ಬೆಳಗಾವಿಃ “ಕಾಲ ಕಾಲದಲ್ಲಿ ಕನ್ನಡ ಸಂಸ್ಕೃತಿಯು ಪುನಾರಚಿಸಿಕೊಳ್ಳುತ್ತ ಬಂದಂಥ ಚರ ಪಟ್ಟಿಗಳು ಸ್ಥಿರ ಪಟ್ಟಿಗಳಲ್ಲ.ಅಂದರೆ ಹಸ್ತ ಪ್ರತಿಗಳನ್ನು ಲಿಪಿಕಾರರು ಪ್ರತಿ ಮಾಡುವುದರ ಮೂಲಕ ಕಾಲ ಕಾಲಕ್ಕೆ ಅವರ ಅಗತ್ಯತೆಗಳಿಗನುಗುಣವಾಗಿ ನಮ್ಮ ಕಾಲದಲ್ಲಿ ಪ್ರತಿ ಮಾಡಲ್ಪಟ್ಟವು.ಹಾಗಾಗಿ ಸಂಸ್ಕೃತಿಯನ್ನು ಪುನಾರಚಿಸಿಕೊಳ್ಳಲು ಬಂದಂಥ ಚರ ಪಟ್ಟಿಗಳು.ನಾಡಿನ ಸಮಾಜ ಮತ್ತು ಸಂಸ್ಕೃತಿಯ ಕ್ರಿಯಾಶೀಲ ನಡವಳಿಕೆಗಳು ಎನ್ನುವ ದೃಷ್ಟಿಕೋನದಲ್ಲಿ ಇವತ್ತು ನಾವು ಹಸ್ತಪ್ರತಿಗಳನ್ನು ಅಧ್ಯಯನ ಮಾಡಬೇಕಾಗಿದೆ.” ಎಂದು ಬೆಂಗಳೂರು ದಕ್ಷಿಣ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಸಿ.ನಾಗಭೂಷಣ ತಿಳಿಸಿದರು.
ಅವರು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಏರ್ಪಡಿಸಿದ್ದ ರಾಜ್ಯೋತ್ಸವ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಹಸ್ತಪ್ರತಿ ಶಾಸ್ತ್ರ ಪೂರ್ವೋತ್ತರಗಳು ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ಎಂ.ಗಂಗಾಧರಯ್ಯ ವಹಿಸಿದ್ದರು. ವೇದಿಕೆಯಲ್ಲಿ ಡಾ.ಗಜಾನನ ನಾಯ್ಕ,ಡಾ.ಮಹೇಶ ಗಾಜಪ್ಪನವರ, ಡಾ.ಪಿ.ನಾಗರಾಜ, ಡಾ.ಕೆ.ಆರ್.ಸಿದ್ದಗಂಗಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ.ಎಸ್.ಎಂ.ಗಂಗಾಧರಯ್ಯ “ಹಸ್ತ ಪ್ರತಿಗಳು ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನದ ಪ್ರಮುಖ ಆಕರಗಳಾಗಿವೆ.ನಮ್ಮ ಅಧ್ಯಯನ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ಹಸ್ತಪ್ರತಿ ಸಂಗ್ರಹ ಕೇಂದ್ರವನ್ನು ಸ್ಥಾಪಿಸುವುದರ ಜೊತೆಗೆ ಅದನ್ನು ಅಧ್ಯಯನಮುಖಿಗೊಳಿಸುವಲ್ಲಿ ನಾವೆಲ್ಲರೂ ಪ್ರಯತ್ನಿಸುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ರತ್ನಶ್ರೀ ತಿಪ್ಪಣ್ಣ,ಶಾರದಾ ಚಿಕ್ಕಮಠ,ಅಲಕಾ ಕುರಣಿ,ವೈ.ಬಿ.ಕಡಕೋಳ, ಕುಮಾರ ತಳವಾರ,ಪಾಂಡು ಗಾಣಿಗೇರ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪ್ರೊ.ಸಿ.ನಾಗಭೂಷಣ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಡಾ. ಪಿ.ನಾಗರಾಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.