ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು – ಅಮರೇಶ್ವರ ದೇವರು

Must Read

ಹುನಗುಂದ; ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿಗೆ ಎಡೆಬಿಡದೆ ನಿರಂತರವಾಗಿ ಸುರಿದ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಹಾಳಾದ ರೈತರ ಬೆಳೆಯ ವೈಮಾನಿಕ ಸಮೀಕ್ಷೆ ನಡೆಸಿ ಸರ್ಕಾರ ಬೆಳೆ ಪರಿಹಾರ ನೀಡಬೇಕೆಂದು ಗಚ್ಚಿನಮಠದ ಅಮರೇಶ್ವರ ದೇವರು ಒತ್ತಾಯಿಸಿದರು.

ಬುಧವಾರ ಇಲ್ಲಿನ ಗಚ್ಚಿನಮಠದಲ್ಲಿ ರೈತರು ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತ ಕಳೆದ ೪ ತಿಂಗಳಿ೦ದ ಸುರಿಯುತ್ತಿರುವ ಮಳೆಗೆ ರೈತರ ಕ್ಷೇತ್ರದ ಸಾಕಷ್ಟು ಆಸ್ತಿ ಪಾಸ್ತಿಗಳು ಹಾಳಾಗಿದ್ದು, ಈತನಕ ಯಾರೊಬ್ಬ ಜನಪ್ರತಿನಿಧಿಗಳು ಗಮನಿಸದೇ ಸರ್ಕಾರ ಕೇವಲ ಧರ್ಮಸ್ಥಳ ಬುರುಡೆ ವಿಚಾರದಲ್ಲಿ ಕಾಲ ಕಳೆಯುತ್ತಿದೆ. ಹಾನಿಗೊಳಗಾದ ರೈತರಿಗೆ ಸೂಕ್ತ ಸಮಯದಲ್ಲಿ ಪರಿಹಾರ ಒದಗಿಸದಿದ್ದಲ್ಲಿ ದೇಶಕ್ಕೆ ಅನ್ನವಿಲ್ಲದೆ ಕಣ್ಣೀರು ಹಾಕುವ ದುಃಸ್ಥಿತಿ ಬರುವಲ್ಲಿ ಸಂದೇಹವಿಲ್ಲ. ಮುಗ್ಧ ರೈತರು ಹಾನಿಯಾದ ತಮ್ಮ ಸಂಕಷ್ಟವನ್ನು ಯಾರೊಂದಿಗೆ ತೋಡಿಕೊಳ್ಳದೆ ಮೌನವಾಗಿ ದು:ಖಿಸುತ್ತಾರೆ. ಬೆಳೆ ಹಾನಿಗೆ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಕಾರ‍್ಯ ಕೈಗೊಳ್ಳುವಲ್ಲಿ ಸರ್ಕಾರ ಮುಂದಾಗಬೇಕು. ತಪ್ಪಿದಲ್ಲಿ ರೈತ ಸಮುದಾಯ ಒಗ್ಗಟ್ಟಾಗಿ ಪರಿಹಾರ ಸೌಲಭ್ಯ ಪಡೆಯುವಲ್ಲಿ ಬೀದಿಗಿಳಿದು ಹೋರಾಟದ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಅಮರೇಶ್ವರ ದೇವರು ಸರ್ಕಾರವನ್ನು ಎಚ್ಚರಿಸಿದರು.

ರೈತ ಮುಖಂಡ ಮಲ್ಲನಗೌಡ ತುಂಬದ ಮಾತನಾಡಿ, ಸರ್ಕಾರ ಸಂಪುಟ ಸಚಿವರ ಸಹಯೋಗದೊಂದಿಗೆ ರಾಜ್ಯದ ೩೦ ಜಿಲ್ಲೆಗಳ ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆಯನ್ನು ಕೈಗೊಂಡು ವೈಮಾನಿಕ ಸಮೀಕ್ಷೆ ನಡೆಸಿ ಹಾನಿಯಾದ ಬೆಳೆಗಳಿಗೆ ಪರಿಹಾರ ಒದಗಿಸಬೇಕು. ೨೦೨೪-೨೫ನೇ ಸಾಲಿನ ರೈತರ ಬೆಳೆ ಸಾಲವನ್ನು ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದರು.

