ಮೂಡಲಗಿ: ಸಮಾಜದಲ್ಲಿ ಉತ್ತಮ ಆರೋಗ್ಯವಿದ್ದಾಗ ಮಾತ್ರ ಸಕಲವನ್ನು ಸಾಧಿಸಲು ಸಾಧ್ಯವಾಗುವದು. ಆರೋಗ್ಯ ಕಡೆ ನಿಷ್ಕಾಳಜಿ ಹೊಂದಿ ಮಾನಸಿಕ, ದೈಹಿಕ ವಿವಿಧ ಕಸರತ್ತುಗಳನ್ನು ಮರೆತಾಗ ಜೀವನದಲ್ಲಿ ದೊಡ್ಡ ಮಟ್ಟದ ದಂಡ ಕಟ್ಟುವ ಅನಿವಾರ್ಯತೆಯಾಗುವದು ಎಂದು ಅಂತಾರಾಷ್ಟ್ರೀಯ ಐರನ್ ಮ್ಯಾನ್ ಪ್ರಶಸ್ತಿ ವಿಜೇತ ಸಿಪಿಐ ಶ್ರೀಶೈಲ ಬ್ಯಾಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸಾಧಕರ ಸನ್ಮಾನ ಹಾಗೂ ಐರನ್ ಮ್ಯಾನ್ ಪ್ರಶಸ್ತಿ ಪಡೆದ ಪ್ರಯುಕ್ತ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಕಲ ಜೀವರಾಶಿಗಳಿಗೆ ಆರೋಗ್ಯ ಮಹತ್ವ ಪಡೆದುಕೊಂಡಿದೆ. ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಮನಸ್ಸು, ಆರೋಗ್ಯ, ಆಲೋಚನೆಗಳು ಮಹತ್ವದ ಪಾತ್ರವಹಿಸುತ್ತವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಆಚಾರ ವಿಚಾರಗಳು ಹೊರಹೊಮ್ಮುತ್ತವೆ. ಶಿಕ್ಷಕ ಸಮುದಾಯವು ವಿದ್ಯಾರ್ಥಿ ದಿಸೆಯಲ್ಲಿಯೇ ಶಿಕ್ಷಣದ ಜೊತೆಯಲ್ಲಿ ಆರೋಗ್ಯ, ಆಚಾರ, ವಿಚಾರಗಳ ಕುರಿತು ವೈಚಾರಿಕ ಮನೋಭಾವ ಭಿತ್ತಿದಾಗ ಮಾತ್ರ ಭವಿಷ್ಯತ್ತಿನ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯವೆಂದು ಹೇಳಿದರು.
ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯದ ಜೊತೆಯಲ್ಲಿ ಸಕಲವನ್ನು ಪಡೆಯಲು ಸಾಧ್ಯವಾಗುವದು. ಆರೋಗ್ಯದಲ್ಲಿ ಏರುಪೇರಾದರೆ ಯಾವುದು ಶಾಶ್ವತವಲ್ಲ, ಪ್ರತಿಯೊಬ್ಬರಿಗೂ ಆರೋಗ್ಯಯುತ ಜೀವನ ಅತ್ಯವಶ್ಯಕವಾಗಿದೆ. ಶಿಕ್ಷಕ ಸಮುದಾಯವು ಉತ್ತಮ ದೈಹಿಕ ಆರೋಗ್ಯದ ಜೊತೆಯಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ. ಉತ್ತಮ ಪ್ರಜೆಗಳ ನಿರ್ಮಾಣದಲ್ಲಿ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯನ್ನಿಟ್ಟುಕೊಂಡು ಕಲಿಕಾ ಕಾರ್ಯದಲ್ಲಿ ತೊಡಗಬೇಕೆಂದರು.
ಈ ಸಂದರ್ಭದಲ್ಲಿ ಪಿಎಸ್ಐ ಹಾಲಪ್ಪ ಬಾಲದಂಡಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸನ್ನವರ ಮಾತನಾಡಿ, ಪ್ರಬುದ್ಧ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ, ಮಗುವಿನ ಶೈಕ್ಷಣಿಕ ಕಲಿಕೆಯ ಜೊತೆಗೆ ಆರೋಗ್ಯಯುತ ಶರೀರದ ಜೊತೆಗೆ ಮಾನಸಿಕವಾಗಿ ಸದೃಢರಾಗಲು ಸಹಾಯಕವಾಗುವದು ಎಂದು ಹೇಳಿದರು.
ಮೂಡಲಗ ಶೈಕ್ಷಣಿಕ ವಲಯದಲ್ಲಿ ಶೈಕ್ಷಣಿಕವಾಗಿ ಶ್ರೇಷ್ಠ ಕಾರ್ಯಗಳನ್ನು ಮಾಡಿರುವ ಶಿಕ್ಷಕರಿಗೆ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಹೊಸಯರಗುದ್ರಿಯ ದಿ. ಬಸಪ್ಪ ರುದ್ರಪ್ಪ ಹೊಸಮನಿ ಪ್ರತಿಷ್ಠಾನದ ಶ್ರೀಮತಿ ಟಿ.ಬಿ ಹೊಸಮನಿ ಕಾರ್ಯದರ್ಶಿ ಕಲ್ಲಪ್ಪ ಮಿರ್ಜಿನಾಯಕ ನೀಡಿದರು.
ಕಾರ್ಯಕ್ರಮದಲ್ಲಿ ಗೋಕಾಕ ಪ್ರಾಥಮಿಕ ಶಿಕ್ಷಕರ ಸಹಕಾರ ಪತ್ತಿನ ಸಂಘದ ಅಧ್ಯಕ್ಷ ವಾಯ್ ಬಿ ಪಾಟೀಲ, ಶಿಕ್ಷಕರ ಸಂಘಟನೆಯ ಎಲ್.ಎಮ್ ಬಡಕಲ್, ಎಮ್.ವಾಯ್ ಸಣ್ಣಕ್ಕಿ, ಎಸ್.ಎ ಕುರಣಗಿ, ಪಿಬಿ ಕುಲಕರ್ಣಿ, ಜಿ.ವಾಯ್ ಸಣ್ಣಕ್ಕಿ, ಬಿ.ಎಲ್ ನಾಯಿಕ, ಎಸ್.ಎಸ್ ಪಾಟೀಲ, ಇಸಿಒಗಳಾದ ಟಿ ಕರಿಬಸವರಾಜು, ಸತೀಶ್ ಬಿ.ಎಸ್, ಆರ್.ವಿ ಯರಗಟ್ಟಿ ಹಾಗೂ ಪ್ರಶ್ಸತಿ ಪುರಸ್ಕøತ ಶಿಕ್ಷಕರು, ಸಮೂಹ ವ್ಯಾಪ್ತಿಯ ಶಿಕ್ಷಕ ಬಳಗದವರು ಹಾಜರಿದ್ದರು.