ಕೇವಲ ಇಪ್ಪತ್ತೋ ಮೂವತ್ತೋ ಶೇಕಡಾ ಇರುವ ಒಂದು ಕೋಮಿನ ಜನರಿಗೆ ನೋವಾಗುತ್ತದೆ, ಅವರ ಮತಗಳು ಕೈ ಬಿಡುತ್ತವೆ ಎಂಬ ಕಾರಣದಿಂದ ಶೇಕಡಾ ಎಪ್ಪತ್ತರಷ್ಟು ಜನಸಂಖ್ಯೆ ಇರುವ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಬಹಿರಂಗವಾಗಿಯೇ ಧಕ್ಕೆ ತರುವ ಕಾಂಗ್ರೆಸ್ ನಾಯಕರ ಕಣ್ಣಲ್ಲಿ ಭಾರತದ ಹಿಂದೂಗಳು ಪರಮ ಮೂರ್ಖರಾಗಿ ಕಂಡಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಯಾಕೆಂದರೆ, ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂಗಳ ಕಣ್ಣಲ್ಲಿ ಮಣ್ಣೆರಚುತ್ತಲೇ ಬಂದಿದೆ ಆದರೆ ಹಿಂದೂಗಳಿಗೆ ಇನ್ನೂ ಬುದ್ಧಿ ಬಂದಿಲ್ಲವೆಂದರೆ ಅದಕ್ಕಿಂತ ವಿಪರ್ಯಾಸ ಬೇರೆ ಇರಲಿಕ್ಕಿಲ್ಲ. ಈ ಪಕ್ಷದ ನಾಯಕರು ಹೇಗೆ ವ್ಯವಸ್ಥಿತವಾಗಿ ಹಿಂದೂಗಳಿಗೆ ಮಂಕುಬೂದಿ ಎರಚಿದ್ದಾರೆಂದರೆ ಈ ಹಿಂದೂ ಎಂಬ ಬಕರಾ ಹಗಲು ಕಂಡ ಬಾವಿಯಲ್ಲಿ ತಾನೇ ಹೋಗಿ ರಾತ್ರಿ ಬೀಳಬೇಕು ಹಾಗೆ ಮಾಡಿದ್ದಾರೆ. ಇದೆಲ್ಲ ಹಗಲಿನಷ್ಟು ಸ್ಪಷ್ಟವಾಗಿದ್ದರೂ ಹಿಂದೂಗಳು ಎಚ್ಚತ್ತುಕೊಳ್ಳುತ್ತಿಲ್ಲ.
ಉದಾಹರಣೆಗೆ ನೋಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮದು ಮುಸ್ಲಿಮರ ಪಕ್ಷವೆಂದು ಬಹಿರಂಗವಾಗಿಯೇ ಹೇಳುತ್ತಾರೆ. ಈ ಸನಾತನಿಗಳನ್ನು ದೇಶದಿಂದ ಓಡಿಸಬೇಕು ಅನ್ನುತ್ತಾರೆ ! ಇದೇ ಮಾತನ್ನು ಆತ ಮುಸ್ಲಿಮರ ಬಗ್ಗೆ ಹೇಳಬಹುದೇ ? ಸಾಧ್ಯವೇ ಇಲ್ಲ. ಯಾಕೆಂದರೆ ಅವರಿಗೆ ಗೊತ್ತಿದೆ ಹಿಂದೂಗಳನ್ನು ಅವರ ತಾತನ ಕಾಲದಿಂದಲೂ ಒಡೆಯುತ್ತ, ನಾಸ್ತಿಕರನ್ನಾಗಿ ಮಾಡುತ್ತ ಮೂರ್ಖರನ್ನಾಗಿಸುತ್ತ ಬರಲಾಗಿದೆ. ಇವರಲ್ಲಿ ಏಕತೆ ಇಲ್ಲ. ಒಂದು ವೇಳೆ ಇವರು ಒಂದಾಗಲು ಹೊರಟರೂ ಇವರನ್ನು ಹೇಗೆ ಒಡೆಯಬೇಕೆಂಬುದು ಅವರಿಗೆ ಗೊತ್ತಿದೆ ಆದ್ದರಿಂದಲೇ ಅವರು ಹಿಂದೂಗಳ ಮತಗಳ ಬಗ್ಗೆ ಕಾಳಜಿ ಮಾಡುವುದಿಲ್ಲ. ಅವು ಎಷ್ಟು ಬರಬೇಕೋ ಅಷ್ಟು ಬಂದೇ ಬರುತ್ತವೆ ಅಂತ ಅವರಿಗೆ ಗೊತ್ತಿದೆ.
