೧೦ ಸಾವಿರ ಸಾರಿಗೆ ಸಿಬ್ಬಂದಿ ನೇಮಕಕ್ಕೆ ಆದೇಶ – ಸಚಿವ ರಾಮಲಿಂಗಾರೆಡ್ಡಿ

0
49

ಸಿಂದಗಿ- ಕರ್ನಾಟಕದಲ್ಲಿ ಬಹುದಿನಗಳಿಂದ ಸಿಬ್ಬಂದಿ ನೇಮಕಾತಿ ಇಲ್ಲದ ಕಾರಣ ಸಿಬ್ಬಂದಿ ಕೊರತೆಯಿಂದ ಹಲವಾರು ಸಮಸ್ಯೆಗಳು ಉಲ್ಬಣಿಸಿ ಸಾರಿಗೆ ಇಲಾಖೆಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಸುಮಾರು ೧೦ ಸಾವಿರ ಸಿಬ್ಬಂದಿ ನೇಮಕಾತಿಗೆ ಆದೇಶ ನೀಡಲಾಗಿದೆ ಇದರಿಂದ ನಿರುದ್ಯೋಗ ನಿವಾರಣೆಯ ಜೊತೆಗೆ ಸಿಬ್ಬಂದಿ ಕೊರತೆ ನಿವಾರಣೆಯಾಗಲಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಹಾಗೂ ಕ.ಕ.ರ ಸಾ.ನಿ ಅಧ್ಯಕ್ಷ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳ ನೂತನ ವಸತಿ ಗೃಹಗಳ ಉದ್ಘಾಟನೆ ಹಾಗೂ ಪೂಜ್ಯಶ್ರೀ ಚೆನ್ನವೀರ ಸ್ವಾಮಿ ಬಸ್ ನಿಲ್ದಾಣ ನಾಮಕರಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮೃತ ಸಿಬ್ಬಂದಿಯ ಅನುಕಂಪ ಆಧಾರದ ಸಿಬ್ಬಂದಿ ನೇಮಕಾತಿ ನಿಂತು ಹೋಗಿತ್ತು ಸಿಬ್ಬಂದಿ ಕುಟುಂಬ ನಿರ್ವಹಣೆಯಲ್ಲಿ ತೊಂದರೆ ಅನುಭವಿಸುತ್ತಿರುವುದನ್ನು ತಪ್ಪಿಸಲು ಅದನ್ನು ಪುನಃ ಪ್ರಾರಂಭಿಸಲಾಗಿದೆ. ಈ ಬಸ್ ನಿಲ್ದಾಣಕ್ಕೆ ಪುಕ್ಕಟೆಯಾಗಿ ಜಮೀನು ನೀಡಿದ ಶ್ರೀಗಳ ಹೆಸರಿಡುವಂತೆ ಬಹುದಿನಗಳ ಬೇಡಿಕೆಯಾಗಿತ್ತು ಅದನ್ನು ಶ್ರೀಗಳ ಹಾಗೂ ಶಾಸಕರು ಸದನದಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶ್ರೀಗಳ ಹೆಸರಿಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ೩ ಸಿಟಿ ಬಸ್ ಪ್ರಾರಂಭಕ್ಕೆ ಆಧೇಶ ನೀಡಿದ್ದೇನೆ ಎಂದು ತಿಳಿಸಿದ ಅವರು, ರಾಯಚೂರ ಮಂತ್ರಾಲಯ ಬಸ್ ಪ್ರಾರಂಭಕ್ಕೆ ಅಧಿಕಾರಿಗಳಲ್ಲಿ ತಿಳಿಸಲಾಗಿದೆ. ದೇವರ ಹಿಪ್ಪರಗಿ ಬಸ್ ನಿಲ್ದಾಣಕ್ಕೆ ಮಡಿವಾಳ ಮಾಚಿದೇವ, ವಿಜಯಪುರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮ, ಸುರಪುರ ಬಸ್ ನಿಲ್ದಾಣಕ್ಕೆ ರಾಜಾವೆಂಕಟಪ್ಪ ನಾಯಕ ನಾಮಕರಣ ಮಾಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ೨೦೧೮ರಲ್ಲಿ ದಿ. ಸಚಿವ ಎಂ.ಸಿ.ಮನಗೂಳಿ ಅವರು ಸಿಬ್ಬಂದಿ ವಸತಿ ಗೃಹಗಳ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಿದ್ದರು ಇಂದು ನಾನು ಶಾಸಕನಾಗಿ ಲೋಕಾರ್ಪಣೆ ಮಾಡಿದ್ದು ಹರ್ಷ ತಂದಿದೆ. ಸಾರ್ವಜನಿಕರ ಕಲ್ಯಾಣಕ್ಕಾಗಿ ಪೂಜ್ಯಶ್ರೀ ಚೆನ್ನವೀರ ಸ್ವಾಮಿಗಳು ತಮ್ಮ ಮಠದ ಆಸ್ತಿ ಸುಮಾರು ೨ ಎಕರೆ ಜಮೀನನ್ನು ೧೯೫೨ ರಲ್ಲಿ ಬಸ್ ನಿಲ್ದಾಣಕ್ಕೆ ಕೊಡುಗೆಯಾಗಿ ನೀಡಿದ್ದರು. ೨೦೧೩-೧೪ರಲ್ಲಿ ನೂತನ ಬಸ್ ನಿಲ್ದಾಣ ಉದ್ಘಾಟನೆ ಸಂದರ್ಭದಲ್ಲಿ ಶ್ರೀಗಳ ಹೆಸರಿಡಬೇಕಾಗಿತ್ತು ೨೦೨೩ರಲ್ಲಿ ನಾನು ಆಯ್ಕೆಯಾದ ಬಳಿಕ ಶ್ರೀಗಳು ಒತ್ತಡದ ಮೇರೆಗೆ ಅದನ್ನು ಶ್ರೀಗಳ ಹೆಸರು ಆ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿ ಇರಬೇಕೆನ್ನುವ ಮನವಿ ಸಚಿವರಲ್ಲಿ ಮಾಡಿಕೊಳ್ಳಲಾಗಿತ್ತು. ಅದು ನೆರವೇರಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆದಿಯಾಗಿ ಸಚಿವ ಸಂಪುಟದ ಎಲ್ಲ ಸಚಿವರು ಅನುದಾನ ನೀಡುವ ಮೂಲಕ ಸಹಕಾರ ನೀಡಿದ್ದಾರೆ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದಿಸುವದಾಗಿ ಹೇಳಿದರು.

