Homeಸುದ್ದಿಗಳುಏಕತೆ ಸಾರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ

ಏಕತೆ ಸಾರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿ

ಮೂಡಲಗಿ: ದೇಶದ ಪ್ರಜೆಗಳು ಭಾರತದ ಸಂವಿಧಾನ ನೀಡಿರುವ ಶಾಸನಬದ್ಧ ಹಕ್ಕುಗಳ ಸದುಪಯೋಗದ ಜೊತೆಗೆ ಶಾಸನಬದ್ಧ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ಇಲ್ಲಿಯ ಶ್ರೀನಿವಾಸ ಸ್ಕೂಲ್‍ನಲ್ಲಿ ಬುಧವಾರ ಆಚರಿಸಿದ 73ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಮತ್ತು ಏಕತೆಯನ್ನು ಸಾರುವ ಭಾರತದ ಸಂವಿಧಾನವು ವಿಶ್ವದಲ್ಲಿಯೇ ಮಾದರಿ ಎನಿಸಿದೆ ಎಂದರು.

ಇಂದಿನ ಮಕ್ಕಳು ನಾಳಿನ ದೇಶದ ಶ್ರೇಷ್ಠ ಪ್ರಜೆಗಳಾಗುತ್ತಿದ್ದು ದೇಶದ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಶ್ರಮಿಸಿದ ಅನೇಕ ನಾಯಕರ ಬಗ್ಗೆ ಮಕ್ಕಳು ಓದಿ ತಿಳಿದುಕೊಳ್ಳಬೇಕು. ಯಾವುದೆ ಉನ್ನತ ಹುದ್ದೆಯಲ್ಲಿದ್ದರೂ ಸಹ ದೇಶದ ಬಗ್ಗೆ ಅಭಿಮಾನ ಇರಬೇಕು ಎಂದರು.

ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ ಪಾಲನೆ, ಶಿಕ್ಷಣ ಪಡೆಯುವುದಕ್ಕೆ ಸಂವಿಧಾನವು ಪ್ರತಿ ಪ್ರಜೆಗೂ ಹಕ್ಕನ್ನು ನೀಡಿದೆ. ಅದರೊಂದಿಗೆ ದೇಶದ ಸಂಪನ್ಮೂಲ ಕಾಪಾಡುವುದು, ರಾಷ್ಟ್ರಗೀತೆ, ರಾಷ್ಟ್ರಧ್ವಜ ಗೌರವಿಸುವುದು, ಸರ್ಕಾರದ ನಿಯಮ, ಸಂವಿಧಾನದ ಆದರ್ಶಗಳನ್ನು ವಿಧೆಯತೆಯಿಂದ ಪಾಲಿಸುವುದು ಪ್ರತಿ ಪ್ರಜೆಯಿಂದ ಆಗಬೇಕು ಎಂದರು.

ಮಹಾತ್ಮಾ ಗಾಂಧೀಜಿ, ಸುಭಾಷಚಂದ್ರ ಬೋಸ್, ಭಗತಸಿಂಗ್, ರಾಜಗೋಪಾಲಚಾರ್ಯ, ಜವಾಹರಲಾಲ ನೆಹರು, ವಲ್ಲಭಬಾಯ ಪಟೇಲ, ಕಿತ್ತೂರ ರಾಣಿ ಚನ್ನಮ್ಮ, ರಾಣಿ ಝಾನ್ಸಿಬಾಯಿ ಲಕ್ಷ್ಮೀಭಾಯಿ ಸೇರಿದಂತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಮಹಾನ್ ನಾಯಕರನ್ನು ಸರ್ವಕಾಲಿಕವಾಗಿ ಸ್ಮರಿಸಬೇಕು ಎಂದರು.

ವಿದ್ಯಾರ್ಥಿಗಳಾದ ಅಭಿನಯ, ಶಿವಮೂರ್ತಿ, ಮಲ್ಲಿಕಾರ್ಜುನ, ಪ್ರಣವಿ, ಸಾಧನಾ, ಕಾರ್ತಿಕ ಹಾಗೂ ಫಾತಿಮಾ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಶಾಲೆಯ ಆಡಳಿತಾಧಿಕಾರಿ ವೆಂಕಟೇಶ ಪಾಟೀಲ ಹಾಗೂ ಪ್ರಾಚಾರ್ಯ ಮನೋಜ ಭಟ್ ವೇದಿಕೆಯಲ್ಲಿದ್ದರು.

ವೆಂಕಟೇಶ ಹಾಗೂ ಹನಮಂತ ಸೋರಗಾವಿ ಅವರು ದೇಶಭಕ್ತಿ ಹಾಡುಗಳನ್ನು ಸುಶ್ರಾವ್ಯವಾಗಿ ಗಾಯನ ಮಾಡಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಲೇಝಿಮ್ ಕವಾಯತು ಎಲ್ಲರ ಗಮನಸೆಳೆಯಿತು.

ಶ್ರೀವತ್ಸ ಸ್ವಾಗತಿದರು, ಪ್ರೀತಮ ನಿರೂಪಿಸಿದರು, ಪ್ರಥಮ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group