ಈಗ ರಾಮ ಮಂದಿರ ನಿರ್ಮಾಣ ಹಾಗೂ ಉದ್ಘಾಟನೆಯ ಸಂದರ್ಭದಲ್ಲಿ ಈ ಕಾಂಗ್ರೆಸ್ಸಿಗರು ಶ್ರೀ ರಾಮ ಮತ್ತು ಹಿಂದೂಗಳ ಬಗ್ಗೆ ಯಾವ ರೀತಿಯ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂಬುದೇ ಅವರ ಹಿಂದೂ ವಿರೋಧಿ ಮಾನಸಿಕತೆಯನ್ನು ತೋರುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮತಗಳು ಮಾತ್ರ ಬೇಕು. ಹಿಂದೂಗಳಿಗೆ ಏನಾದರೂ ಅವಮಾನಕಾರಿಯಾಗಿ ಮಾತನಾಡುವುದು ಅದರಿಂದ ವಿರೋಧ ಉಂಟಾದರೆ ತಾನೂ ಹಿಂದೂ ಎಂದು ತಿಪ್ಪೆ ಸಾರಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಹೊಸ ನಾಟಕವಾಗಿದೆ. ಆದರೆ ಇಂಥವರ ಮಾತುಗಳಿಗೆ ಚಪ್ಪಾಳೆ ಹೊಡೆಯುವ ಹಿಂದೂಗಳಿಗೆ ಮಾತ್ರ ತಾವು ಬಲೆಗೆ ಬಿದ್ದ ಕುರಿ ಎಂಬುದು ಅರ್ಥವಾಗುತ್ತಿಲ್ಲ.
ಶತಮಾನಗಳಿಂದ ಹಿಂದೂಗಳ ಮೇಲೆ ದರ್ಪ ದೌರ್ಜನ್ಯ ತೋರುತ್ತ ಶೋಷಣೆ ಮಾಡುತ್ತ ಬರಲಾಗಿದೆ, ಹಿಂದೂ ದೇವಸ್ಥಾನಗಳನ್ನು ಕೆಡವಲಾಗಿದೆ, ವಿರೋಧ ಮಾಡಿದವರನ್ನು ಕೊಲ್ಲಲಾಗಿದೆ, ಹೆಣ್ಣು ಮಕ್ಕಳ ಅತ್ಯಾಚಾರ ಮಾಡಲಾಗಿದೆ ಅದನ್ನೆಲ್ಲ ಸಹಿಸಿಕೊಂಡೂ ಅಖಂಡವಾಗಿ ನಿಂತಿರುವ ಸನಾತನ ಧರ್ಮದ ಅವಹೇಳನ ಹಿಂದೂ ನಾಯಕರಿಂದಲೇ ನಡೆದಿರುವುದು ಘೋರ ಅಪಚಾರ. ಇಂಥ ನಾಯಕರು ಚುನಾವಣೆಗಳಲ್ಲಿ ಆರಿಸಿ ಬರುತ್ತಿರುವುದು ಇನ್ನೂ ಘೋರ ಅಪಚಾರ. ಐನೂರು ವರ್ಷಗಳ ನಂತರ ರಾಮ ಮಂದಿರ ಹೋರಾಟಕ್ಕೆ ಜಯ ಸಿಕ್ಕು ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿಯಾದರೂ ಹಿಂದೂಗಳು ಎಚ್ಚತ್ತುಕೊಳ್ಳಬೇಕು. ಹಿಂದೂ ಧರ್ಮ ಹಲವಾರು ಜಾತಿಗಳಲ್ಲಿ ಹಂಚಿಕೆಯಾಗಿದೆ ಆದರೂ ಧರ್ಮ ಉಳಿಸುವ ನಿಟ್ಟಿನಲ್ಲಿ ಎಲ್ಲ ಜಾತಿಯವರೂ ಒಂದಾಗಬೇಕು. ನಮ್ಮಲ್ಲಿ ಇಲ್ಲದ ಬಡತನವನ್ನು ಎತ್ತಿ ತೋರುತ್ತ ಉಚಿತಗಳ ಆಮಿಷ ತೋರಿಸಿ ನಮ್ಮ ಧರ್ಮನಿಷ್ಠೆ, ಸನಾತನ ಭಕ್ತಿಯನ್ನು ನಗೆಪಾಟಲಿಗೆ ಈಡು ಮಾಡುತ್ತಿರುವ ಈ ವ್ಯವಸ್ಥಿತ ಸಂಚನ್ನು ಹಿಂದೂಗಳು ಮುರಿಯಬೇಕಿದೆ. ಈಗಲಾದರೂ ಒಂದಾಗಬೇಕಿದೆ. ಈವರೆಗೆ ಮೂರ್ಖರಾಗಿದ್ದು ಸಾಕು.
ಉಮೇಶ ಬೆಳಕೂಡ, ಮೂಡಲಗಿ
(ಹೊಸ ದಿಗಂತ ೨೫.೧.೨೦೨೪)