Homeಸುದ್ದಿಗಳುಯಾರ ತೆಕ್ಕೆಗೂ ಸಿಗದ ಅದ್ಭುತ ವ್ಯಕ್ತಿತ್ವ ಕುವೆಂಪು ಅವರದು - ಡಾ. ಮಹಾದೇವ ಜಿಡ್ಡಿಮನಿ

ಯಾರ ತೆಕ್ಕೆಗೂ ಸಿಗದ ಅದ್ಭುತ ವ್ಯಕ್ತಿತ್ವ ಕುವೆಂಪು ಅವರದು – ಡಾ. ಮಹಾದೇವ ಜಿಡ್ಡಿಮನಿ

ಮೂಡಲಗಿ -ಕುವೆಂಪು ಮೂಲತಃ ಪ್ರಕೃತಿಯನ್ನೇ ಆರಾಧಿಸಿ ಕಾವ್ಯ ರಚನೆ ಮಾಡಿದವರು. ಹಿಂದಿನ ಮತ್ತು ಇಂದಿನ ಕಾಲಘಟ್ಟಗಳಿಗೆ ಕೊಂಡಿಯಾಗಿ ಉಳಿಯುವಂತೆ ಭಾಸವಾಗುವಂತೆ ಶ್ರೀ ರಾಮಯಣ ದರ್ಶನಂ ಕೃತಿ ರಚಿಸಿದರು. ಅವರ ಸಾಹಿತ್ಯದಲ್ಲಿ ವಿಚಾರ ಕ್ರಾಂತಿ, ನಿರಂಕುಶ ಮತಿ ಹಾಗೂ ವಿಶ್ವ ಮಾನವ ಸಂದೇಶ ಎಂಬ ಮೂರು ಮಹಾನ್ ಸಂಗತಿಗಳು ಕಂಡುಬರುತ್ತವೆ.ಯಾರ ತೆಕ್ಕೆಗೂ ಸಿಗದ ಅದ್ಭುತ ವ್ಯಕ್ತಿತ್ವ ಕುವೆಂಪು ಅವರದು ಎಂದು ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಹೇಳಿದರು.

ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ “ಬೆಳದಿಂಗಳ ಸಾಹಿತ್ಯ ಚಿಂತನ-ಮಂಥನ ಕಾರ್ಯಕ್ರಮ” ದ ಒಂದನೇ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸಕರಾಗಿ ಆಗಮಿಸಿ ಕುವೆಂಪು ಅವರ ವಿಶ್ವಮಾನವ ಸಂದೇಶ ಮತ್ತು ವೈಚಾರಿಕತೆ ಎಂಬ ವಿಷಯದ ಬಗ್ಗೆ ಮಾತನಾಡಿದರು.

ಪ್ರಾಚೀನ ಕಾಲದ ಅಜ್ಞಾನ, ಮೌಢ್ಯಗಳು ಮಾನವ ಕುಲದ ಪ್ರತಿಯೊಂದರಲ್ಲೂ ಹೇಗೆ ತುಂಬಿಕೊಂಡಿತ್ತು ಎಂಬುದನ್ನು ಕುವೆಂಪು ಸಾಹಿತ್ಯದಲ್ಲಿ ಪ್ರಕಟಪಡಿಸಿದರು.ಭಾರತದಲ್ಲಿ ಕಾಲಾನುಕ್ರಮದಲ್ಲಿ ಇದ್ದ ಭ್ರಷ್ಟಾಚಾರ, ಪಕ್ಷಪಾತ, ಜಾತೀಯತೆಯಂಥವುಗಳನ್ನು ತಮ್ಮ ನಾಟಕಗಳಲ್ಲಿ ಬಿಂಬಿಸಿದ್ದಾರೆ. ಸ್ವಾಮಿ ವಿವೇಕಾನಂದರ ನಂತರ ನಮ್ಮ ಭಾರತಕ್ಕೆ ವಿಶ್ವ ಮಾನವತ್ವದ ರಸವನ್ನು ಉಣಬಡಿಸಿದ ಮಹಾನ್ ಕವಿ ಕುವೆಂಪು ಅವರು. ಅವರ ಒಂದು ಮಾತು ; ‘ಮಗು ಜನಿಸುವಾಗ ವಿಶ್ವಮಾನವನಾಗಿಯೇ ಜನಿಸುತ್ತದೆ. ಆದರೆ ಮೂರು, ಆರು, ಒಂಬತ್ತು ಹನ್ನೊಂದನೇ ದಿನಗಳ ಸಂಸ್ಕಾರದಿಂದಾಗಿ ಅವನನ್ನು ಮತೀಯ ಮನುಷ್ಯನನ್ನಾಗಿ ಮಾಡಿಬಿಡುತ್ತೇವೆ. ಅವನನ್ನು ಕುಲದ ಕೆಸರಲ್ಲಿ ಹೂತುಬಿಡುತ್ತೇವೆ ‘ ಎಂಬುದು ಎಷ್ಟೊಂದು ಸತ್ಯವಾದದ್ದು ಎಂಬುದನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಾಲಶೇಖರ ಬಂದಿ ಮಾತನಾಡಿ, ಕುವೆಂಪು ಅವರು ಕನ್ನಡಕ್ಕೆ ಸಿಗಲು ಕಾರಣೀಕರ್ತರಾದ ಇಂಗ್ಲೀಷ್ ಸಾಹಿತಿ ಕಸಿನ್ಸ್ ಅವರನ್ನು ನಾವು ಇಂದು ನೆನೆಯಬೇಕು ಎಂದರು

