿಗಳ ‘ಅನುಭವಸಾರ’ 4 ನೇ ಸೂತ್ರದಲ್ಲಿ 11 ನುಡಿಗಳ ತಾತ್ಪರ್ಯವನ್ನು ಬಿಡಿಸುವ ಮೂಲಕ ಸಿಂದೋಗಿ ಮುನವಳ್ಳಿಯ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಶುಕ್ರವಾರ ರಾತ್ರಿ ಜರುಗಿದ ಸತ್ಸಂಗ ಕೋರೋನಾ ನಿಯಮಾವಳಿಗಳ ಅನುಸಾರ ಸುರಕ್ಷಿತ ಅಂತರದ ಮುಖಾಮುಖಿ ಮತ್ತು ಗೂಗಲ್ ಮೀಟ್ ದಲ್ಲಿ ಹೇಳಿದರು.

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಮುಕ್ತಾನಂದ ಪೂಜ್ಯರು ವಹಿಸಿದ್ದರು.

ಸೂತ್ರಗಳನ್ನು ಬಸವರಾಜ ಹಲಗತ್ತಿ. ಚನಬಸು ನಲವಡೆ.ಮುಕ್ತಾನಂದ ಪೂಜ್ಯರು ತಾತ್ಪರ್ಯವನ್ನು ಓದಿದರು.

ಅನುಭವ ಸಾರ ಎಂಬುದು ನಿಜಗುಣ ಶಿವಯೋಗಿಗಳು ವಿರಚಿತ ಒಂದು ವೇದಾಂತ ಗ್ರಂಥ.ಮೈಸೂರ ಪ್ರಾಂತದ ಅಧ್ಯಾತ್ಮ ಕ್ಕೆ ಒಲಿದ ನಿಜಗುಣರು ತಮ್ಮ ಅರಸೊತ್ತಿಗೆಯನ್ನು ತ್ಯಜಿಸಿ ಚಿಲಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ತಪಗೈದು ಅರವತ್ತಮೂರು ಪುರಾತನರ ತ್ರಿವಿಧಿ. ಕೈವಲ್ಯಪದ್ದತಿ.ಪರಮಾರ್ಥ ಪ್ರಕಾಶಿಕೆ.ಅನುಭವ ಸಾರ.ಪರಮಾನುಭವ ಬೋಧೆ.ವಿವೇಕ ಚಿಂತಾಮಣಿ ಗ್ರಂಥಗಳನ್ನು ರಚಿಸಿದರು.ನಮ್ಮ ಬದುಕಿನ ಪ್ರತಿಯೊಂದು ಮೌಲ್ಯಗಳನ್ನು ಈ ಗ್ರಂಥಗಳು ಒಳಗೊಂಡಿದೆ ಎಂದು ತಿಳಿಸಿದ ಯಶವಂತ ಗೌಡರ ಅವರು ಮುಂದುವರೆದು ಅದರ ಪ್ರತಿಬಿಂಬವನ್ನು ನಮ್ಮ ಶರೀರಕ್ಕೆ ಹೋಲಿಸಿ ನಿದರ್ಶನ ನೀಡುತ್ತ ಸೂರ್ಯ ಉದಾಹರಣೆ ನೀಡುತ್ತ, ಜಗತ್ತಿಗೆ ಸೂರ್ಯ ಒಬ್ಬನೇ ನಿತ್ಯವೂ ಅವನ ಬೆಳಕಿನ ಕಿರಣಗಳು ಪ್ರಕೃತಿಯ ಎಲ್ಲ ವಸ್ತುಗಳ ಮೇಲೆ ಬೀಳುತ್ತವೆ. ಪ್ರತಿಬಿಂಬ ಉಪಾದಿಯಲ್ಲಿ ಕಲ್ಲು ಮಣ್ಣು ನೀರು ಇವುಗಳ ಮೇಲೆ ಪ್ರತಿಬಿಂಬ ಚಲಿಸಿದಾಗ ಅವುಗಳು ಹೊಳೆಯುತ್ತವೆ.ನಾವೂ ಕೂಡ ಚಲಿಸುವಾಗ ನಮ್ಮ ಪ್ರತಿಬಿಂಬ ನೆರಳಿನ ರೂಪದಲ್ಲಿ ನಮ್ಮೊಡನೆ ಬರುತ್ತದೆ. ಆ ನೆರಳು ಬೇರೆ ನಾವು ಬೇರೆ ಅಲ್ಲ. ಇಲ್ಲಿ ನೆರಳೂ ಒಂದೇ ನಮ್ಮ ಶರೀರವೂ ಒಂದೇ.ಕುಂಬಾರ ಗಡಿಗೆ ಮಾಡುತ್ತಾನೆ. ಇಲ್ಲಿ ಮಣ್ಣು ಉಪಾದಾನ ಕಾರಕವಾದರೆ ಕುಂಬಾರ ನಿಮಿತ್ಯಕಾರಣ ಎಂದರು.

