ಮೂಡಲಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಮನೆ, ಮನೆಗೆ ಮುಟ್ಟಿಸುವ ಮೂಲಕ ದೇಶಕ್ಕಾಗಿ ಮತ್ತೊಮ್ಮೆ ಮೋದಿ 3.0 ಎಂಬ ಘೋಷ ವಾಕ್ಯದೊಂದಿದೆ ಗ್ರಾಮ ಚಲೋ ಅಭಿಯಾನ ಆರಂಭಿಸಿದ್ದೇವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಮಾ-03 ರಂದು ಅರಭಾವಿ ಮತಕ್ಷೇತ್ರದ ಶಿವಾಪೂರ(ಹ) ಗ್ರಾಮದಲ್ಲಿ ಗ್ರಾಮ ಚಲೋ ಅಭಿಯಾನ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಅನೇಕ ಜನಪರ, ಅಭಿವೃದ್ಧಿ ಪರ ಯೋಜನೆ ವಿವರಿಸುವ ಕರಪತ್ರಗಳನ್ನು ವಿತರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾಲಘಟ್ಟದಲ್ಲಿ ನಮ್ಮ ಹೆಮ್ಮೆಯ ಭಾರತ ವಿಶ್ವಗುರು ಸ್ಥಾನವನ್ನು ಅಲಂಕರಿಸುವತ್ತ ಮುನ್ನಡೆದಿದೆ, 2047ನೇ ವರ್ಷಕ್ಕೆ ಭಾರತವು ವಿಕಸಿತ ಭಾರತವಾಗಿ ಪರಿವರ್ತನೆ ಹೊಂದಬೇಕು. ಭಾರತವು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಕಾಣಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಗ್ರಾಮಗಳೂ ಅಭಿವೃದ್ಧಿ ಹೊಂದಬೇಕಿದೆ ಎಂದು ವಿಶ್ಲೇಷಿಸಿದರು.
ದೇಶದ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳ ಫಲಾನುಭವಿಗಳಾಗಿದ್ದಾರೆ. ಮುಖ್ಯವಾಗಿ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದುವಂತಾಗಿದೆ, ರಾಮ ಮಂದಿರ ಲೋಕಾರ್ಪಣೆ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು, ರೈತರಿಗೆ ಅಭಯ ತುಂಬುವ ಕಿಸಾನ ಸಮ್ಮಾನ ಯೋಜನೆ, ಮಹಿಳೆಯರಿಗೆ ರಾಜಕೀಯ ಅದರಲ್ಲೂ ಶಾಸನ ಸಭೆಗಳಲ್ಲಿ ಮುಂಚೂಣಿ ಸ್ಥಾನವನ್ನು ಕಲ್ಪಿಸುವ ಮಸೂದೆ ಮಂಡನೆ, ಉಜ್ವಲಾ ಯೋಜನೆ, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಜಲಜೀವನ ಮಿಷನ್ ಹೀಗೆ ಮೋದಿಜಿ ಅವರ ಸಾಧನೆ ಪಟ್ಟಿ ದೊಡ್ಡದಿದೆ. ಮೋದಿಜಿ ಅವರ ಸಮರ್ಥ ಆಡಳಿತ, ನಾಯಕತ್ವಕ್ಕೆ ಜಗತ್ತೇ ಮೆಚ್ಚಿದೆ. ಹೀಗಾಗಿ ಈ ಬಾರಿಯೂ ಸಹ ಅಭಿವೃದ್ಧಿಗೆ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಬೇಕು, ಕಾರ್ಯಕರ್ತರು ಮೋದಿಜಿ ಅವರ ಸಾಧನೆಯನ್ನು ತಿಳಿಸುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಪ್ರಮುಖರಾದ ಶಿವನಗೌಡ ಪಾಟೀಲ, ಸತೀಶ ಜುಂಜರವಾಡ, ಮಹಾಂತೇಶ ಕುಡಚಿ, ಈಶ್ವರ ಬೆಳಗಲಿ, ಕೆಂಪಣ್ಣ ಮುಧೋಳ, ಮಲ್ಲಪ್ಪ ಜುಂಜರವಾಡ, ಪ್ರಕಾಶ ಮಾದರ, ಡಾ. ಬಿ,ಎಂ ಪಾಲಭಾಂವಿ, ಶ್ರೀಕಾಂತ ಕೌಜಲಗಿ, ಮದನ್ ದಾನನ್ನವರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.