Homeಸುದ್ದಿಗಳುಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಣಮಂತ ಪೆಟ್ಲೂರ್ ಆಯ್ಕೆ

ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಹಣಮಂತ ಪೆಟ್ಲೂರ್ ಆಯ್ಕೆ

ಜೀವನದಲ್ಲಿ ಕೆಲವು ಹುದ್ದೆಗಳನ್ನು ಪ್ರತಿಭೆಯಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಪರಿಶ್ರಮದಿಂದ ಪಡೆಯಬೇಕಾಗುತ್ತದೆ. ಇನ್ನೂ ಕೆಲವು ಹುದ್ದೆಗಳನ್ನು ಅದೃಷ್ಟದಿಂದ ಪಡೆಯಬೇಕಾಗುತ್ತದೆ.ಹಲವು ಹುದ್ದೆಗಳನ್ನು ನಾವು ಅದರೊಳಗೆ ಒಬ್ಬ ಸ್ಪರ್ಧಾಳು ಎಂಬಂತೆ ಸ್ಫರ್ಧಿಸಿ ಪಡೆಯಬೇಕಾಗುತ್ತದೆ. ಪ್ರತಿಭೆ ಅದೃಷ್ಟ ದೇವರ ಆಶೀರ್ವಾದ ಎನ್ನುವುದು ಏನಾದರೂ ಇದ್ದರೆ ಅದು ಹಣಮಂತ ಪೆಟ್ಲೂರ್ ಅವರಿಗೆ ಅನ್ವಯಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 4 ರಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹಣಮಂತ ಪೆಟ್ಲೂರ್ ಉತ್ತಮ ಶಿಕ್ಷಕರು. ಮೂಲತಃ ಇವರು ಬಾಗಲಕೋಟೆ ಜಿಲ್ಲೆಯ ಖಜ್ಜಿಡೋಣಿಯವರು. ಸುಸಂಸ್ಕೃತ ಮನೆತನದ ತಂದೆ ತಾಯಿಗಳಾದ ರಂಗಪ್ಪ ಕಮಲಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೆಯವರು.

ಹಿರಿಯ ಮಗು ಹೆಣ್ಣು ಆದಾಗ ಸಂತಸ ಮಡಿಲಲ್ಲಿ ದಂಪತಿಗಳಿಗೆ ತುಂಬಿತ್ತು.ಶರಣ ಸತಿ ಪತಿಯರು ಮನೆತನದ ಕುಲದೇವರಾದ ತುಳಸೀಗೇರಿ ಹಣುಮಪ್ಪನ ಆರಾಧಕರು. ಹಣುಮಪ್ಪನಿಗೆ ಕಮಲಮ್ಮ ಹರಕೆ ಹೊತ್ತಿದ್ದು ಎರಡನೆಯ ಮಗು ಗಂಡು ಆಗಲಿ ನಿನ್ನ ಹೆಸರನ್ನು ನನ್ನ ಮಗನಿಗೆ ಇಡುವ ಮೂಲಕ ನಿನ್ನ ಹರಕೆ ತೀರಿಸುತ್ತೇನೆ ಎಂದು. ಅದರಂತೆ ಆಯಿತು ಎರಡನೇ ಮಗು ಗಂಡಾಯಿತು. ಹರಕೆಯಂತೆ ಹಣಮಂತ ಎಂದು ಹೆಸರಿಟ್ಟರು. ಮೂರನೆಯ ಮಗು ಕೂಡ ಗಂಡು ಜನಿಸಿತು. ಹೀಗೆ ಮೂವರು ಮಕ್ಕಳಲ್ಲಿ ಎರಡನೆಯವರಾದ ಹಣಮಂತ ಪೆಟ್ಲೂರ ಬಾಲ್ಯದಿಂದಲೂ ತುಂಟ. ಆಟದಲ್ಲಿಯಂತೂ ಎತ್ತಿದ ಕೈ.

