ಮೈಸೂರು – ಮೈಸೂರು ಜಿಲ್ಲೆಯ ಕೆ.ಆರ್ ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ಹಿರಿಯ ಕವಿಗಳಾದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಪದ್ಮಶ್ರೀ ದೊಡ್ಡರಂಗೇಗೌಡ ಅವರುಗಳ ಜನ್ಮ ದಿನವನ್ನು ಆಚರಿಸಲಾಯಿತು.
ಹಿರಿಯ ಸಾಹಿತಿಗಳು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರು ಮಾತನಾಡಿ, ಡಾ.ದೊಡ್ಡರಂಗೇಗೌಡ ಅವರು ಕನ್ನಡ ಭಾವಗೀತೆಗಳ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಎರಡು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವ ಅವರು ಕನ್ನಡ ಪ್ರಗಾಥ (ಸಾನೆಟ್ ) ಶೈಲಿಯನ್ನು ಆರಂಭಿಸಿದರು.
ಚಿತ್ರರಚನೆಕಾರರಾಗಿ ಪರಸಂಗದ ಗೆಂಡೆತಿಮ್ಮ ,ಜನುಮದ ಜೋಡಿ ,ಏಳು ಸುತ್ತಿನ ಕೋಟೆ ಸೇರಿದಂತೆ ಅವರು ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಲನಚಿತ್ರಗಳಿಗೆ ಗೀತರಚನೆ ಮಾಡಿದ್ದಾರೆ. ಅವರ ಗೀತೆಗಳು ಚಿತ್ರರಸಿಕರ ಮನಗೆದ್ದಿವೆ ಎಂದು ಬಣ್ಣಿಸಿದರು.
ಅತ್ಯಂತ ಸರಳ ವ್ಯಕ್ತಿತ್ವದ, ಮಾನವೀಯ ಚಿಂತನೆಯ ಡಾ.ದೊಡ್ಡರಂಗೇಗೌಡರಿಗೆ ಅವರ ಗೀತರಚನೆಗಾಗಿ ನಾಲ್ಕು ಬಾರಿ ಕನ್ನಡ ಚಲನಚಿತ್ರರಂಗರ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ ಗೌರವ ದೊರೆತಿವೆ. ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದವರು ವಿವರಿಸಿದರು.
ಫೌಂಡೇಶನ್ ನ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮಾತನಾಡಿ, ಜಿ.ಎಸ್.ಶಿವರುದ್ರಪ್ಪ ಅವರು ಕನ್ನಡ ಕಾವ್ಯಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಡನಾಡಿನ ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾದ ಮೂರು ಮಂದಿ ಕವಿಗಳಲ್ಲಿ ಅವರೂ ಒಬ್ಬರು.ಅವರು ಸಾವಿರಾರು ಕವನಗಳನ್ನು ಕಾರ್ಯಕ್ಷೇತ್ರಕ್ಕೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಸಂಸ್ಥೆಯ ಪದಾಧಿಕಾರಿಗಳಾದ ಕೃಷ್ಣಯ್ಯ, ಗಿರೀಶ್, ಚೆಲುವ, ಆದಿ,ಜಗದೀಶ್, ಪ್ರಸನ್ನ ,ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.