Homeಸುದ್ದಿಗಳುಹೊನ್ನರಹಳ್ಳಿಯಲ್ಲಿ ಸಂಭ್ರಮ ಶನಿವಾರ

ಹೊನ್ನರಹಳ್ಳಿಯಲ್ಲಿ ಸಂಭ್ರಮ ಶನಿವಾರ

ಹುನಗುಂದ: ಶಾಲೆಯ ಹೊರಗಿನ ಅನುಭವಗಳನ್ನು ಚಟುವಟಿಕೆಗಳ ಮೂಲಕ ಒದಗಿಸಲು ಸಂಭ್ರಮ ಶನಿವಾರ ಸೂಕ್ತ ವೇದಿಕೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಿರಿಯಪ್ಪ ಆಲೂರ ಅಭಿಪ್ರಾಯಪಟ್ಟರು.

ಅವರು ತಾಲೂಕಿನ ಅಮಿನಗಡ ಹೋಬಳಿಯ ಹೊನ್ನರಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಂಭ್ರಮ ಶನಿವಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗಲೆಸ್ ಡೇ ಎಂದು ಆಚರಿಸಲು ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಫಾರಸ್ಸು ಮಾಡಿದೆ. ಅದರನ್ವಯ ವರ್ಷದಲ್ಲಿ ಹತ್ತು ದಿನ ವಿವಿಧ ವಿಷಯಗಳ ಮೇಲೆ ಮಕ್ಕಳಿಗಾಗಿಯೇ ಮಕ್ಕಳಿಂದ ಸನ್ನಿವೇಶ ಸೃಷ್ಟಿಸಿ ಕೌಶಲ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಎಸ್ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಮಾತನಾಡುತ್ತಾ, ಮಕ್ಕಳು ಮೊಬೈಲ್ ಗೀಳಿಗೆ ಹಾಳಾಗುತ್ತಿದ್ದು ಅದರಿಂದ ಅವರನ್ನು ಹೊರತರಲು ಈ ವಾರದ ವಿಷಯ ಪೂರಕವಾಗಿದೆ ಎಂದರು.

ಶಿಕ್ಷಕರಾದ ಎಂ.ಬಿ. ವಂದಾಲಿ ಹಾಗೂ ಬಸಮ್ಮ ಗಟ್ಟಿಗನೂರ ಅವರ ಮಾರ್ಗದರ್ಶನದಲ್ಲಿ ಮಕ್ಕಳು ನಾಲ್ಕು ತಂಡಗಳಾಗಿ ‘ನೀವೇನು ಬಲ್ಲಿರಿ?, ಚಿತ್ರ ಬಿಡಿಸೋಣ ಬನ್ನಿ, ನಟಿಸು-ಕಲಿ’ ಚಟುವಟಿಕೆಗಳನ್ನು ನಿರ್ವಹಿಸಿದರು.
ಪ್ರಭಾರಿ ಮುಖ್ಯ ಗುರು ಎಂ ಜಿ ಬಡಿಗೇರ ಉತ್ತಮ ಅಭಿನಯ ಮಾಡಿದ ಮಕ್ಕಳಿಗೆ ಬಹುಮಾನವಾಗಿ ಕಲಿಕಾ ಸಾಮಗ್ರಿ ವಿತರಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಗಮೇಶ ತೋಳಮಟ್ಟಿ, ಅಮೃತಾ ಕೊಣ್ಣೂರ, ಅರ್ಜುನ ಬಾರಕೇರ, ಭಾಗ್ಯಶ್ರೀ ಸೂಳಿಬಾವಿ, ರಾಕೇಶ ಮುಳ್ಳೂರ ಇತರರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group