ಸಿಂದಗಿ: ಸ್ವಚ್ಛ-ಸುಂದರ ಹಸುರಿನಿಂದ ಕೂಡಿದ ಪರಿಸರ ಸ್ವಾಸ್ಥ್ಯ ಸಮಾಜವನ್ನು ರೂಪಿಸಲು ಸಹಕಾರಿಯಾಗಿದೆ. ಅಂತಹ ಪರಿಸರವನ್ನು ರೂಪಿಸಲು ಗಿಡ-ಮರಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದು ಗಬಸಾವಳಗಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು, ಸಂಪನ್ಮೂಲ ವ್ಯಕ್ತಿ ಎಂ ಬಿ. ಯಡ್ರಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗಬಸಾವಳಗಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ 32ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಮಟ್ಟದಲ್ಲಿ ಕೈಗಾರಿಕಾಕರಣ ನಗರೀಕರಣ ಮುಂತಾದವುಗಳಿಂದ ಓಜೋನ್ ಪದರ ಹಾಳಾಗಿ ನೇರಳಾತೀತ ಕಿರಣಗಳು ಜಾಗತಿಕ ತಾಪಮಾನವನ್ನು ಹೆಚ್ಚಿಸಿ ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ. ಇವೆಲ್ಲವುಗಳಿಗೂ ಪರಿಹಾರವೆಂದರೆ ಊರಿಗೊಂದು ವನ ಮನೆಗೊಂದು ಮರ ಎನ್ನುವ ಧ್ಯೇಯದೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದರು.
ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಮಾತನಾಡಿ, ಮಕ್ಕಳ ಜನ್ಮ ದಿನದಂದು ಸಾವಿರಾರು ರೂಪಾಯಿ ಖರ್ಚು ಮಾಡಿ ಮರೆತುಬಿಡುವ ಪಾಲಕರಾದ ನಾವು ಮಕ್ಕಳ ಜನ್ಮ ದಿನದಂದು ಪ್ರತಿ ವರ್ಷಕ್ಕೊಂದು ಸಸಿನೆಟ್ಟು ಹುಟ್ಟುಹಬ್ಬವನ್ನು ಸಾರ್ಥಕಗೊಳಿಸಬೇಕು. ಶಾಲೆಯ ಮಕ್ಕಳು ತಾವು ನೆಟ್ಟ ಸಸಿಗಳ ಬುಡದಲ್ಲಿ ಊಟ ಮಾಡಿದಾಗೊಮ್ಮೆ ಕೈತೊಳೆದುಕೊಂಡರೂ ಸಾಕು. ಸಸ್ಯಗಳು ಬೆಳೆದು ಹೆಮ್ಮರವಾಗಿ ನೆರಳು, ಗಾಳಿ, ಹೂವು, ಹಣ್ಣುಗಳನ್ನು ಕೊಟ್ಟು ನಮ್ಮನ್ನು ಪೋಷಿಸುತ್ತವೆ ಎಂದರು.
ಇನ್ನೋರ್ವ ಸಂಚಾಲಕ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ ಗಿಡ ಮರಗಳ ನಾಶದಿಂದ ಆಕ್ಸಿಜನ್ ಕೊರತೆ ಉಂಟಾಗಿ ಮುಂದೊಂದು ದಿನ ಆಕ್ಸಿಜನ್ ಸಿಲಿಂಡರಗಳನ್ನು ಬೆನ್ನಿಗೆ ಹಾಕಿಕೊಂಡು ತಿರುಗುವ ಕಾಲ ಬಂದರೂ ಆಶ್ಚರ್ಯವಿಲ್ಲ ಕಾರಣ ಅರಣ್ಯ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೇಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಅಫಜಲ್ಪುರ ತಾಲೂಕಿನ ಉದಯವಾಣಿ ಪತ್ರಕರ್ತ ಮಲ್ಲಿಕಾರ್ಜುನ ಹಿರೇಮಠ, ಶಿಕ್ಷಕಿಯರಾದ ಎಂ,ಎಸ್ ವಾಗ್ಮೋರೆ,ಮಲ್ಲಮ್ಮ ಬಿರಾದಾರ, ಜಿ ಬಿ ಕೋಳಿ, ವಿ ಬಿ ಐರೋಡಗಿ, ಶಿಕ್ಷಕರಾದ ಎಸ್ ಬಿ ಗುತ್ತೇದಾರ ಆಯ್ ಎ.ಮಕಂದಾರ ಪಟ್ಟಣಶೆಟ್ಟಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.
ವಿದ್ಯಾರ್ಥಿನಿ ಸವಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು ಕುಮಾರಿ ಅಶ್ವಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.