ಜನ್ಮಸ್ಥಳ ಖಜ್ಜಿಡೋಣಿಯಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗೆ ವ್ಯಾಸಂಗ ಮುಂದೆ ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗ ತಗೆದುಕೊಂಡು ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪೂರೈಸಿದರು. ಟಿ.ಸಿ.ಎಚ್ ಕಲಿಕೆಯನ್ನು ಕೆ.ಎಲ್.ಇ.ಸಂಸ್ಥೆಯ ಮಹಾವಿದ್ಯಾಲಯ ಬೆಳಗಾವಿಯಲ್ಲಿ ಮುಗಿಸಿದರು. ಮುಂದೆ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪೂರೈಸಿ ಸಾಯಿ ಶಿಕ್ಷಕರ ತರಬೇತಿ ಸಂಸ್ಥೆ ಹುಬ್ಬಳ್ಳಿಯಲ್ಲಿ ಬಿ.ಈಡಿ ವ್ಯಾಸಂಗ ಮುಗಿಸಿದರು.

ಹೀಗೆ ಶಿಕ್ಷಣ ಪೂರೈಸುತ್ತಲೇ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ 1-8-2002 ರಲ್ಲಿ ಬಾಗಲಕೋಟೆ ಜಿಲ್ಲೆಯ ಉದಗಟ್ಟಿಯಲ್ಲಿ ಸೇವೆಗೆ ಸೇರಿದರು. ಅಲ್ಲಿ ಸೇವೆ ಸಲ್ಲಿಸುತ್ತಲೇ ಹೆಚ್ಚಿನ ವ್ಯಾಸಂಗಕ್ಕೆ ಧಾರವಾಡ ಹತ್ತಿರವಾಗುತ್ತದೆ ಎಂದುಕೊಂಡು ಸವದತ್ತಿ ತಾಲೂಕಿನ ಚಿಕ್ಕ ಉಳ್ಳಿಗೇರಿಗೆ ವರ್ಗಾವಣೆಗೊಂಡರು.

2006 ರಿಂದ ಐದು ವರ್ಷಗಳ ಕಾಲ ಚಿಕ್ಕ ಉಳ್ಳೀಗೇರಿಯಲ್ಲಿ ಸೇವೆ ಸಲ್ಲಿಸುತ್ತ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.ಪತ್ನಿ ಕೂಡ ವಿಜ್ಞಾನ ಶಿಕ್ಷಕಿ ಪ್ರತಿಭಾವಂತೆ ಶಶಿಕಲಾ ಮಿರ್ಜಿ. ಗಂಡನಿಗೆ ತಕ್ಕ ಹೆಂಡತಿಯಾಗಿ ಮುದ್ದಿನ ಮಡದಿಯಾಗಿ ತುಂಬು ಸಂಸಾರದ ಜೀವನ ಸಾಗಿಸುತ್ತಲೇ ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ ಎಂಬಂತೆ ಎರಡು ಮಕ್ಕಳ ಜನನ ಈ ದಂಪತಿಗಳ ಉದರದಲ್ಲಿ ಬೆಳಕಿನ ಕಿರಣ ಉದಯಿಸಿತು.ಮಕ್ಕಳ ಶಿಕ್ಷಣ ಸಲುವಾಗಿ ಸವದತ್ತಿಗೆ ದಂಪತಿಗಳಿಬ್ಬರೂ ವರ್ಗಾವಣೆಗೊಂಡರು. ಶಶಿಕಲಾ ಮಿರ್ಜಿ ಸವದತ್ತಿಯ ಶಾಸಕರ ಮಾದರಿ ಶಾಲೆಯ ಗುರುಮಾತೆಯಾಗಿ ಸೇವೆ ಸಲ್ಲಿಸುತ್ತಿದ್ದರೆ 2013 ರಿಂದ ಹಣಮಂತ ಪೆಟ್ಲೂರ ಅವರು ಸವದತ್ತಿಯ ನಂ 4 ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವರು.

