ಸಿಂದಗಿ: ಕನ್ನಡ ಹೃದಯದ ಭಾಷೆ, ತಾಯಿ ಭಾಷೆಯಾಗಿದೆ ಮತ್ತು ತಾಯಿ ಭಾಷೆಯನ್ನು ಯಾವನು ಗೌರವಿಸುತ್ತಾನೋ ಅವನು ಜೀವನದಲ್ಲಿ ಉತ್ತಮವಾದದ್ದನ್ನು ಸಾಧಿಸುತ್ತಾನೆ. ಕನ್ನಡ ಭಾಷೆ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ ಎಂದು ಹ.ಮ. ಪೂಜಾರ ಹೇಳಿದರು.
ಪಟ್ಟಣದ ಲೊಯೋಲ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಅವರು ಮಾತನಾಡಿ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ಭಾಷೆ ಕನ್ನಡ. ಈ ಭಾಷೆಯನ್ನು ಮತ್ತಷ್ಟು ಶ್ರೀಮಂತ ಭಾಷೆಯನ್ನಾಗಿ ಮಾಡುವ ಜವಾಬ್ದಾರಿ ಕನ್ನಡಿಗರ ಮೇಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷ ಫಾದರ್ ಆಲ್ವಿನ್ ಡಿಸೋಜ ಮಾತನಾಡಿ, ಬುದ್ಧಿ ಬೆಳೆಯಲು ಎಲ್ಲಾ ಭಾಷೆಗಳು ಬೇಕು. ಆದರೆ ಭಾವನೆ ಮತ್ತು ಬುದ್ಧಿ ಇವುಗಳನ್ನು ಬೆಳೆಸಲು ಮಾತೃ ಭಾಷೆಯಿಂದ ಮಾತ್ರ ಸಾಧ್ಯವಾಗುತ್ತದೆ. ಭಾವನೆ ಮತ್ತು ಬುದ್ಧಿ ಎರಡು ಸಮವಾಗಿ ಬೆಳೆದಾಗ ಮಾತ್ರ ಬದುಕು ಸುಂದರವಾಗುತ್ತದೆ. ಸುಂದರ ಬದುಕಿಗೆ ಕಾರಣವಾದ ಮಾತೃಭಾಷೆಯನ್ನು,ಕನ್ನಡ ಭಾಷೆಯನ್ನು ಪ್ರೀತಿಸೋಣ, ಬೆಳೆಸೋಣ ಎಂದು ಹೇಳಿದರು.
ಶಾಲೆಯ ಪ್ರಾಚಾರ್ಯ ಫಾದರ್ ಲ್ಯಾನ್ಸಿ ಫರ್ನಾಂಡಿಸ್ ಮಾತನಾಡಿ, ಕನ್ನಡ ನಾಡು ವೀರರ, ಶೂರರ,ಧೀರರ ನಾಡು ಶ್ರೀಗಂಧದ ಬೀಡು, ಕವಿಪುಂಗವರ ಚೆಲುವ ಕನ್ನಡ ನಾಡು. ಚೆಲುವ ಕನ್ನಡ ನಾಡು ನುಡಿಯ ಸಮೃದ್ಧಿಗಾಗಿ ನಾವೆಲ್ಲರೂ ದುಡಿಯೋಣ ಎಂದು ನುಡಿದರು.
ವೇದಿಕೆಯ ಮೇಲೆ ಶಾಲೆಯ ಉಪ ಪ್ರಾಂಶುಪಾಲೆಯರಾದ ಸಿಸ್ಟರ್ ಗ್ರೇಸಿ, ಶಾಲೆಯ ಸಿರಿಗನ್ನಡ ಸಂಘದ ಕಾರ್ಯದರ್ಶಿ ಸಿದ್ದಪ್ಪ ಶಿಕ್ಷಕರು ಹಾಗೂ ಫಾತಿಮಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಅನೇಕ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಕನ್ನಡ ನಾಡಿನ ವೀರರ, ಶೂರರ,ಕವಿ ಪುಂಗವರ, ಸಂತರ ವೇಷಭೂಷಣ ಧರಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ ಶಿಕ್ಷಕ ಸಿದ್ದಪ್ಪ ನಿರೂಪಿಸಿದರು. ಶ್ರೀಮತಿ ಮಂಜುಳಾ ಸ್ವಾಗತಿಸಿದರು. ಬಸವಲಿಂಗ ಶಿಕ್ಷಕರು ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಕುಮಾರಿ ಫಾತಿಮಾ ವಂದಿಸಿದರು.