ಸಾನ್ನಿಧ್ಯ ವಹಿಸಿದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಅನುಕಂಪ ಆಧಾರದ ಮೇಲೆ ನೇಮಕ ಹೊಂದಿದ ಸಿಬ್ಬಂದಿಗೆ ನೇಮಕಾತಿ ಪತ್ರ ನೀಡಲಾಯಿತು. ನೂತನ ವಸತಿ ಗೃಹಗಳನ್ನು ಸಿಬ್ಬಂದಿಗೆ ಹಂಚಿಕೆ ಮಾಡಿದರು. ಶಕ್ತಿ ಯೋಜನೆಯ ಮೂಲಕ ಹೋಳಿಗೆ ಮಾಡಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಮಾಡಿದ ಮಹಿಳೆಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು.

ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಕುರಬರ ಸ್ವಾಗತಿಸಿದರು. ಕಲಬುರ್ಗಿ ವ್ಯವಸ್ಥಾಪಕ ನಿರ್ದೆಶಕ ಎಂ.ರಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಂಡಿ ಉಪವಿಬಾಗಾಧಿಕಾರಿ ಅನುರಾಧಾ ವಸ್ತ್ರದ, ಮಾಜಿ ಶಾಸಕ ಶರಣಪ್ಪ ಸುಣಗಾರ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಆಲಮೇಲ ಅಧ್ಯಕ್ಷ ಸಾದಿಕ ಸುಂಬಡ, ಕಲಬುರ್ಗಿ ಮುಖ್ಯ ಕಾಮಗಾರಿ ಅಭಿಯಂತರ ಚನ್ನಣ್ಣ ಬೋರಯ್ಯ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.

LEAVE A REPLY

Please enter your comment!
Please enter your name here