ಹೋರಾಟದ ಮನೋಭಾವದ ಇವರು ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿದರು. ಹ್ಯಾಟ್ರಿಕ್ ಅಧ್ಯಕ್ಷರೆಂದೇ ಕರೆಸಿಕೊಂಡ ಮಿತಭಾಷಿ ಸುರೇಶ ಬೆಳವಡಿಯವರು ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ಸನ್ಮಾನ್ಯ ಜನಪ್ರೀಯ ಶಾಸಕರು ಹಾಗೂ ವಿಧಾನಸಭಾ ಉಪಸಭಾಪತಿಗಳು ಆದ ಆನಂದಣ್ಣಾ ಮಾಮನಿಯವರ ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ. ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ. ನಿಕಲಪೂರ್ವ ಅಧ್ಯಕ್ಷ ಸುರೇಶ ಬೆಳವಡಿ ಸೇರಿದಂತೆ ತಾಲೂಕಿನ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ರವಿವಾರ ಹಣಮಂತ ಪೆಟ್ಲೂರ ಅವರಿಗೆ ಅಧ್ಯಕ್ಷ ಹುದ್ದೆ ಒಲಿದು ಬಂದಿತು. ಕ್ರಿಯಾಶೀಲ ವ್ಯಕ್ತಿ ಕೇವಲ ಆಟ ಪಾಠದಲ್ಲಿ ಅಷ್ಟೇ ಅಲ್ಲ ಕಲಾವಿದರೂ ಕೂಡ. ಪತ್ನಿ ಕೂಡ ಮಕ್ಕಳಿಗೆ ಉತ್ತಮ ಮೌಲ್ಯ ಗಳನ್ನು ಕಲಿಸುವ ಮಾತೆ. ಶಾಲೆಯಲ್ಲಿ ಗುಳ್ಳವ್ವನ ಹಬ್ಬ ಸೇರಿದಂತೆ ತನ್ನೆಲ್ಲ ಗುರುಮಾತೆಯರ ಬಳಗ ಸೇರಿಸಿಕೊಂಡು ಎಲ್ಲಾ ಧಾರ್ಮಿಕ ಹಬ್ಬ ಗಳನ್ನು ಆಚರಿಸುವ ಮೂಲಕ ಮೌಲ್ಯ ಗಳನ್ನು ಮಕ್ಕಳಿಗೆ ತುಂಬುತ್ತಿರುವರು.

ತಕ್ಷಣವೇ ಚಿಕ್ಕುಂಬಿಯ ಶ್ರಿ ಅಜಾತ ನವಲಗುಂದ ನಾಗಲಿಂಗ ಮಹಾಸ್ವಾಮಿಗಳ ಮಠದಲ್ಲಿ ಪೂಜ್ಯರಾದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ರಾತ್ರಿ ಜರುಗಿದ ತೊಟ್ಟಿಲೋತ್ಸವ ಮತ್ತು ನಿವೃತ್ತ ಶಿಕ್ಷಕರ ಗೌರವ ಸನ್ಮಾನದಲ್ಲಿ ಹಣಮಂತ ಪೆಟ್ಲೂರ ಅವರನ್ನು ಕೂಡ ಸನ್ಮಾನಿಸಿ ಆಶೀರ್ವಹಿಸಿದ್ದು ವ್ಯಾಟ್ಸಪ್ ಫೇಸ್ಬುಕ್ ಹಾಗೂ ನೇರ ಕರೆಗಳ ಮೂಲಕ ಸಾವಿರಾರು ಹಿತೈಷಿಗಳು ಪೆಟ್ಲೂರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವುದು ಅವರ ಪರಿಶ್ರಮ ಪ್ರತಿಭೆಗೆ ಹೋರಾಟಕ್ಕೆ ಸಂದ ಫಲ ಎಂದರೆ ಅತಿಶಯೋಕ್ತಿಯಲ್ಲ.


ವೈ. ಬಿ. ಕಡಕೋಳ
ಸವದತ್ತಿ

RELATED ARTICLES

Most Popular

error: Content is protected !!
Join WhatsApp Group