ಕುವೆಂಪು ಸಾಹಿತ್ಯದ ಮೇಲೆ ವಚನಗಳ ಪ್ರಭಾವ ಸಾಕಷ್ಟಾಗಿದೆ ಎಂಬುದನ್ನು ನಾವು ಕಾಣಬಹುದು ಎಂದು ಬಂದಿ ಹೇಳಿದರು.

ಜ್ಞಾನದೀಪ್ತಿ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಸ್ವಾಗತಿಸಿ, ಮಾತನಾಡಿ, ಸ್ಥಳೀಯ ಹಿರಿಯ ಸಾಹಿತಿಗಳಿಗೆ ವೇದಿಕೆಯನ್ನು ಕಲ್ಪಿಸಲು ಈ ಪ್ರತಿಷ್ಠಾನ ರಚಿಸಲಾಗಿದೆ. ಕಡಿಮೆಯಾಗುತ್ತಿರುವ ಓದಿನ ಹವ್ಯಾಸವನ್ನು ಹೆಚ್ಚಿಸಲು ಹಾಗೂ  ಸೃಜನಶಿಲತೆಯ ಸ್ವಾಭಾವಿಕ ಅವಶ್ಯಕತೆಗಾಗಿ ಇಂಥ ಸಾಹಿತ್ಯ ಕಾರ್ಯಕ್ರಮಗಳು ಅಗತ್ಯ. ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಯುಗದ ಕವಿ ಕುವೆಂಪು ಅವರ ಕುರಿತು ಇಂದಿನ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಶಿವರಾಜ ಕಾಂಬಳೆ ಪ್ರಾರ್ಥನೆ ಹಾಡಿದರು.

ನಿವೃತ್ತ ಉಪನ್ಯಾಸಕ ಎಸ್ ಎಮ್ ಕಮದಾಳ ಅವರು ಕಾರ್ಯಕ್ರಮ ಆಯೋಜಿಸಿದ್ದರು.

ಸಾಹಿತಿಗಳಾದ ಸಂಗಮೇಶ ಗುಜಗೊಂಡ, ಶಿವಾನಂದ ಬೆಳಕೂಡ, ಸಿದ್ರಾಮ ದ್ಯಾಗಾನಟ್ಟಿ,  ಬಸವರಾಜ ಹೂಗಾರ ಮುಂತಾದವರು ಭಾಗವಹಿಸಿದ್ದರು. ಸುರೇಶ ಲೆಂಕೆಪ್ಪನವರ ಕಾರ್ಯಕ್ರಮ ನಿರೂಪಿಸಿದರು.ಪ್ರತಿಷ್ಠಾನದ ಕಾರ್ಯದರ್ಶಿ ಎ ಎಚ್ ವಂಟಗೂಡಿ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group