Homeಸುದ್ದಿಗಳುಕನ್ನಡದ ಕವಿ ಮನಸುಗಳನ್ನು ಸೇರಿಸುವ ವಿನೂತನ ಗೃಹ ಪ್ರವೇಶ-ಡಾ. ಬಸು ಬೇವಿನಗಿಡದ

ಕನ್ನಡದ ಕವಿ ಮನಸುಗಳನ್ನು ಸೇರಿಸುವ ವಿನೂತನ ಗೃಹ ಪ್ರವೇಶ-ಡಾ. ಬಸು ಬೇವಿನಗಿಡದ

ಮುನವಳ್ಳಿ: ಕನ್ನಡದ ಕವಿ ಮನಸುಗಳನ್ನು ಒಂದೆಡೆ ಸೇರಿಸಿ, ಸಾಹಿತ್ಯಿಕ ಸದಭಿರುಚಿ ಮೂಲಕ ವಿನೂತನವಾಗಿ ಗೃಹ ಪ್ರವೇಶ ಮಾಡುವುದರ ಮುಖಾಂತರ ಕನ್ನಡಪರ ಕಾಳಜಿಯನ್ನು ಪ್ರತಿಬಿಂಬಿಸಿದ್ದಾರೆ ಎಂದು ಧಾರವಾಡ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಹೇಳಿದರು.

ಅವರು ಕವಿ ನಾಗೇಶ್ ಜೆ. ನಾಯಕರ ‘ಅವ್ವ’ ಗೃಹ ಪ್ರವೇಶದ ನಿಮಿತ್ತ ಹಮ್ಮಿಕೊಳ್ಳಲಾದ ಕವಿಗೋಷ್ಠಿ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅವ್ವನ ನೆರಳಿನಲ್ಲಿ ಅರಳಿ ನಿಂತಿರುವ ಕವಿಯೊಬ್ಬ ಇಂತಹ ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮುಖಾಂತರ ಇತರ ಸಾಹಿತಿಗಳಿಗೆ ಮಾದರಿಯಾಗಿ ನಿಂತಿದ್ದಾರೆ. ನಾಡು-ನುಡಿ ಅಭಿವೃದ್ಧಿಗೆ ಇಂತಹ ಸೃಜನಶೀಲ ಕಾರ್ಯಗಳು ಅಗತ್ಯ ಎಂದು ನುಡಿದರು. ಮುಖ್ಯ ಅತಿಥಿಯಾಗಿ ಕನಕಗಿರಿಯ ಗಝಲ್ ಕವಿ ಅಲ್ಲಾಗಿರಿರಾಜ್ ಮಾತನಾಡಿ ಕವಿಗಳು ಬದ್ದತೆಯನ್ನು ಇಟ್ಟುಕೊಳ್ಳಬೇಕು, ಪ್ರಸ್ತುತ ಸಂದರ್ಭಕ್ಕೆ ಪ್ರತಿಸ್ಪಂದಿಸಬೇಕು. ಪ್ರಶಸ್ತಿ, ಸನ್ಮಾನಗಳಿಗೆ ಮಾರುಹೋಗದೆ ಜನಸಾಮಾನ್ಯನ ನಾಲಿಗೆಯ ಮೇಲೆ ಕವಿತೆ ಉಳಿಯುವಂತೆ ಕಾವ್ಯ ರಚಿಸಬೇಕು ಎಂದು ಹೇಳಿದರು.

ಸವದತ್ತಿ ಘಟಕದ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಜಿ. ವಾಯ್. ಕರಮಲ್ಲಪ್ಪನವರ ಮಾತನಾಡಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುತ್ತಿರುವ ನಾಗೇಶ್ ಮನೆ ಪ್ರವೇಶದಂದು ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸವದತ್ತಿ ತಾಲೂಕಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ವಾಯ್. ಎಮ್. ಯಾಕೊಳ್ಳಿ ಮಾತನಾಡಿ, ನಾಗೇಶ್ ನಾಯಕರ ಅಪ್ಪಟ ಕನ್ನಡಪ್ರೀತಿಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಅವರ ಅಭಿಮಾನಕ್ಕೆ ಬಂದ ಎಲ್ಲ ಕವಿಗಳು ಒಳ್ಳೆಯ ಕವಿತೆ ವಾಚಿಸಿದ್ದಾರೆ. ಅವ್ವನ ಮಡಿಲಿನಲ್ಲಿ ಕಾವ್ಯದ ಹೊಳೆ ಹರಿದಿದೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಬಿ. ಎ. ಶೆಟ್ಟೆಪ್ಪನವರ ಹಾಗೂ ಅಭಿಯಂತರ ಕೃಷ್ಣರೆಡ್ಡಿ ಗಣಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

ಕವಿಗೋಷ್ಠಿಯಲ್ಲಿ ಪ್ರಕಾಶ್ ಕಡಮೆ, ಆನಂದ ಭೋವಿ, ವಾಯ್. ಬಿ. ಕಡಕೋಳ, ಶೇಖರ ಹಾದಿಮನಿ, ಹಿಪ್ಪರಗಿ ಸಿದ್ಧರಾಮ, ಎಫ್. ಎಲ್. ಮದಹಳ್ಳಿ, ಆಶಾ ಪರೀಟ್, ಬಿ. ಎಮ್. ಬಾವಾಖಾನ್, ಜಗದೀಶ ಸಂಗನ್ನವರ, ಸುನಂದಾ ಭರಮನಾಯ್ಕರ್, ಜ್ಯೋತಿ ಮಾಳಿ, ಇಬ್ರಾಹಿಂ ಚಾಂದಖಾನವರ, ಎಮ್. ಡಿ. ಬಾವಾಖಾನ್, ಶಿವಾನಂದ ಉಳ್ಳಿಗೇರಿ, ದೇವೇಂದ್ರ ಕಮ್ಮಾರ, ಆನಂದ ಪಾಟೀಲ, ಬಿ. ವಿ. ಪತ್ತಾರ, ಬಿ. ಎಮ್. ಬಿರಾದಾರ, ಧಾರವಾಡದ ದ್ಯಾವನೂರು, ಸಂಗೀತಾ ತಮ್ಮ ಕವಿತೆ ವಾಚಿಸಿದರು. ಪ್ರೀತಿ ಕದಂ ಪ್ರಾರ್ಥಿಸಿದರು. ನಾಗೇಶ್ ನಾಯಕ ಸ್ವಾಗತಿಸಿದರು. ರಮೇಶ್ ತಳವಾರ ವಂದಿಸಿದರು. ಕವಿ ವಿಠಲ ದಳವಾಯಿ ನಿರೂಪಿಸಿದರು.

RELATED ARTICLES

Most Popular

error: Content is protected !!
Join WhatsApp Group