ಜೇಡರ ಹುಳು ತನ್ನ ಶರೀರದಲ್ಲಿರುವ ಜಿಗುಟಾದ ವಸ್ತು ಹೊರಬಿಟ್ಟು ಬಲೆ ಹೆಣೆಯುತ್ತದೆ. ಅದರಲ್ಲಿ ಕೀಟಗಳು ಬಂದು ಸಿಲುಕಿ ಸಾವನ್ನಪ್ಪುತ್ತವೆ. ಅವುಗಳನ್ನು ತನ್ನ ಆಹಾರವಾಗಿ ಪಡೆದ ಜೇಡ ಮತ್ತೆ ತನ್ನ ಬಲೆಯನ್ನು ತನ್ನೊಳಗೆ ಸೇವಿಸುತ್ತದೆ.ಇದು ದೇವರು ಅದಕ್ಕೆ ನೀಡಿರುವ ಶಕ್ತಿ.ಹಾಗೆಯೇ ನಮ್ಮ ಶರೀರದಲ್ಲಿ ಬೆಳೆಯುವ ಉಗುರು ಕೂದಲುಗಳನ್ನು ಬೇಡವಾದ ಭಾಗವನ್ನು ನಾವು ತಗೆಯುತ್ತೇವೆ.ಮತ್ತೆ ಅವು ಬೆಳೆಯುತ್ತವೆ. ಬೆಳವಣಿಗೆ ಉಪಾದಾನ ಕಾರಣವಾದರೆ ಕತ್ತರಿಸುವುದು ನಿಮಿತ್ತ ಕಾರಣ.ನಾವು ನಮ್ಮ ಬದುಕಿನಲ್ಲಿ ನಮ್ಮ ತಂದೆಯನ್ನು ಪೂಜಿಸುತ್ತೇವೆ. ನಾವು ನಮ್ಮ ಮಕ್ಕಳಿಂದ ಪೂಜಿಸಲ್ಪಡುತ್ತೇವೆ.ಇಲ್ಲಿ ಎರಡೂ ಒಂದೇ ನೀನು ನಿನ್ನ ತಂದೆಯನ್ನು ಪೂಜಿಸುವೆ.ನಿನ್ನ ಮಗ ನಿನ್ನನ್ನು ಪೂಜಿಸುವನು.ಈ ಎರಡೂ ಕಡೆಯಲ್ಲಿ ಇರುವವನು ನೀನೊಬ್ಬನೇ.ಇಲ್ಲಿ ಪೂಜ್ಯ ಪೂಜಕ ಎರಡೂ ಒಂದೇ ವ್ಯಕ್ತಿ ಸ್ವರೂಪದಲ್ಲಿ ಇರುತ್ತವೆ.”ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

ಈ ಸತ್ಸಂಗದಲ್ಲಿ ಸಿಂದೋಗಿ ಮುನವಳ್ಳಿಯ ಸತ್ಸಂಗಿಗಳಾದ ಚನಬಸು ನಲವಡೆ.ವೈ.ಬಿ.ಕಡಕೋಳ.ಬಿ.ಬಿ.ಹುಲಿಗೊಪ್ಪ.ವೀರಣ್ಣ ಕೊಳಕಿ.ಕಾಶಪ್ಪ ನಲವಡೆ.ಮಲ್ಲಿಕಾರ್ಜುನ ಶಿವಪೇಟಿ.ಹೂವಪ್ಪ ಬಾರಕೇರ.ಬಸವರಾಜ ಹಲಗತ್ತಿ.ಜೆ.ಎಚ್.ಪಾಟೀಲ.ವಸಂತ ಸಣಕಲ್ ಮೊದಲಾದವರು ಪಾಲ್ಗೊಂಡಿದ್ದರು.ಗೂಗಲ್ ಮೀಟ್‍ನಲ್ಲಿ ನಾಡಿನ ವಿವಿಧೆಡೆಯ 30 ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಪಾಲ್ಗೊಂಡಿದ್ದರು. ಈ ಸತ್ಸಂಗದ ಪ್ರಾರಂಭದಲ್ಲಿ ಚನಬಸು ನಲವಡೆ “ಶರಣರಾಗಬೇಕು ಗುರುವಿಗೆ ಶರಣರಾಗಬೇಕು”ಎಂಬ ಪ್ರಾರ್ಥನಾ ಗೀತೆ ಹೇಳಿದರು. ಶನಿವಾರ ಮತ್ತು ರವಿವಾರ ಸತ್ಸಂಗ ಜರುಗುವುದಿಲ್ಲ ಆ ಎರಡು ದಿನಗಳು ಮಠದಲ್ಲಿ ಬರುವ ಶುಕ್ರವಾರ ಜರಗುವ ಗುರುಪೂರ್ಣಿಮೆ ಕಾರ್ಯಕ್ರಮದ ನಿಮಿತ್ತ ಸತ್ಸಂಗಿಗಳಿಂದ ಶ್ರೀಮಠದ ಸ್ವಚ್ಚತಾ ಕಾರ್ಯ ಜರಗುವುದು.ಸೋಮವಾರ ಎಂದಿನಂತೆ ಗೂಗಲ್ ಮೀಟ್ ಮತ್ತು ಮುಖಾಮುಖಿ ಸತ್ಸಂಗ ಜರುಗುವುದು ಎಂಬ ಸೂಚನೆಯನ್ನು ವೀರಣ್ಣ ಕೊಳಕಿ ನೀಡಿದರು. ಯಶವಂತ ಗೌಡರ ವಚನದಲ್ಲಿ ‘ನಾಮಾಮೃತ ತುಂಬಿ’ ವಚನವನ್ನು ಹೇಳಿಸಿದರು. ನಂತರ ‘ಓಂ’ಕಾರ ಜಪ ಜರುಗಿತು.’ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ’ ಮಂಗಳಾರತಿ ಜರುಗುವ ಮೂಲಕ ಸಕಲರಿಗೂ ಪ್ರಸಾದ ವಿತರಿಸುವ ಮೂಲಕ ಶುಕ್ರವಾರದ ಸತ್ಸಂಗ ಕೊನೆಗೊಂಡಿತು.

ವರದಿಃ ವೈ.ಬಿ.ಕಡಕೋಳ. ಸಂಪನ್ಮೂಲ ವ್ಯಕ್ತಿಗಳು.ಮುನವಳ್ಳಿ

RELATED ARTICLES

Most Popular

error: Content is protected !!
Join WhatsApp Group