ನವಕರ್ನಾಟಕ ರೈತ ಸಂಘದ ಅಧ್ಯಕ್ಷ ಕೃಷ್ಣ ಜಾಲಿಹಾಳ ಮಾತನಾಡಿ, ಸತತವಾಗಿ ೩ ತಿಂಗಳಿ೦ದ ವಿಪರೀತ ಮಳೆ ಸುರಿಯುತ್ತಿದ್ದು ರೈತರ ಮುಂಗಾರು ಬೆಳೆಗಳಾದ ಹೆಸರು, ಈರುಳ್ಳಿ, ಮೆಣಶಿನಕಾಯಿ, ತೊಗರಿ, ಸೂರ‍್ಯಕಾಂತಿ ಮತ್ತು ಮೆಕ್ಕ ಜೋಳ ಬೆಳೆಗಳು ಅತಿಯಾದ ಮಳೆಗೆ ಸಿಲುಕಿ ಕಳೆ ರೋಗಕ್ಕೆ ತುತ್ತಾಗಿ, ನೀರು ನಿಂತು ಬೆಳೆ ಹಾನಿಯಾಗಿ ರೈತ ಸಂಕಷ್ಟ ಅನುಭವಿಸುತ್ತಿದ್ದಾನೆ. ರಾಜ್ಯದ ವಿವಿದ ಅಣೆಕಟ್ಟೆಗಳು ತುಂಬಿ ಅಪಾರ ಪ್ರಮಾಣದ ನೀರು  ಕೃಷಿ ಭೂಮಿಗೆ ನುಗ್ಗಿ ಬೆಳೆ ಹಾಳಾಗುತ್ತಿವೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮೂಲಕ ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಹಣವನ್ನು ಬಳಸಿಕೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ಜಾಲಿಹಾಳ ಒತ್ತಾಯಿಸಿದರು.

ವೇಮೂ ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯ ವಹಿಸಿದ್ದರು. ಮುತ್ತಣ್ಣ ಹವಾಲ್ದಾರ, ಬಸನಗೌಡ ದಾದ್ಮಿ, ಮಲ್ಲನಗೌಡ ಪಾಟೀಲ, ಚನಬಸಪ್ಪ ಇಲಕಲ್ಲ, ಶೇಖರಪ್ಪ ಬಾದವಾಡಗಿ, ನಾಗಪ್ಪ ತ್ಯಾಪಿ, ಗಿರಿಮಲ್ಲಪ್ಪ ಹಳಪೇಟಿ, ಶಿವಾನಂದ ಬಡಿಗೇರ, ನಾಗಪ್ಪ ಕರಂಡಿ, ಬಿ.ವೈ. ಕೊಡಗಾನೂರ, ಮಹೇಶ ಬೆಳ್ಳಿಹಾಳ, ಅರುಣೋದಯ , ದುದ್ದಿಗಿ ಭಾರತಿ ಶಟ್ಟರ ಪರಸಪ್ಪ ಆಲೂರು ಬಸನಗೌಡ ದಾದ್ಮಿ ಗಿರಿಯಪ್ಪ ಹಳಪೇಟಿ ಮಾಂತೇಶ ಅಳಗುಂಡಿ ನಿಂಗಪ್ಪ ಬಡಿಗೇರ ಬಸವರಾಜ ಕಮ್ಮಾರ ಮಾಂತೇಶ ಫೈಲ್ ಲಕ್ಷ್ಮಪ್ಪ ಗೋಡ್ಗೇರಿ ಭರ್ಮಪ್ಪ ಬೆಣ್ಣಿ ಮಂಜುನಾಥ ಕೋಲಾರ ದೇವಪ್ಪ ವಡ್ಡರ,ಕಾಜಹುಲಿ ಸರಖಾವಸ, ನಾಗಪ್ಪ ಕರ೦ಡಿ, ಪರಮೇಶ ಬಾದಾಡ್ಗಿ ಶಿವಪ್ಪ ಹಲ್ಪೇಟಿ ಹನುಮಂತಪ್ಪ ಆವೀನ ಇತರರು ಇದ್ದರು ಸೇರಿದಂತೆ ಹಲವಾರು ರೈತರು ಗೋಷ್ಠಿಯಲ್ಲಿದ್ದರು.

ರೈತರ ಹಕ್ಕೊತ್ತಾಯ ; ೨೦೨೫ರ ಅತಿವೃಷ್ಟಿ ಮಳೆಯಿಂದ ರೈತರ ಹಾನಿಯಾದ ಬೆಳೆಗೆ ನಷ್ಟ ತುಂಬಬೇಕು. ಕೇಂದ್ರ ಮತ್ತು ರಾಜ್ಯ ತಕ್ಷಣ ಜಂಟಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು. ಕೇಂದ್ರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ವಿಮಾ ಹಣವನ್ನು ಬಿಡುಗಡೆಗೊಳಿಸಬೇಕು. ೨೦೨೪-೨೫ರಲ್ಲಿ ರೈತರ  ರಾಷ್ಟ್ರೀಕೃತ ಮತ್ತು ಪಿಕೆಪಿಎಸ್ ಗಳಲ್ಲಿ ಪಡೆದ ಬೆಳೆ ಸಾಲವನ್ನು ಮನ್ನಾ ಮಾಡಬೇಕು. ತಕ್ಷಣ ರಾಜ್ಯ ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ರೈತರು ಒತ್ತಾಯಿಸಿದರು.

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group