ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಹಾಸ್ಟೆಲ್ ಶಾಲಾ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ ಎಂಬ ಆರೋಪವನ್ನು ಕೇಳಿ ಬರುತ್ತದೆ. ಅದನ್ನು ಕೇಳಿ ವಸತಿ ಶಾಲಾ ಮಕ್ಕಳಿಗೆ ಸರಿಯಾದ ಊಟ ನೀಡಿ ಎಂದು ಹೇಳಲು ಹೋದ ಕರವೇ ಕಾರ್ಯಕರ್ತರ ಮೇಲೆಯೇ FIR ಹಾಕುವುದಾಗಿ ಬೀದರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಆವಾಜ ಹಾಕಿದ ಘಟನೆ ನಡೆದಿದೆ.
ಔರಾದ ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ವಸತಿ ಶಾಲೆ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಒಂದೇ ಸ್ಥಳದಲ್ಲಿದ್ದು ಇಬ್ಬರು ವಾರ್ಡನ್ ಗಳಿದ್ದರು ಕೂಡಾ ಅಧಿಕಾರಿಗಳ ನಿರ್ಲಕ್ಷ್ಯ ದಿಂದಾಗಿ ಊಟ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ.
ಇಲ್ಲಿಗೆ ಭೇಟಿ ನೀಡಿದ ಕರವೇ ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಮುಗ್ಗಲು ವಾಸನೆಯ ಅಕ್ಕಿ, ಕಳಿತ ಬಾಳೆಹಣ್ಣು, ವಾಸನೆಯುಕ್ತ ಹಾಲು, ಮಜ್ಜಿಗೆ ತಮಗೆ ನೀಡುತ್ತಿರುವುದಾಗಿ ಮಕ್ಕಳು ತೋರಿಸಿ ಹಾಸ್ಟೆಲಿನ ಕರ್ಮಕಾಂಡವನ್ನು ತೋರಿಸಿದರು.
ದರ್ಪ ತೋರಿದ ಸಮಾಜ ಕಲ್ಯಾಣಾಧಿಕಾರಿ:
ವಿದ್ಯಾರ್ಥಿಗಳಿಗೆ ಸಾಥ್ ನೀಡಿದ ಕರವೇ ಕಾರ್ಯಕರ್ತರು ಸಮಾಜ ಕಲ್ಯಾಣ ಅಧಿಕಾರಿ ಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಆ ಅಧಿಕಾರಿ ತಮ್ಮ ದರ್ಪ ತೋರಿದರು. ಕರೆ ಮಾಡಿದ ಕಾರ್ಯಕರ್ತರಿಗೇ ‘ ಯಾರು ನೀನು ಯಾರ ಅನುಮತಿ ಪಡೆದು ವಸತಿ ಶಾಲೆ ಒಳಗೆ ಹೊಗಿದ್ದೆ, ಮೊದಲು ನೀನು ಹೊರಗೆ ಹೋಗು ಇಲ್ಲವಾದರೆ FIR ಹಾಕುವುದಾಗಿ’ ಆವಾಜ ಹಾಕಿದ್ದಾರೆ.
ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟ ಹಾಕದೆ ವಸತಿ ಗೃಹದಲ್ಲಿ ಎಲ್ಲಾ ರೀತಿಯ ಸೌಲಭ್ಯವಿದ್ದರು ನೀಡದೆ ವಂಚಿಸುತಿರುವುದಲ್ಲದೆ ಅದನ್ನು ಪ್ರಶ್ನಿಸಿದವರ ವಿರುದ್ಧವೇ ಮಾತನಾಡಿ ತಮ್ಮ ಅಧೀನ ಅಧಿಕಾರಿಯ ರಕ್ಷಣೆಗೆ ಮುಂದಾದ ಸಮಾಜ ಕಲ್ಯಾಣ ಅಧಿಕಾರಿಯ ವಿರುದ್ದ ಈಗ ಕರವೇ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.
ಈ ಸಂದರ್ಭದಲ್ಲಿ ಕರವೇ ನಾರಾಯಣಗೌಡ ಬಣದ ಔರಾದ ತಾಲೂಕಾ ಅಧ್ಯಕ್ಷ ರಾಜಕುಮಾರ ಅವರು ಮಾತನಾಡಿ, ಇಲ್ಲಿನ ಮಕ್ಕಳಿಗೆ ಪೂರೈಸುವ ಅನ್ನದಲ್ಲಿ ನುಸಿ ಇವೆ, ಹಳಸಿದ ಮಜ್ಜಿಗೆ, ಹಾಲೋ ನೀರೋ ತಿಳಿಯದಂಥ ಹಾಲು ಕೊಡುತ್ತಿದ್ದಾರೆ. ಇವರಿಗೆ 70 ಲೀ. ಹಾಲು ಸಿಗುತ್ತದೆ ಅದು ಎಲ್ಲಿಗೆ ಹೋಗುತ್ತದೆ ? ನಾವು ಇಲ್ಲಿದ್ದಾಗಲೂ ಕೂಡ ನುಸಿ ಹತ್ತಿದ ಅವಲಕ್ಕಿ ಮಾಡಿದ್ದಾರೆ. ಈ ರೀತಿ ಇವರು ಮಕ್ಕಳ ಆರೋಗ್ಯದ ಜೊತೆ ಆಟವಾಡುತ್ತಿದ್ದಾರೆ ಎಂದರು.
ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಇಲ್ಲ, ಕುಡಿಯಲು ಫಿಲ್ಟರ್ ನೀರಿಲ್ಲ. ಈ ಬಗ್ಗೆ ನಾನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗೆ ಕರೆ ಮಾಡಿದಾಗ ಅವರು ಯಾರೋ ನೀನು ಎಂದು ಪ್ರಶ್ನೆ ಮಾಡಿದ್ದಲ್ಲದೆ, ಹಾಸ್ಟೆಲ್ ಗೆ ಬರಲು ನಿನಗೆ ಯಾರು ಪರ್ಮಿಶನ್ ಕೊಟ್ಟರು ಎಂದೆಲ್ಲ ರೋಪ್ ಹಾಕಿದರು. ಕಳ್ಳತನ ಮಾಡುವವರನ್ನು ಹಿಡಿಯಲು ನಾವು ಪರ್ಮಿಶನ್ ತಗೋಬೇಕಾ ಎಂದು ರಾಜಕುಮಾರ ಪ್ರಶ್ನೆ ಮಾಡಿದರು.
ತಕ್ಷಣವೇ ಮಕ್ಕಳೊಂದಿಗೆ ಪ್ರತಿಭಟನೆ ಮುಂದು ವರಿಸಿದ ಕರವೇ ಕಾರ್ಯಕರ್ತರು ಸರ್ಕಾರವನ್ನು ಎಚ್ಚರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈಗಲಾದರೂ ನೂತನವಾಗಿ ಅಧಿಕಾರ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿ ಅವರು ಕೂಡಲೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ. ಸಮಾಜಲ್ಯಾಣ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದಲ್ಲದೆ ಅಧಿಕಾರಿಗಳ ತಪ್ಪನ್ನು ಎತ್ತಿ ತೋರಿಸಿದ ಮಾಧ್ಯಮಗಳು ಹಾಗೂ ಕರವೇ ಕಾರ್ಯಕ್ರತರ ವಿರುದ್ಧವೇ FIR ಹಾಕುವುದಾಗಿ ಬೆದರಿಕೆ ಹಾಕಿದ್ದು ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವ ಕ್ರಮಕ್ಕೆ ಮುಂದಾಗುತ್ತದೆ ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